IPL 2023 : ಈ ತಪ್ಪುಗಳನ್ನು ತಿದ್ದಿಕೊಂಡರೆ ಮಾತ್ರ ಪಂಜಾಬ್ ವಿರುದ್ಧ ಗೆಲ್ಲಲಿದೆ ಆರ್ಸಿಬಿ!
ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 8 ರನ್ಗಳಿಂದ ಸೋಲನುಭವಿಸಿತು. ತವರಿನ ಪಂದ್ಯವನ್ನು ಸೋತ ಬಳಿಕ ಮುಂದಿನ ಪಂದ್ಯವನ್ನು ಅವರು ಮೊಹಾಲಿಯಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಆಡಲಿದೆ. ಏಪ್ರಿಲ್ 20ರಂದು ಗುರುವಾರ ಈ ಪಂದ್ಯ ನಡೆಯಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡಿರುವ 5 ಪಂದ್ಯಗಳಲ್ಲಿ ಕೇವಲ 2 ಪಂದ್ಯಗಳಲ್ಲಿ ಮಾತ್ರ ಗೆಲುವು ಕಂಡಿದೆ. ಲಕ್ನೋ ಸೂಪರ್ ಜೈಂಟ್ಸ್ ಮತ್ತು ಸಿಎಸ್ಕೆ ವಿರುದ್ಧ ಪಂದ್ಯವನ್ನು ಗೆಲ್ಲುವ ಅವಕಾಶವಿದ್ದರೂ ಹಲವು ತಪ್ಪುಗಳನ್ನು ಮಾಡುವ ಮೂಲಕ ಗೆಲ್ಲುವ ಅವಕಾಶ ಕಳೆದುಕೊಂಡಿತು. ಆರ್ ಸಿಬಿ ಮುಂದಿನ ಪಂದ್ಯಗಳಲ್ಲಿ ಗೆಲುವು ಸಾಧಿಸಬೇಕೆಂದರೆ ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಬೇಕಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೇಲ್ನೋಟಕ್ಕೆ ಬಲಿಷ್ಠವಾಗಿ ಕಂಡರೂ ತಂಡವಾಗಿ ಆಡುವಲ್ಲಿ ಸೋಲುತ್ತಿದೆ. ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದ ಅವರು, ಎರಡನೇ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ದೊಡ್ಡ ಸೋಲನುಭವಿಸಿದರು. ನಂತರ ಮೂರನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ದೊಡ್ಡ ಮೊತ್ತ ಗಳಿಸಿದರೂ ಅದನ್ನು ರಕ್ಷಿಸಿಕೊಳ್ಳುವಲ್ಲಿ ವಿಫಲವಾದರು. ಡೆಲ್ಲಿ ವಿರುದ್ಧ ಅವರು ಗೆಲುವು ಸಾಧಿಸಿದ ಬಳಿಕ, ಸಿಎಸ್ಕೆ ವಿರುದ್ಧ ಸೋಲನುಭವಿಸಿದರು.
ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಸುಧಾರಿಸಬೇಕು
ಆರ್ಸಿಬಿ ತಂಡದಲ್ಲಿ ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ. ಒಂದು ವೇಳೆ ಈ ಮೂವರು ಬೇಗನೆ ಔಟಾದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲ್ಲುವುದು ಕಷ್ಟ ಎನ್ನುವ ಪರಿಸ್ಥಿತಿ ಇದೆ. ಈ ಮೂವರನ್ನು ಹೊರತುಪಡಿಸಿ ಉಳಿದ ಬ್ಯಾಟರ್ ಗಳು ರನ್ ಗಳಿಸುವಲ್ಲಿ ಸೋತಿದ್ದಾರೆ. ಪಂಜಾಬ್ ವಿರುದ್ಧದ ಪಂದ್ಯವನ್ನು ಗೆಲ್ಲಬೇಕೆಂದರೆ ಮಧ್ಯಮ ಕ್ರಮಾಂಕದ ಬ್ಯಾಟರ್ ಗಳು ಫಾರ್ಮ್ ಕಂಡುಕೊಳ್ಳಬೇಕಿದೆ.
ದಿನೇಶ್ ಕಾರ್ತಿಕ್ ಈ ಬಾರಿ ಇನ್ನೂ ಪಂದ್ಯವನ್ನು ಗೆಲ್ಲಿಸುವಂತೆ ಬ್ಯಾಟಿಂಗ್ ಮಾಡಿಲ್ಲ, ಸಿಎಸ್ಕೆ ವಿರುದ್ಧ ಉತ್ತಮವಾಗಿ ಆಡುತ್ತಿದ್ದ ಅವರು ಔಟಾಗುವ ಮೂಲಕ ನಿರಾಸೆ ಮೂಡಿಸಿದರು, ಅನುಜ್ ರಾವತ್, ಮಹಿಪಾಲ್ ಲೊಮ್ರೊರ್, ಶಹಬಾಜ್ ಅಹ್ಮದ್ ಕೂಡ ಬ್ಯಾಟಿಂಗ್ನಲ್ಲಿ ಕೊಡುಗೆ ನೀಡಿಲ್ಲ.

ಬೌಲಿಂಗ್ನಲ್ಲಿ ಸುಧಾರಣೆ ಕಾಣಬೇಕು
ತಂಡದ ಬೌಲಿಂಗ್ ವಿಭಾಗ ಪದೇ ಪದೇ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿದೆ. ಮೊಹಮ್ಮದ್ ಸಿರಾಜ್ ಹೊರತುಪಡಿಸಿ ಉಳಿದ ಬೌಲರ್ ಗಳು ಹೆಚ್ಚಿನ ರನ್ ಬಿಟ್ಟುಕೊಟ್ಟಿದ್ದಾರೆ. ವೈಶಾಕ್ ವಿಜಯ್ ಕುಮಾರ್ ಡೆಲ್ಲಿ ವಿರುದ್ಧ ಮೂರು ವಿಕೆಟ್ ಪಡೆದುಕೊಂಡರು, ಸಿಎಸ್ಕೆ ವಿರುದ್ಧ 62 ರನ್ ಬಿಟ್ಟುಕೊಟ್ಟರು. ಅನುಭವಿ ಬೌಲರ್ ಹರ್ಷಲ್ ಪಟೇಲ್ ಕೆಟ್ಟ ಬೌಲಿಂಗ್ ಮಾಡುತ್ತಿರುವುದು ತಂಡಕ್ಕೆ ದೊಡ್ಡ ತಲೆನೋವಾಗಿದೆ.
ಮುಂದಿನ ಪಂದ್ಯದಲ್ಲಿ ಆರ್ ಸಿಬಿ ಕನಿಷ್ಠ ಬೇರೆ ವೇಗಿಗಳಿಗೆ ಅವಕಾಶ ನೀಡಬಹುದು. ಅವಿನಾಶ್ ಸಿಂಗ್, ಆಕಾಶ್ ದೀಪ್ ಅವರನ್ನು ಪ್ರಯತ್ನಿಸಬಹುದು. ವನಿಂದು ಹಸರಂಗ ಬದಲಾಗಿ ಸ್ಫೋಟಕ ಆಲ್ರೌಂಡರ್ ಬ್ರೇಸ್ವೆಲ್ರನ್ನು ಆಡಿಸಿದರೆ, ತಂಡದ ಬೌಲಿಂಗ್ ಜೊತೆ ಬ್ಯಾಟಿಂಗ್ ವಿಭಾಗ ಕೂಡ ಬಲಿಷ್ಠವಾಗಲಿದೆ.
ಮ್ಯಾಕ್ಸ್ವೆಲ್ ಕೂಡ ಬೌಲಿಂಗ್ ಮಾಡುವುದರಿಂದ ಹಸರಂಗ ಬದಲಾಗಿ ಬ್ರೇಸ್ವೆಲ್ ಉತ್ತಮ ಆಯ್ಕೆಯಾಗಿದೆ. ಇನ್ನು ಬ್ಯಾಟಿಂಗ್ ಕ್ರಮಾಂಕದಲ್ಲಿ ಪದೇ ಪದೇ ಬದಲಾವಣೆ ಮಾಡುವುದನ್ನು ತಪ್ಪಿಸಬೇಕು, ಮಧ್ಯಮ ಕ್ರಮಾಂಕದಲ್ಲಿ ಆಡುವ ಲೊಮ್ರೊರ್ ಅವರನ್ನು ಮೂರನೇ ಕ್ರಮಾಂಕದಲ್ಲಿ ಆಡಿಸಿ ಸಿಎಸ್ಕೆ ವಿರುದ್ಧ ತಪ್ಪು ಮಾಡಿತು. ಮೂರನೇ ಕ್ರಮಾಂಕದಲ್ಲಿ ಆಡುವ ಸುಯೇಶ್ ಪ್ರಭುದೇಸಾಯಿ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದರು. ಈ ಎಲ್ಲಾ ತಪ್ಪುಗಳನ್ನು ತಿದ್ದಿಕೊಂಡರೆ ಆರ್ ಸಿಬಿ ಮುಂದಿನ ಪಂದ್ಯಗಳಲ್ಲಿ ಗೆಲ್ಲುವುದು ಸುಲಭವಾಗಲಿದೆ.












Click it and Unblock the Notifications