Rohit Sharma: ಟಿ20 ವಿಶ್ವಕಪ್ ಆಡುವ ಬಗ್ಗೆ ರೋಹಿತ್ ಶರ್ಮಾ ಹೇಳಿದ್ದೇನು?
ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಕೊನೆಯ ಹಂತದಲ್ಲಿ ಎಡವಿ ಪ್ರಶಸ್ತಿ ವಂಚಿತವಾದ ಭಾರತ ತಂಡ ಸದ್ಯ ಟಿ20 ವಿಶ್ವಕಪ್ನತ್ತ ಗುರಿ ನೆಟ್ಟಿದೆ. ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ರೋಹಿತ್ ಶರ್ಮಾ ಟಿ20 ತಂಡಕ್ಕೆ ಮರಳಿದ್ದಾರೆ.
ಏಕದಿನ ವಿಶ್ವಕಪ್ ಸೋಲಿನ ನೋವಿನಲ್ಲಿರುವ ರೋಹಿತ್ ಶರ್ಮಾ ಭವಿಷ್ಯದ ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ. ಜೂನ್ ತಿಂಗಳಿನಲ್ಲಿ ಟಿ20 ವಿಶ್ವಕಪ್ ಆರಂಭವಾಗಲಿದ್ದು, ಪ್ರಶಸ್ತಿ ಗೆಲ್ಲುವ ಮೂಲಕ ಏಕದಿನ ವಿಶ್ವಕಪ್ ನೋವನ್ನು ಸ್ವಲ್ಪ ಕಡಿಮೆ ಮಾಡಬಹುದು ಎನ್ನುವ ವಿಶ್ವಾಸದಲ್ಲಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, "50 ಓವರ್ಗಳ ವಿಶ್ವಕಪ್ ನನ್ನ ಪಾಲಿಗೆ ಅತಿ ದೊಡ್ಡ ವಿಶ್ವಕಪ್. ನಾನು ಟಿ20 ವಿಶ್ವಕಪ್ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗಳಿಗೆ ಪ್ರಾಮುಖ್ಯತೆ ನೀಡುವುದಿಲ್ಲ ಎಂದಲ್ಲ. ಆದರೆ, ನಾವು 50 ಓವರ್ಗಳ ವಿಶ್ವಕಪ್ ಅನ್ನು ನೋಡುತ್ತಾ ಬೆಳೆದಿದ್ದೇವೆ. ಮತ್ತು ಯಾವಾಗ ಇದು ಭಾರತದಲ್ಲಿ ಪಂದ್ಯಾವಳಿ ನಡೆಯುತ್ತದೆ, ಬಹಳ ದೊಡ್ಡ ಘಟನೆಯಾಗಿದೆ. ನಾವು ಪ್ರಯತ್ನಿಸಿದ್ದೇವೆ. ದುರದೃಷ್ಟವಶಾತ್ ಗೆಲ್ಲಲು ಸಾಧ್ಯವಾಗಲಿಲ್ಲ. ಇಡೀ ತಂಡವು ದುಃಖಿತವಾಗಿತ್ತು. ಎಲ್ಲಾ ಅಭಿಮಾನಿಗಳು ದುಃಖಿತರಾಗಿದ್ದರು ಎಂದು ನನಗೆ ಗೊತ್ತಿದೆ. ಆದರೆ ನಮಗೆ ಈಗ ಮತ್ತೊಂದು ಅವಕಾಶವಿದೆ ಮತ್ತು ನಾವು ಮಾಡುತ್ತೇವೆ ಆ ಅವಕಾಶವನ್ನು ಹೇಗೆ ಬಳಸಿಕೊಳ್ಳಬೇಕು ಮತ್ತು ವಿಶ್ವಕಪ್ ಗೆಲ್ಲಬೇಕು ಎಂಬುದರ ಮೇಲೆ ಗಮನ ಕೇಂದ್ರೀಕರಿಸುತ್ತೇವೆ" ಎಂದು ರೋಹಿತ್ ಸ್ಪೋರ್ಟ್ಸ್ 18 ಗೆ ತಿಳಿಸಿದ್ದಾರೆ.
ಶತಕ ಬಾರಿಸಿದ ರೋಹಿತ್
14 ತಿಂಗಳ ಬಳಿಕ ಟಿ20 ತಂಡಕ್ಕೆ ಮರಳಿದ ರೋಹಿತ್ ಶರ್ಮಾ ಅಫ್ಘಾನಿಸ್ತಾನದ ವಿರುದ್ಧದ ಟಿ20 ಸರಣಿಯ ಮೊಲದ ಎರಡು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾದರೂ ಬೆಂಗಳೂರಿನಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಅಬ್ಬರಿಸಿದರು. ತಂಡ ಸಾಧಾರಣ ಮೊತ್ತಕ್ಕೆ ಕುಸಿಯುವ ಹಂತದಲ್ಲಿದ್ದಾಗ ಜವಾಬ್ದಾರಿಯುತ ಆಟವಾಡಿದ ಅವರು ತಮ್ಮ 5ನೇ ಟಿ20 ಶತಕವನ್ನು ಗಳಿಸಿ ಮಿಂಚಿದರು.
69 ಎಸೆತಗಳಲ್ಲಿ 11 ಬೌಂಡರಿ 8 ಸಿಕ್ಸರ್ ಸಹಿತ 121 ರನ್ ಗಳಿಸಿ ಮಿಂಚಿದರು. ಭಾರತ ಈ ಪಂದ್ಯವನ್ನು ಎರಡನೇ ಸೂಪರ್ ಓವರನಲ್ಲಿ ಗೆದ್ದು ಬೀಗಿತು. ಈ ಮೂಲಕ ಮೂರು ಪಂದ್ಯಗಳ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿತು.
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಈ ಬಾರಿ ವಿಶ್ವಕಪ್ನಲ್ಲಿ ಆಡುವುದು ನಿಶ್ಚಿತವಾಗಿದೆ. ರೋಹಿತ್ ಶರ್ಮಾ ಅವರ ನಾಯಕತ್ವದಲ್ಲೇ ಭಾರತ ತಂಡ ಟಿ20 ವಿಶ್ವಕಪ್ನಲ್ಲಿ ಸೆಣೆಸಲಿದೆ ಎನ್ನಲಾಗುತ್ತದೆ. ಯುಎಸ್ಎ ಮತ್ತು ವೆಸ್ಟ್ ಇಂಡೀಸ್ನಲ್ಲಿ ಈ ಬಾರಿ ಟಿ20 ವಿಶ್ವಕಪ್ ನಡೆಯಲಿದ್ದು, ಜೂನ್ 1ರಿಂದ ಪಂದ್ಯಾವಳಿ ಆರಂಭವಾಗಲಿದೆ.












Click it and Unblock the Notifications