ನಕ್ಸಲರಿಂದ ತಂದೆ ಹತ್ಯೆ, ಸ್ಕಾಲರ್ಶಿಪ್ನಲ್ಲಿ ಓದು, ಈಗ ನ್ಯಾಷನಲ್ ರೆಕಾರ್ಡ್ ಬ್ರೇಕರ್
ರಾಂಚಿ, ಜೂನ್ 10: ಜಾರ್ಖಂಡ್ ರಾಜ್ಯದ ಗುಬ್ಲಾ ಮೂಲದ ಅಥ್ಲೀಟ್ ಸುಪ್ರಿತಿ ಕಚ್ಚಪ್ ಗುರುವಾರ ಹರಿಯಾಣದ ಪಂಚಕುಲದಲ್ಲಿ ನಡೆದ ಖೇಲೋ ಇಂಡಿಯಾದ ಯೂತ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನ ಅಂಡರ್ 18 3000 ಮೀಟರ್ ವಿಭಾಗದಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ.
ಗುಮ್ಲಾ ಜಿಲ್ಲೆಯ ಬುರ್ಹು ಗ್ರಾಮದ ಸುಪ್ರಿತಿ 9 ನಿಮಿಷ 46.14 ಸೆಕೆಂಡ್ಗಳಲ್ಲಿ ತಲುಪುವ ಮೂಲಕ 2017ರಲ್ಲಿ ತಮಿಳುನಾಡಿನಲ್ಲಿ ನಡೆದಿದ್ದ ಜೂನಿಯರ್ ವುಮೆನ್ಸ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ 9 ನಿಮಿಷ 50.54 ಸೆಕೆಂಡ್ಗಳಲ್ಲಿ ನಿರ್ಮಿಸಿದ್ದ ದಾಖಲೆಯನ್ನು ಬ್ರೇಕ್ ಮಾಡಿದ್ದರು. ಸುಪ್ರಿತಿ 2020ರಲ್ಲಿ ಗುವಾಹಟಿಯಲ್ಲಿ ನಡೆದಿದ್ದ ಖೇಲೋ ಇಂಡಿಯಾ ಯೂತ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆಲ್ಲುವ ಮೂಲಕ ಬೆಳಕಿಗೆ ಬಂದಿದ್ದರು. ನಂತರ 2021ರಲ್ಲಿ 36ನೇ ಜೂನಿಯರ್ ವುಮೆನ್ಸ್ ನ್ಯಾಷನಲ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಗೆದ್ದಿದ್ದರು.
ಇದೀಗ ಸುಪ್ರಿತಿ ಗುರುವಾರ 3000 ಮೀಟರ್ ಓಟದಲ್ಲಿ ನ್ಯಾಷನಲ್ ರೆಕಾರ್ಡ್ ಬ್ರೇಕ್ ಮಾಡುವ ಮೂಲಕ ಕ್ರೀಡಾಪ್ರೇಮಿಗಳ ಮನಸ್ಸು ಗೆದ್ದಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಸುಪ್ರಿತಾ ಕಚ್ಚಪ್ ವೈಯಕ್ತಿಕ ಜೀವನ ಮಾತ್ರ ಆಕೆಯ ಕ್ರೀಡಾ ಯಶಸ್ಸಿನಷ್ಟು ಸುಖಮಯವಾಗಿಲ್ಲ. ಸುಪ್ರಿತಿ ಹೆಜ್ಜೆಯಿಡುವುದನ್ನು ಕಲಿಯುವ ಮುನ್ನವೇ ತಂದೆಯನ್ನು ಕಳೆದುಕೊಂಡಿದ್ದರು. ಅವರ ತಾಯಿಯ ಮಡಿಲಲ್ಲಿ ತನ್ನ ಐವರು ಸಹೋದರ- ಸಹೋದರಿಯರೊಂದಿಗೆ ಬಹಳ ಕಷ್ಟದ ಜೀವನದಲ್ಲಿ ಬೆಳಿದಿದ್ದಾರೆ.
|
ನಕ್ಸಲ್ ದಾಳಿಯಲ್ಲಿ ತಂದೆ ಸಾವು
ವೃತ್ತಿಯಲ್ಲಿ ಆರ್ಎಂಪಿ ವೈದ್ಯರಾಗಿದ್ದ ಸುಪ್ರಿತಾ ತಂದೆ ರಾಮಸೇವಕ್ ಓರಾನ್, ಇತರ ನಾಲ್ಕು ಗ್ರಾಮಸ್ಥರೊಂದಿಗೆ ಹತ್ತಿರದ ಹಳ್ಳಿಯ ರೋಗಿಯ ಮನೆಗೆ ಹೋಗಿದ್ದರು. ಮರುದಿನ, ಓರಾನ್ ಮತ್ತು ಜೊತೆಗಿದ್ದವರು ಶವವಾಗಿ ಪತ್ತೆಯಾಗಿದ್ದಾರೆ. ನಕ್ಸಲರು ಇವರನ್ನು ಗುಂಡು ಹಾರಿಸಿ ಕೊಂದು ಮರಗಳಿಗೆ ಕಟ್ಟಿಹಾಕಿದ್ದರು. ಆ ಸಂದರ್ಭದಲ್ಲಿ ಸುಪ್ರಿತಿ ಕಚ್ಚಪ್ ಇನ್ನೂ ಶಿಶುವಾಗಿದ್ದರು ಎಂದು ಅವರ ತಾಯಿ ಬಾಲಮತಿ ದೇವಿ ಮಾಧ್ಯಮಕ್ಕೆ ತಮ್ಮ ಮಗಳ ಸಾಧನೆಯ ಬಗ್ಗೆ ಹೇಳುವಾಗ ಭಾವುಕರಾಗಿ ತಿಳಿಸಿದರು.
ಚಿಕ್ಕಂದಿನಿಂದಲೂ ಕ್ರೀಡೆಯಲ್ಲಿ ಅಪಾರ ಆಸಕ್ತಿಯುಳ್ಳವರಾಗಿದ್ದ ಸುಪ್ರಿತಿ, ರನ್ನಿಂಗ್ನಲ್ಲಿ ಬಹಳ ಆಸಕ್ತಿ ಉಳ್ಳವರಾಗಿದ್ದರು. ಅವರು ಮೊದಲು ನೂಕರಡಿಪ್ಪ ಚೈನ್ಪುರನಲ್ಲಿ ಶಾಲೆಗೆ ಸೇರಿಕೊಂಡಿದ್ದರು. ಅಲ್ಲಿ ಅವರು ಮಣ್ಣಿನ ಟ್ರ್ಯಾಕ್ನಲ್ಲಿ ಓಡುವುದನ್ನು ಆರಂಭಿಸಿದರು. ನಂತರ ಸ್ಕಾಲರ್ಶಿಪ್ ಪಡೆದು ಸೇಂಟ್ ಪ್ಯಾಟ್ರಿಕ್ಸ್ ಶಾಲೆಗೆ ಸೇರಿಕೊಂಡರು. ಅಲ್ಲಿ ಶಾಲಾ ಸ್ಪರ್ಧೆಯೊಂದರಲ್ಲಿ ಕೋಚ್ ಪ್ರಭಾತ್ ರಂಜನ್ ತಿವಾರಿ ಕಣ್ಣಿಗೆ ಬಿದ್ದರು. 2015ರಲ್ಲಿ ತಿವಾರಿ, ಸುಪ್ರಿತಿಯನ್ನು ತಮ್ಮ ಜವಾಬ್ದಾರಿಗೆ ತೆಗೆದುಕೊಂಡು, ಗುಮ್ಲಾದಲ್ಲಿರುವ ಜಾರ್ಖಂಡ್ ಸ್ಪೋರ್ಟ್ಸ್ ಟ್ರೈನಿಂಗ್ ಸೆಂಟರ್ಗೆ ಕರೆದುಕೊಂಡು ಹೋದರು.
|
400 ಮೀಟರ್ನಿಂದ 3000ಕ್ಕೆ ಬದಲಾವಣೆ
" ನಾವು ಸಾಮಾನ್ಯವಾಗಿ ಬುಡಕಟ್ಟು ಪ್ರತಿಭೆಗಳನ್ನು ಗುರುತಿಸಲು ಅಂತರ ಶಾಲಾ ಸ್ಪರ್ಧೆಗಳಿಗೆ ಹೋಗುತ್ತೇವೆ. ಏಕೆಂದರೆ ಅವರು ನೈಸರ್ಗಿಕ ಸಹಿಷ್ಣುತೆಯ ವಿಷಯದಲ್ಲಿ ತುಂಬಾ ಅತ್ಯುತ್ತಮವಾಗಿರುತ್ತಾರೆ. ಸುಪ್ರಿತಿ ಮೊದಲು 400 ಮೀಟರ್ ಮತ್ತು 800 ಮೀಟರ್ನಲ್ಲಿ ಸ್ಪರ್ಧಿಸುತ್ತಿದ್ದಳು. ಆದರೆ ನಾವು ದೂರದ ಓಟಕ್ಕಾಗಿ ಪುನರಾವರ್ತನೆ ಪರೀಕ್ಷೆಗಳನ್ನು ಕೈಗೊಂಡಾಗ, ಅವಳ ಹೃದಯ ಬಡಿತ ಹೆಚ್ಚಾಗಲಿಲ್ಲ. ನಾನು ಅವಳನ್ನು 3,000 ಮೀಟರ್ ಸ್ಪರ್ಧೆಗಳಿಗೆ ಬದಲಾಯಿಸುವ ಮೊದಲು 1,500 ಮೀ ಓಡಲು ಅವಕಾಶ ಮಾಡಿಕೊಟ್ಟಿದ್ದೆ. ಏಕೆಂದರೆ ಅವಳ ದೇಹವು ಮಾನಸಿಕವಾಗಿ ಮತ್ತು ದೈಹಿಕವಾಗಿ ಹೆಚ್ಚು ದೂರದ ಸ್ಪರ್ಧೆಗಳಿಗೆ ಹೊಂದಿಕೊಳ್ಳಬೇಕೆಂದು ನಾವು ಬಯಸಿದ್ದೆವು" ಎಂದು ತಿವಾರಿ ಹೇಳಿದರು.
|
ಪ್ರತಿಭಾ ತೊಪ್ಪೊರಿಂದ ತರಬೇತಿ
2016ರಲ್ಲಿ ಸುಪ್ರಿತಿ ವಿಜಯವಾಡದಲ್ಲಿ ಜೂನಿಯರ್ ಅಥ್ಲೀಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ ತಲುಪಿದ್ದರು. 3000 ಮೀಟರ್ಗೆ ಬದಲಾದ ನಂತರ 2018ರಲ್ಲಿ ಭೂಪಾಲ್ನಲ್ಲಿರುವ ಭಾರತೀಯ ಮಿಡಲ್ ಅಂಡ್ ಲಾಂಗ್ ಡಿಸ್ಟಾನ್ಸ್ ಅಕಾಡೆಮಿಗೆ ಆಯ್ಕೆಯಾದರು. ಅಲ್ಲಿ ಮಾಜಿ ರಾಷ್ಟ್ರೀಯ ಬೆಳ್ಳಿಪದಕ ವಿಜೇತೆ ಪ್ರತಿಭಾ ಟೊಪ್ಪೊ ಅವರ ಗರಡಿಯಲ್ಲಿ ತರಬೇತಿ ಪಡೆಯಲಾರಂಭಿಸಿದರು.
ಸುಪ್ರಿತಿ 2019ರಲ್ಲಿ ಅವರು ವೃತ್ತಿ ಜೀವನದ ಮೊದಲ ಪದಕ ಗೆದ್ದರು. ಮಥುರಾದಲ್ಲಿ ನಡೆದ ರಾಷ್ಟ್ರೀಯ ಕ್ರಾಸ್ ಕಂಟ್ರಿ ಚಾಂಪಿಯನ್ಶಿಪ್ನಲ್ಲಿ 2,000 ಮೀಟರ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಅದೇ ವರ್ಷ, ಅವರು ಗುಂಟೂರಿನಲ್ಲಿ ನಡೆದ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ 3,000 ಮೀಟರ್ ಕಂಚಿನ ಪದಕ ಗೆದ್ದಿದ್ದರು. ಕಳೆದ ವರ್ಷ ಗುವಾಹಟಿಯಲ್ಲಿ ನಡೆದಿದ್ದ ಜೂನಿಯರ್ ಅಥ್ಲೀಟ್ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಭೋಪಾಲ್ನಲ್ಲಿ ನಡೆದಿದ್ದ 3000 ಮತ್ತು 5000 ಮೀಟರ್ನಲ್ಲಿ ಕಂಚು ಗೆದ್ದಿದ್ದರು.
ದೇಶಕ್ಕಾಗಿ ಪದಕಗಳನ್ನು ತರುವ ಗುರಿ
ಬುಡಕಟ್ಟು ಸಮೂದಾಯದಿಂದ ಹಂತ ಹಂತವಾಗಿ ರಾಷ್ಟ್ರಮಟ್ಟದಲ್ಲಿ ಹೆಸರುಗಳಿಸುತ್ತಿರುವ ಸುಪ್ರಿತಿಗೆ ಭಾರತೀಯ ಸ್ಟೀಪಲ್ ಚೇಸ್ ದಾಖಲೆ ವೀರ ಅವಿನಾಶ್ ಸಬ್ಲೆ ರೋಲ್ ಮಾಡೆಲ್ ಎಂದು ತಿಳಿಸಿದ್ದಾರೆ. " ಅವರೂ(ಅವಿನಾಶ್) ಕೂಡ ತುಂಬಾ ಬಡ ಕುಟುಂಬದಿಂದ ಬಂದಿದ್ದಾರೆ, ಅದಕ್ಕಾಗಿಯೇ ಅವರು ನನಗೆ ರೋಲ್ ಮಾಡಲ್. ನನಗೆ ಯಾವಾಗ ಪ್ರೇರಣೆ ಬೇಕೆನಿಸುತ್ತದೆಯೋ ಅವಾಗ ನಾನು ಅವರ ಸ್ಪರ್ಧೆಯ ವಿಡಿಯೋಗಳನ್ನು ನೋಡುತ್ತೇನೆ. ಮುಂದೊಂದು ದಿನ ದೇಶಕ್ಕಾಗಿ ನಾನು ಪದಕಗಳನ್ನು ತಂದುಕೊಡುತ್ತೇನೆ ಎಂಬ ಭರವಸೆಯಿದೆ, ನನಗೆ ನನ್ನ ತಂದೆ ನೆನಪಿಲ್ಲ, ಆದರೆ ಈ ಪದಕವನ್ನು ನನ್ನ ತಂದೆಗೆ ಅರ್ಪಿಸುತ್ತೇನೆ" ಎಂದು ಸುಪ್ರಿತಿ ಹೇಳಿಕೊಂಡಿದ್ದಾರೆ.
Recommended Video