ಏನೇ ಆದರೂ ನನ್ನ ಫೇವರಿಟ್ RCB; ಡಿಸಿಎಂ ಡಿ. ಕೆ. ಶಿವಕುಮಾರ್
ಬೆಂಗಳೂರು, ಮೇ 22; 'ಏನೇ ಆದ್ರು ನನ್ನ ಫೇವರಿಟ್ RCB. ಕಪ್ ನಮ್ಮದಾಗುವ ಸಮಯ ಬಂದೇ ಬರುತ್ತೆ. ನಿರಾಸೆ ಬೇಡ, ಆಶಾವಾದವಿರಲಿ' ಎಂದು ಕರ್ನಾಟಕದ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ. ಈ ಮೂಲಕ ಆರ್ಸಿಬಿ ಪ್ಲೇ ಆಫ್ಗೆ ಹೋಗಲು ಸಾಧ್ಯವಾಗದಿರುವುದಕ್ಕೆ ನಿರಾಸೆಗೊಂಡಿರುವ ಅಭಿಮಾನಿಗಳಿಗೆ ಅವರು ಧೈರ್ಯ ತುಂಬಿದ್ದಾರೆ.
ಬಿಡುವಿಲ್ಲದ ರಾಜಕೀಯ ಚಟುವಟಿಕೆಗಳ ನಂತರ ಡಿ. ಕೆ. ಶಿವಕುಮಾರ್ ಪುತ್ರಿ ಮತ್ತು ಪುತ್ರನ ಜೊತೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಆರ್ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಐಪಿಎಲ್ ಪಂದ್ಯವನ್ನು ವೀಕ್ಷಣೆ ಮಾಡಿದರು. ಈ ಕುರಿತು ಫೇಸ್ಬುಕ್ ಪುಟದಲ್ಲಿ ಅವರು ಪೋಸ್ಟ್ ಹಾಕಿದ್ದಾರೆ.

'ನಮ್ಮ ಹುಡುಗರು ಈ ಸಾರಿ ಸೋತಿರಬಹುದು, ಆದರೆ ಅತ್ಯುತ್ತಮ ಆಟದಿಂದ ಎಲ್ಲರ ಹೃದಯ ಗೆದ್ದಿದ್ದಾರೆ. ಏನೇ ಆದ್ರು ನನ್ನ ಫೇವರಿಟ್ RCB. ಕಪ್ ನಮ್ಮದಾಗುವ ಸಮಯ ಬಂದೇ ಬರುತ್ತೆ. ನಿರಾಸೆ ಬೇಡ, ಆಶಾವಾದವಿರಲಿ' ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಆರ್ಸಿಬಿ ಅಭಿಮಾನಿಗಳ ಜೊತೆ ನಿಂತಿದ್ದಾರೆ.
ಸಿದ್ದರಾಮಯ್ಯಗೂ ಆರ್ಸಿಬಿ ನೆಚ್ಚಿನ ತಂಡ; ಡಿ. ಕೆ. ಶಿವಕುಮಾರ್ ಮಾತ್ರವಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯಗೂ ಆರ್ಸಿಬಿ ನೆಚ್ಚಿನ ತಂಡ. ಏಪ್ರಿಲ್ನಲ್ಲಿ ಚುನಾವಣೆ ಪ್ರಚಾರದ ನಡುವೆಯೂ ಅವರು ಮ್ಯಾಚ್ ನೋಡಲು ತೆರಳಿದ್ದರು. ಅಲ್ಲದೇ 'ಕ್ರಿಕೆಟ್ ನನ್ನ ಇಷ್ಟದ ಆಟ, ಆರ್ಸಿಬಿ ನನ್ನ ಹೆಮ್ಮೆಯ ತಂಡ' ಎಂದು ಟ್ವೀಟ್ ಮಾಡಿದ್ದರು.
'ನನ್ನಂತಹ ಕೋಟ್ಯಂತರ ಅಭಿಮಾನಿಗಳ ಹಾರೈಕೆ ಆರ್. ಸಿ. ಬಿ ಹುಡುಗರ ಜೊತೆಗಿದೆ. ಇಂದಲ್ಲ ನಾಳೆ ನಮ್ಮವರೂ ಕಪ್ ಗೆಲ್ಲುತ್ತಾರೆ ಎಂಬ ವಿಶ್ವಾಸ ನನಗಿದೆ. ಓರ್ವ ಕನ್ನಡಿಗನಾಗಿ ನನ್ನ ಬೆಂಬಲ ಯಾವಾಗಲೂ ನಮ್ಮ ಆರ್ಸಿಬಿಗೆ' ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿ ಆರ್ಸಿಬಿ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಿದ್ದರು.

ಮೇ 18ರ ಗುರುವಾರ ಸಂಜೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆದಿತ್ತು. ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದರು. ಆ ರಾಜಕೀಯ ಒತ್ತಡದ ನಡುವೆಯೂ ಅವರು ಆರ್ಸಿಬಿ ಮತ್ತು ಹೈದರಾಬಾದ್ ನಡುವಿನ ಐಪಿಎಲ್ ಪಂದ್ಯ ವೀಕ್ಷಣೆ ಮಾಡಿದ್ದರು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ವಿರಾಟ್ ಕೊಹ್ಲಿ ಶತಕ ವ್ಯರ್ಥ; ಬೆಂಗಳೂರಿನಲ್ಲಿ ಭಾನುವಾರ ನಡೆದ ನಿರ್ಣಾಯಕ ಪಂದ್ಯದಲ್ಲಿ ಆರ್ಸಿಬಿ ಸೋಲು ಕಂಡಿತ್ತು. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಸೋತ ಆರ್ಸಿಬಿ ಪ್ಲೇ ಆಫ್ಗೆ ಹೋಗುವ ಅವಕಾಶ ಕಳೆದುಕೊಂಡಿತು. ವಿರಾಟ್ ಕೊಹ್ಲಿ ಶತಕ ವ್ಯರ್ಥವಾಗಿ ಅಭಿಮಾನಿಗಳು ನಿರಾಸೆ ಅನುಭವಿಸುವಂತೆ ಆಯಿತು.
ಟಾಸ್ಗೆದ್ದ ಗುಜರಾತ್ ಟೈಟಾನ್ಸ್ ಆರ್ಸಿಬಿಯನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು. 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ ತಂಡ 197 ರನ್ ಗಳಿಸಿತು. ಆದರೆ ಬೌಲರ್ಗಳು ತಂಡವನ್ನು ರಕ್ಷಣೆ ಮಾಡುವಲ್ಲಿ ವಿಫಲರಾದರು. 19.1 ಓವರ್ನಲ್ಲಿ 4 ವಿಕೆಟ್ ಕಳೆದುಕೊಂಡ ಗುಜರಾತ್ ತಂಡ ಗೆಲುವು ಸಾಧಿಸಿತು.
ವಿರಾಟ್ ಕೊಹ್ಲಿ ಶತಕ ಕಣ್ತುಂಬಿಕೊಂಡಿದ್ದ ಆರ್ಸಿಬಿ ಅಭಿಮಾನಿಗಳು ನೆಚ್ಚಿನ ತಂಡ ಪಂದ್ಯ ಸೋತು, ಪ್ಲೇ ಆಫ್ಗೆ ಹೋಗಲು ವಿಫಲರಾದಾಗ ನಿರಾಸೆಯಿಂದ ಮನೆಯತ್ತ ಹೊರಟರು. ಕಳೆದ ಮೂರು ಆವೃತ್ತಿಗಳಲ್ಲಿ ಬೆಂಗಳೂರು ತಂಡ ಪ್ಲೇ ಆಫ್ಗೆ ಹೋಗಿತ್ತು. ಆದರೆ ಈ ಬಾರಿ ಉತ್ತಮ ಬ್ಯಾಟಿಂಗ್ ನಡುವೆಯೂ ತಂಡ ಪ್ಲೇ ಆಫ್ಗೆ ಹೋಗಲು ಸಾಧ್ಯವಾಗಲಿಲ್ಲ.
ಬೆಂಗಳೂರು ನಗರದಲ್ಲಿ ಭಾನವಾರ ಸುರಿದ ಭಾರೀ ಮಳೆಯ ನಡುವೆಯೂ ಆರ್ಸಿಬಿ ಪಂದ್ಯ ವೀಕ್ಷಣೆಗೆ ಸಾವಿರಾರು ಜನರು ಆಗಮಿಸಿದ್ದರು. ಮಳೆಯ ಕಾರಣ ಪಂದ್ಯ ತಡವಾಗಿಯೇ ಆರಂಭವಾಗಿತ್ತು. ಆರ್ಸಿಬಿ ಉತ್ತಮ ಬ್ಯಾಟಿಂಗ್ ಪಂದ್ಯವನ್ನು ತಂಡ ಗೆಲ್ಲುವ ಭರವಸೆ ಮೂಡಿಸಿತ್ತು.












Click it and Unblock the Notifications