RCB vs CSK: ಮೊಯೀನ್ ಅಲಿ ಮಾಡಿದ ಎಡವಟ್ಟಿಗೆ ತಾಳ್ಮೆ ಕಳೆದುಕೊಂಡ ಎಂಎಸ್ ಧೋನಿ: ವಿಡಿಯೋ ವೈರಲ್
ಮೈದಾನದಲ್ಲಿ ಯಾವಾಗಲೂ ತಾಳ್ಮೆಯಿಂದ ಇರುವ ಎಂಎಸ್ ಧೋನಿ ಈ ಕಾರಣಕ್ಕಾಗಿಯೇ 'ಕೂಲ್ ಕ್ಯಾಪ್ಟನ್' ಎನಿಸಿಕೊಂಡಿದ್ದಾರೆ. ಎಂಥಾದ್ದೇ ಪರಿಸ್ಥಿತಿಯಲ್ಲಿಯೂ ಭಾವನೆಗಳನ್ನು ವ್ಯಕ್ತಪಡಿಸದ ಧೋನಿಯ ಈ ಗುಣವೇ ಅವರನ್ನು ಯಶಸ್ವಿ ನಾಯಕನನ್ನಾಗಿಸಿದೆ ಎಂಬುದು ಅಭಿಪ್ರಾಯ. ಹಾಗಂತ ಧೋನಿ ತಾಳ್ಮೆ ಕಳೆದುಕೊಂಡ ಉದಾಹರಣೆ ಇಲ್ಲವೇ ಇಲ್ಲ ಎಂದಲ್ಲ. ಈ ಅಪರೂಪದ ಸಂದರ್ಭಕ್ಕೆ ಆರ್ಸಿಬಿ ವಿರುದ್ಧದ ಪಂದ್ಯವೂ ಸಾಕ್ಷಿಯಾಗಿದೆ.
— Billu Pinki (@BilluPinkiSabu) April 18, 2023
ಹೌದು, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಎಂಎಸ್ ಧೋನಿ ತಮ್ಮ ತಾಳ್ಮೆಯನ್ನು ಕಳೆದುಕೊಂಡ ಘಟನೆ ನಡೆಯಿತು. ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಎರಡನೇ ಸರದಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಬೌಲಿಂಗ್ ಮಾಡುತ್ತಿದ್ದ ವೇಳೆ ಮೊಯೀನ್ ಅಲಿ ಮಾಡಿದ ಎಡವಟ್ಟಿಗೆ ಸಿಎಸ್ಕೆ ನಾಯಕ ಅಸಮಾಧಾನಗೊಂಡಿದ್ದು ಇದು ಅವರ ಮುಖಭಾವನೆಯಿಂದ ಸ್ಪಷ್ಟವಾಗಿದೆ.

ರನೌಟ್ ಮಾಡುವ ಅವಕಾಶ
ಮೊದಲಿಗೆ ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆರ್ಸಿಬಿ ತಂಡಕ್ಕೆ ಬೃಹತ್ ಮೊತ್ತದ ಗುರಿ ನೀಡಿತ್ತು. ಈ ಗುರಿ ಬೆನ್ನಟ್ಟಿದ ಆರ್ಸಿಬಿ ತಂಡ ಅದ್ಭುತ ಪ್ರದರ್ಶನ ನೀಡಿ ಗೆಲುವಿನ ವಿಶ್ವಾಸದಲ್ಲಿದ್ದರೂ ಅಂತಿಮ ಹಂತದಲ್ಲಿ ಸಿಎಸ್ಕೆ ನಿಯಂತ್ರಣ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಈ ಹಂತದಲ್ಲಿ ಪಂದ್ಯದ 18ನೇ ಓವರ್ನಲ್ಲಿ ವೇಯ್ನ್ ಪಾರ್ನೆಲ್ ಅವರು ಮಥೀಶ ಪತಿರಣ ಎಸೆತದಲ್ಲಿ ಸಿಂಗಲ್ ಕದಿಯುವ ಪ್ರಯತ್ನ ಮಾಡಿದ್ದರು. ಆದರೆ ನಾನ್ಸ್ಟ್ರೈಕರ್ನಲ್ಲಿದ್ದ ಸುಯೇಶ್ ಪ್ರಭುದೇಸಾಯಿ ರನ್ಗಾಗಿ ಓಡಲಿಲ್ಲ. ಈ ಸಂದರ್ಭದಲ್ಲಿ ರನೌಟ್ ಮಾಡುವ ಅದ್ಭುತ ಅವಕಾಶ ಮೊಯೀನ್ ಅಲಿ ಮುಂದಿತ್ತು.
ವಿರಾಟ್ ಕೊಹ್ಲಿ or ಎಬಿ ಡಿವಿಲಿಯರ್ಸ್: ತನ್ನ ನೆಚ್ಚಿನ ಬ್ಯಾಟಿಂಗ್ ಪಾಲುದಾರನನ್ನು ಆಯ್ಕೆ ಮಾಡಿದ ಕ್ರಿಸ್ ಗೇಲ್
ಸಿಡುಕಿದ ಎಂಎಸ್ ಧೋನಿ
ಆದರೆ ಈ ಸಂದರ್ಭದಲ್ಲಿ ಅನುಭವಿ ಆಟಗಾರ ಮೊಯೀನ್ ಅಲಿ ಕ್ಷಿಪ್ರವಾಗಿ ಸ್ಪಂದಿಸಲಿಲ್ಲ. ಬಳಿಕ ಎಚ್ಚೆತ್ತುಕೊಂಡವರಂತೆ ಚೆಂಡನ್ನು ವಿಕೆಟ್ ಕೀಪರ್ನತ್ತ ಎಸೆದರು ಕೂಡ ಪಾರ್ನೆಲ್ ಆಗ ಸುರಕ್ಷಿತವಾಗಿ ಕ್ರೀಸ್ಗೆ ಸೇರಿಕೊಂಡಿದ್ದರು. ಮೊಯೀನ್ ಅಲಿ ಈ ಸಂದರ್ಭದಲ್ಲಿ ತೋರಿದ ಉದಾಸೀನತೆ ಎಂಎಸ್ ಧೋನಿಗೆ ಕೋಪ ತರಿಸಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಂದ್ಯ ಸೋತ ಆರ್ಸಿಬಿ
ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಂತಿಮ ಹಂತದಲ್ಲಿ ಅದ್ಭುತ ಯಶಸ್ಸು ಸಾಧಿಸಿತು. ಆರ್ಸಿಬಿ ತಂಡದ ಮಧ್ಯಮ ಕ್ರಮಾಂಕದ ಆಟಗಾರರು ಸಮರ್ಥ ಪ್ರದರ್ಶನ ನೀಡುವಲ್ಲಿ ವಿಫಲವಾದ ಕಾರಣ ಆರ್ಸಿಬಿ ತವರಿನಲ್ಲಿ ಗೆಲ್ಲಬಹುದಾಗಿದ್ದ ಮತ್ತೊಂದು ಪಂದ್ಯವನ್ನು ಸೋತಂತಾಗಿದೆ. ಸಿಎಸ್ಕೆ ಈ ಹೈವೋಲ್ಟೇಜ್ ಪಂದ್ಯದಲ್ಲಿ 8 ರನ್ಗಳ ಅಲ್ಪ ಅಂತರದ ಗೆಲುವು ಸಾಧಿಸಿದೆ.
ವ್ಯರ್ಥವಾಯಿತು ಫಾಫ್ ಮ್ಯಾಕ್ಸ್ವೆಲ್ ಹೋರಾಟ
ಇನ್ನು ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ನೀಡಿದ 228 ರನ್ಗಳ ಬೃಹತ್ ಮೊತ್ತವನ್ನು ಬೆನ್ನಟ್ಟುವ ಸಂದರ್ಭದಲ್ಲಿ ಆರ್ಸಿಬಿ ವಿರಾಟ್ ಕೊಹ್ಲಿ ಹಾಗೂ ಮಹಿಪಾಲ್ ಲೊಮ್ರೋರ್ ವಿಕೆಟನ್ನು ಶೀಘ್ರವಾಗಿ ಕಳೆದುಕೊಂಡಿದ್ದರೂ ಫಾಫ್ ಡು ಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ಅಮೋಘ ಪ್ರದರ್ಶನ ನೀಡಿ ಆರ್ಸಿಬಿ ಅಭಿಮಾನಿಗಳಲ್ಲಿ ಗೆಲುವಿನ ವಿಶ್ವಾಸ ಮೂಡಿಸಿದರು. ಈ ಇಬ್ಬರು ಆಟಗಾರರು ಕ್ರೀಸ್ನಲ್ಲಿದ್ದಷ್ಟು ಹೊತ್ತು ಪಂದ್ಯ ಸಂಪೂರ್ಣವಾಗಿ ಆರ್ಸಿಬಿ ಹಿಡಿತದಲ್ಲಿಯೇ ಇತ್ತು. ಆದರೆ ನಂತರ ಬಂದ ಆಟಗಾರರಿಂದ ಕಳಪೆ ಪ್ರದರ್ಶನ ಬಂದ ಕಾರಣ ಆರ್ಸಿಬಿ ಸೋಲು ಅನುಭವಿಸುವಂತಾಯಿತು.
ಮುಂದಿನ ಎದುರಾಳಿ ಪಂಜಾಬ್ ಕಿಂಗ್ಸ್
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲು ಅನುಭವಿಸಿರುವ ಕಾರಣ ಆರ್ಸಿಬಿ ತಂಡ ಈಗ ಮತ್ತೆ ಗೆಲುವಿನ ಲಯಕ್ಕೆ ಮರಳಲು ಪ್ರಯತ್ನಿಸಲಿದೆ. ಆರ್ಸಿಬಿ ತನ್ನ ಮುಂದಿನ ಪಂದ್ಯವನ್ನು ಪಂಜಾಬ್ ಕಿಂಗ್ಸ್ ವಿರುದ್ಧ ಆಡಲಿದ್ದು ಮೊಹಾಲಿಯಲ್ಲಿ ಈ ಪಂದ್ಯ ಆಯೋಜನೆಯಾಗಲಿದೆ. ಗುರುವಾರ ನಡೆಯಲಿರುವ ಈ ಪಂದ್ಯದಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಚೇತರಿಕೆ ಕಾಣುವ ಪ್ರಯತ್ನ ನಡೆಸಲಿದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು.












Click it and Unblock the Notifications