RCB: ಆತ ಆರ್ಸಿಬಿ ಬಿಟ್ಟು ಬೇರೆ ತಂಡಕ್ಕೆ ಆಡಬೇಕಿತ್ತು ಎಂದ ಭಾರತದ ಮಾಜಿ ಕ್ರಿಕೆಟಿಗ
ಐಪಿಎಲ್ನಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದಿರುವ ಪ್ರಮುಖ ತಂಡಗಳಲ್ಲಿ ಆರ್ ಸಿಬಿ ಕೂಡ ಒಂದು. ಇಷ್ಟು ವರ್ಷಗಳಲ್ಲಿ ಒಮ್ಮೆಯೂ ಕಪ್ ಗೆಲ್ಲದೇ ಇದ್ದರೂ ಅಭಿಮಾನಿಗಳ ಅಭಿಮಾನ ಎಂದಿಗೂ ಕಡಿಮೆಯಾಗಿಲ್ಲ. ಫ್ರಾಂಚೈಸಿ ಜೊತೆ, ಆಟಗಾರರ ಜೊತೆ ಅಭಿಮಾನಿಗಳು ಭಾವನಾತ್ಮಕ ಸಂಬಂಧವನ್ನೂ ಹೊಂದಿದ್ದಾರೆ. ಎಬಿ ಡಿವಿಲಿಯರ್ಸ್ ಆರ್ ಸಿಬಿ ತಂಡದ ಮಾಜಿ ಆಟಗಾರನಾದರೂ ಅವರನ್ನು ಅಭಿಮಾನಿಗಳು ಇಂದಿಗೂ ಮರೆತಿಲ್ಲ.
ಆರ್ ಸಿಬಿ ಕೂಡ ಎಬಿ ಡಿವಿಲಿಯರ್ಸ್ಗೆ ಹಾಲ್ ಆಫ್ ಫೇಮ್ ನೀಡಿ ಗೌರವಿಸಿದೆ. ವಿರಾಟ್ ಕೊಹ್ಲಿ ಆಪ್ತರಾಗಿರುವ ಎಬಿಡಿ ಭಾರತದಲ್ಲೂ ಹೆಚ್ಚಿನ ಅಭಿಮಾನಿಗಳನ್ನು ಹೊಂದಿದ್ದಾರೆ. ಮಿಸ್ಟರ್ 360 ಎಂದೇ ಕರೆಸಿಕೊಳ್ಳುತ್ತಿದ್ದ ಅವರು ತಮ್ಮ ವಿಶಿಷ್ಟ ಶೈಲಿಯ ಬ್ಯಾಟಿಂಗ್ನಿಂದಲೇ ಬೌಲರ್ ಗಳನ್ನು ತಬ್ಬಿಬ್ಬಾಗಿಸುತ್ತಿದ್ದರು. ಅಂತಹ ಶ್ರೇಷ್ಠ ಆಟಗಾರನಾದರೂ ಒಮ್ಮೆಯೂ ಕಪ್ ಗೆಲ್ಲಲಿಲ್ಲವಲ್ಲ ಎನ್ನುವ ನಿರಾಸೆ ಅಭಿಮಾನಿಗಳಿಗಿದೆ.

ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಎಬಿ ಡಿವಿಲಿಯರ್ಸ್ ಬಗ್ಗೆ ಮಾತನಾಡಿದ್ದಾರೆ. ಎಬಿಡಿ ಏನಾದರೂ ಆರ್ ಸಿಬಿಗೆ ಆಡದೆ ಬೇರೆ ತಂಡಕ್ಕಾಗಿ ಆಡಿದ್ದರೆ ಅವರು ಖಂಡಿತ ಕಪ್ ಗೆಲ್ಲುತ್ತಿದ್ದರು ಎಂದಿದ್ದಾರೆ. ಆರ್ ಸಿಬಿ ಎಬಿ ಡಿವಿಲಿಯರ್ಸ್ ಅಂತಹ ಆಟಗಾರರನ್ನು ಬಳಸಿಕೊಳ್ಳುವಲ್ಲಿ ಎಡವಿದೆ ಎಂದು ಅವರು ಹೇಳಿದ್ದಾರೆ.
ಸೂರ್ಯಕುಮಾರ್ ಜೊತೆ ಹೋಲಿಕೆ
ಟಿ20 ಮಾದರಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಸೂರ್ಯಕುಮಾರ್ ಯಾದವ್ರನ್ನು ಆಗಾಗ್ಗೆ ಎಬಿ ಡಿವಿಲಿಯರ್ಸ್ ಜೊತೆ ಹೋಲಿಕೆ ಮಾಡಲಾಗುತ್ತದೆ. ಈ ಬಗ್ಗೆ ಮಾತನಾಡಿರುವ ಸಂಜಯ್ ಮಂಜ್ರೇಕರ್, ಪಂದ್ಯಗಳನ್ನು ಗೆಲ್ಲಿಸುವ ವಿಚಾರದಲ್ಲಿ ಸೂರ್ಯಕುಮಾರ್ ಯಾದವ್ ಎಬಿ ಡಿವಿಲಿಯರ್ಸ್ಗಿಂತ ಹೆಚ್ಚಿನ ಕೊಡುಗೆ ನೀಡಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ ಎಬಿ ಡಿವಿಲಿಯರ್ಸ್ ತಪ್ಪಾದ ಐಪಿಎಲ್ ಫ್ರಾಂಚೈಸಿಗಾಗಿ ಆಡಿದ್ದಾರೆ ಎಂದಿದ್ದಾರೆ.
"ಎಬಿ ಡಿವಿಲಿಯರ್ಸ್ ಶ್ರೇಷ್ಠ ಕ್ರಿಕೆಟಿಗ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಅವರು ಟೆಸ್ಟ್ ಕ್ರಿಕೆಟ್ನಲ್ಲೂ 50 ಸರಾಸರಿ ಹೊಂದಿದ್ದರು. ಏಕದಿನ ಕ್ರಿಕೆಟ್ನಲ್ಲು ಎಬಿ ಡಿವಿಲಿಯರ್ಸ್ ಸಾಧನೆ ಉತ್ತಮವಾಗಿದೆ. ಆದರೆ ಟಿ20 ಕ್ರಿಕೆಟ್ ಎಂದು ತೆಗೆದುಕೊಂಡರೆ ಐಪಿಎಲ್ನಲ್ಲಿ ಆರ್ ಸಿಬಿ ಅವರನ್ನು ಸರಿಯಾಗಿ ಬಳಸಿಕೊಂಡಿಲ್ಲ. ಅವರ ನಿಜವಾದ ಸಾಮರ್ಥ್ಯವನ್ನು ಉಪಯೋಗಿಸಿಕೊಳ್ಳುವಲ್ಲಿ ಆರ್ ಸಿಬಿ ವಿಫಲವಾಗಿದೆ. ಅವರು ಬೇರೆ ತಂಡಕ್ಕಾಗಿ ಆಡಿದ್ದರೆ, ನಾವು ಶ್ರೇಷ್ಠ ಎಬಿಡಿಯನ್ನು ನೋಡಬಹುದಿತ್ತು" ಎಂದು ಹೇಳಿದ್ದಾರೆ.
ಎಬಿ ಡಿವಿಲಿಯರ್ಸ್ ಐಪಿಎಲ್ನಲ್ಲಿ ಕೇವಲ ಎರಡು ಫ್ರಾಂಚೈಸಿಗಳಿಗೆ ಮಾತ್ರ ಆಡಿದ್ದಾರೆ. ಮೊದಲು ಡೆಲ್ಲಿ ಡೇರ್ ಡೆವಿಲ್ಸ್ ತಂಡಕ್ಕಾಗಿ ಆಡಿದ್ದ ಅವರು, ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿದರು. ಆರ್ ಸಿಬಿಗಾಗಿ ಅವರು 4491 ರನ್ ಗಳಿಸಿದ್ದು, ಎರಡು ಶತಕ ಮತ್ತು 37 ಅರ್ಧಶತಕ ಗಳಿಸಿದ್ದಾರೆ.












Click it and Unblock the Notifications