RCB vs DC: ಆರ್ಸಿಬಿ ಪ್ಲೇಆಫ್ ಕನಸಿಗೆ ಅಡ್ಡಿಯಾಗುತ್ತಾ ಮಳೆ?
ಸತತವಾಗಿ ನಾಲ್ಕು ಪಂದ್ಯಗಳನ್ನು ಗೆದ್ದು ಪ್ಲೇ ಆಫ್ ಕನಸನ್ನು ಜೀವಂತವಾಗಿಟ್ಟುಕೊಂಡಿರುವ ಆರ್ಸಿಬಿ ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣೆಸಲು ಸಜ್ಜಾಗುತ್ತಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ.
ಆರ್ಸಿಬಿ ಮುಂದಿನ ಎರಡೂ ಪಂದ್ಯಗಳನ್ನು ಗೆದ್ದು ಅದೃಷ್ಟ ಕೈಹಿಡಿದರೆ ಪ್ಲೇ ಆಫ್ ತಲುಪುವ ಲೆಕ್ಕಾಚಾರದಲ್ಲಿದೆ. ಆದರೆ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಮುಂದಿನ ಎರಡು ಪಂದ್ಯಗಳನ್ನು ಗೆದ್ದರೆ ಪ್ಲೇ ಆಫ್ ತಲುಪುವ ಸಾಧ್ಯತೆ ಇರುವುದರಿಂದ ಗೆಲ್ಲುವ ಲೆಕ್ಕಾಚಾರದಲ್ಲಿದೆ.

ಆರ್ಸಿಬಿ ಕನಸಿಗೆ ಮಳೆ ಅಡ್ಡಿ?
ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿ ಉತ್ತಮ ಮಳೆಯಾಗುತ್ತಿದೆ. ಶುಕ್ರವಾರ ರಾತ್ರಿ ಹಲವು ಭಾಗಗಳಲ್ಲಿ ಭಾರಿ ಮಳೆಯಾಗಿತ್ತು, ಶನಿವಾರ ಕೆಲವು ಕಡೆ ಮಾತ್ರ ಸಾಧಾರಣ ಮಳೆಯಾಗಿದ್ದು, ಭಾನುವಾರ ಏನಾದರೂ ಮಳೆ ಅಬ್ಬರಿಸಿದರೆ ಆರ್ಸಿಬಿ ಪ್ಲೇ ಆಫ್ ಕನಸು ಬಹುತೇಕ ಕಮರಲಿದೆ.
ಆದರೆ, ಆರ್ಸಿಬಿ ಅಭಿಮಾನಿಗಳಿಗೆ ಹವಾಮಾನ ಇಲಾಖೆಯಿಂದ ಶುಭಸುದ್ದಿ ಸಿಕ್ಕಿದ್ದು, ಭಾನುವಾರ ಪಂದ್ಯದ ವೇಳೆ ಮಳೆಯಾಗುವ ಸಾಧ್ಯತೆ ಬಹಳ ಕಡಿಮೆ ಇದೆ.
ಕರ್ನಾಟಕ ವೆದರ್ (@Bnglrweatherman) ಎಕ್ಸ್ ಖಾತೆಯಲ್ಲಿ ಭಾನುವಾರ ನಗರದಲ್ಲಿ ಮಳೆಯ ಮುನ್ಸೂಚನೆ ಬಗ್ಗೆ ಮಾಹಿತಿ ನೀಡಿದ್ದು, ಆರ್ ಸಿಬಿ ಅಭಿಮಾನಿಗಳು ನಿಶ್ಚಿಂತೆಯಿಂದ ಪಂದ್ಯವನ್ನು ನೋಡಬಹುದು ಎಂದು ಹೇಳಿದ್ದಾರೆ.
ಭಾನುವಾರ ರಾತ್ರಿ 7.30 ರಿಂದ 11.15 ರವರೆಗೆ ಪಂದ್ಯದ ಸಮಯದಲ್ಲಿ ಹೆಚ್ಚಾಗಿ ಸ್ಪಷ್ಟ ಮತ್ತು ಆಹ್ಲಾದಕರ ಹವಾಮಾನವು ಇರಲಿದೆ ಎಂದು ಹೇಳಿದ್ದು, 25-35% ರಷ್ಟು ಮಾತ್ರ ನಗರದಲ್ಲಿ ಚದುರಿದ ಮಳೆಯಾಗುವ ಸಾಧ್ಯತೆಯಿದೆ, ಅದೂ ಕೂಡ ಹೆಚ್ಚಾಗಿ ನಗರದ ಪಶ್ಚಿಮ ಭಾಗಗಳ ಕಡೆಗೆ ಎಂದು ಹೇಳಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣವು ನಗರದ ಕೇಂದ್ರ ಭಾಗದಲ್ಲಿ ನೆಲೆಗೊಂಡಿರುವುದರಿಂದ, ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಗಳು ತುಂಬಾ ಕಡಿಮೆ ಮತ್ತು ಪೂರ್ತಿ ಪಂದ್ಯವನ್ನು ಅಭಿಮಾನಿಗಳು ನೋಡಬಹುದು ಎಂದಿದ್ದಾರೆ.
ಬೇಸಿಗೆ ಮಳೆಯಾಗಿರುವ ಕಾರಣ ಅನಿರೀಕ್ಷಿತ ಬದಲಾವಣೆಯಾಗುವ ಕೂಡ ಸಾಧ್ಯತೆ ಇದೆ. ಚಿನ್ನಸ್ವಾಮಿಯಲ್ಲಿ ಮಳೆ ಬಿದ್ದರೆ ನೀರು ವೇಗವಾಗಿ ಆವಿಯಾಗುವ ವ್ಯವಸ್ಥೆ ಇರುವ ಕಾರಣ ಮಳೆ ಬಂದು ನಿಂತರೂ ಬೇಗನೆ ಪಂದ್ಯ ಆರಂಭವಾಗುವ ವ್ಯವಸ್ಥೆ ಇದೆ.
ನಿಧಾನಗತಿಯ ಓವರ್ ರೇಟ್ಗಾಗಿ ಪಂತ್ ಅವರಿಗೆ ಒಂದು ಪಂದ್ಯದಿಂದ ನಿಷೇಧ ಹೇರಿದ್ದು, ಆರ್ಸಿಬಿ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಡೆಲ್ಲಿ ತಂಡಕ್ಕೆ ಇದು ದೊಡ್ಡ ಹಿನ್ನಡೆಯಾಗಿದ್ದು, ಆರ್ ಸಿಬಿಗೆ ಗೆಲ್ಲುವ ಸಾಧ್ಯತೆ ಹೆಚ್ಚಿದೆ.












Click it and Unblock the Notifications