RCB vs CSK : ಆ ಸೋಲನ್ನು ಇನ್ನೂ ಮರೆತಿಲ್ವಾ? ಸಿಎಸ್ಕೆ ನಾಯಕನಿಗೆ ಆರ್ಸಿಬಿ ಅಭಿಮಾನಿಗಳ ತರಾಟೆ
2024ರ ಐಪಿಎಲ್ ರೋಚಕ ಪಂದ್ಯವೊಂದಕ್ಕೆ ಸಾಕ್ಷಿಯಾಗಿತ್ತು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಲೀಗ್ ಪಂದ್ಯದಲ್ಲಿ ಆರ್ ಸಿಬಿ ಮತ್ತು ಸಿಎಸ್ಕೆ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಗೆದ್ದರೆ ಮಾತ್ರ ಪ್ಲೇ ಆಫ್ ಪ್ರವೇಶಿಸಲು ಎರಡೂ ತಂಡಗಳಿಗೆ ಅವಕಾಶವಿತ್ತು. ಮತ್ತೊಮ್ಮೆ ಕಪ್ ಗೆಲ್ಲಬೇಕು ಎಂದು ನಾಯಕ ಎಂಎಸ್ ಧೋನಿ ಕೂಡ ವಿಶ್ವಾಸ ಇಟ್ಟುಕೊಂಡಿದ್ದರು. ಆದರೆ ರೋಚಕ ಹೋರಾಟ ನೀಡಿದ್ದ ಆರ್ ಸಿಬಿ ಸಿಎಸ್ಕೆ ವಿರುದ್ಧ ಗೆಲ್ಲುವ ಮೂಲಕ ಪ್ಲೇಆಫ್ ಪ್ರವೇಶಿಸಿದ್ದರೆ, ಸಿಎಸ್ಕೆ ಟೂರ್ನಿಯಿಂದಲೇ ಹೊರಬಿದ್ದಿತ್ತು.
ಈ ಪಂದ್ಯದಲ್ಲಿ ಸೋತಿದ್ದು ಸ್ವತಃ ಎಂಎಸ್ ಧೋನಿಗೂ ತುಂಬಾ ಬೇಸರ ತರಿಸಿತ್ತು. ಪ್ಲೇ ಆಫ್ ತಲುಪಿದ್ದರೆ ಚೆನ್ನೈನಲ್ಲಿ ನಡೆದಿದ್ದ ಫೈನಲ್ನಲ್ಲಿ ಆಡಿ ಪ್ರಶಸ್ತಿಯೊಂದಿಗೆ ವಿದಾಯ ಹೇಳುವ ಆಸೆಗೆ ಆರ್ ಸಿಬಿ ತಣ್ಣೀರು ಎರಚಿತ್ತು. ಸಿಎಸ್ಕೆ ಅಭಿಮಾನಿಗಳು ಕೂಡ ಅಂದಿನ ಸೋಲಿಗೆ ಭಾರಿ ಬೇಸರಗೊಂಡಿದ್ದರು.

ಇತ್ತೀಚೆಗೆ ಸಿಎಸ್ಕೆ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ನೀಡಿರುವ ಹೇಳಿಕೆಯೊಂದು ಆರ್ ಸಿಬಿ ಅಭಿಮಾನಿಗಳಿಗೆ ಸಿಟ್ಟು ತರಿಸಿದ್ದು ನೀವಿನ್ನೂ ಆ ಸೋಲನ್ನೂ ಮರೆತಿಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ. ಇದೇ ವಿಚಾರಕ್ಕೆ ಇದೀಗ ಸಿಎಸ್ಕೆ ಮತ್ತು ಆರ್ ಸಿಬಿ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಜಗಳವಾಡಿಕೊಳ್ಳುತ್ತಿದ್ದಾರೆ.
ರುತುರಾಜ್ ಗಾಯಕ್ವಾಡ್ ಹೇಳಿದ್ದೇನು?
ಖಾಸಗಿ ಕಾರ್ಯಕ್ರಮದ ವೇಳೆ ಮೈಕ್ನಲ್ಲಿ ಮಾತನಾಡುವಂತೆ ರುತುರಾಜ್ ಗಾಯಕ್ವಾಡ್ ಅವರಿಗೆ ಕೇಳಲಾಗಿದೆ. ಈ ಸಂದರ್ಭದಲ್ಲಿ ಗಾಯಕ್ವಾಡ್ ಕೈಯಲ್ಲಿದ್ದ ಮೈಕ್ ಆಫ್ ಮಾಡಲಾಗಿತ್ತು, ಇದೇ ನೆಪದಲ್ಲಿ ರುತುರಾಜ್ ಗಾಯಕ್ವಾಡ್ ಯಾರೋ ಆರ್ ಸಿಬಿ ಅಭಿಮಾನಿಗಳೇ ಮಾಡಿರಬೇಕು ಎಂದು ವ್ಯಂಗ್ಯವಾಗಿ ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ಸಿಎಸ್ಕೆ ನಾಯಕನಿಗೆ ಬಹುಶಃ ಆ ಪಂದ್ಯದ ಸೋಲಿನ ನೋವು ಇನ್ನೂ ಕಡಿಮೆಯಾಗಿಲ್ಲ ಎನಿಸುತ್ತದೆ ಎಂದು ಟೀಕಿಸಿದ್ದಾರೆ.
ನಿಮ್ಮ ಮೈಕ್ ಆಫ್ ಆದರೆ ಆರ್ ಸಿಬಿ ಅಭಿಮಾನಿಗಳು ಹೇಗೆ ಕಾರಣವಾಗುತ್ತಾರೆ. ನಿಮ್ಮ ಜೀವನದಲ್ಲಿ ಆಗುವುದಕ್ಕೆಲ್ಲಾ ಆರ್ ಸಿಬಿ ಅಭಿಮಾನಿಗಳು ಕಾರಣವಾ? ಎಂದು ಪ್ರಶ್ನೆ ಮಾಡಿದ್ದಾರೆ. ಅಭಿಮಾನಿಗಳು ಕಿತ್ತಾಡುವುದು ಸಹಜ, ಆದರೆ ಆಟಗಾರರಾಗಿ ನೀವು ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಅಭಿಮಾನಿಗಳು ಬುದ್ದಿವಾದ ಹೇಳಿದ್ದಾರೆ.
ರುತುರಾಜ್ ಗಾಯಕ್ವಾಡ್ ಹೇಳಿಕೆಯನ್ನು ಸಿಎಸ್ಕೆ ಅಭಿಮಾನಿಗಳು ಸಮರ್ಥನೆ ಮಾಡಿಕೊಂಡಿದ್ದು. ಅವರು ತಮಾಷೆಯಾಗಿ ಹೇಳಿದ್ದಾರೆ, ಇಷ್ಟಕ್ಕೆ ಆರ್ ಸಿಬಿ ಅಭಿಮಾನಿಗಳು ಟೀಕಿಸುತ್ತಿರುವುದು ಸರಿಯಲ್ಲ ಎಂದಿದ್ದಾರೆ. ಆದರೆ ಆರ್ ಸಿಬಿ ಅಭಿಮಾನಿಗಳು ಮಾತ್ರ ಇಷ್ಟಕ್ಕೆ ಸುಮ್ಮನೆ ಬಿಡುವುದಿಲ್ಲ 2025ರ ಐಪಿಎಲ್ ಆರಂಭವಾಗಲಿ ನಿಮಗೆ ತೋರಿಸುತ್ತೇವೆ ಎಂದು ಹೇಳುತ್ತಿದ್ದಾರೆ.












Click it and Unblock the Notifications