Ranji Trophy: ಕರ್ನಾಟಕ ವಿರುದ್ಧ ಹೋರಾಟ ಕೊಟ್ಟ ತಮಿಳುನಾಡು: ರೋಚಕ ಡ್ರಾನಲ್ಲಿ ಪಂದ್ಯ ಅಂತ್ಯ
ಚೆನ್ನೈನ ಎಂ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ತಮಿಳುನಾಡು ವಿರುದ್ಧದ ರಣಜಿ ಟ್ರೋಫಿ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಕರ್ನಾಟಕ ಯಶಸ್ವಿಯಾಗಿದೆ. ಗೆಲುವಿಗಾಗಿ ಎರಡೂ ಪಂದ್ಯಗಳು ಜಿದ್ದಾಜಿದ್ದಿನಿಂದ ಹೋರಾಡಿದರೂ, ಎರಡೂ ತಂಡಗಳು ಗೆಲುವಿನ ದಡ ತಲುಪಲು ಸಾಧ್ಯವಾಗಲಿಲ್ಲ.
ಪಂದ್ಯದಲ್ಲಿ ಸ್ಪಷ್ಟ ಮೇಲುಗೈ ಸಾಧಿಸಿದ್ದ ಕರ್ನಾಟಕ ಈ ಪಂದ್ಯವನ್ನು ಗೆಲ್ಲುವ ವಿಶ್ವಾಸದಲ್ಲಿತ್ತು. ಆದರೆ ತಮಿಳುನಾಡು ಬ್ಯಾಟರ್ ಗಳು ಹೋರಾಟ ಕೊಟ್ಟ ಪರಿಣಾಮ ಕೊನೆಯ ಓವರ್ ವರೆಗೂ ಈ ಪಂದ್ಯ ಸಾಕಷ್ಟಯ ಕುತೂಹಲ ಕೆರಳಿಸಿತ್ತು. ಅಂತಿಮವಾಗಿ ಡ್ರಾನಲ್ಲಿ ಪಂದ್ಯ ಅಂತ್ಯವಾಯಿತು.

ಮೊದಲ ಇನ್ನಿಂಗ್ಸ್ನಲ್ಲಿ 151 ರನ್ಗಳಿಗೆ ಆಲೌಟ್ ಆಗಿದ್ದ ತಮಿಳುನಾಡು ಎರಡನೇ ಇನ್ನಿಂಗ್ಸ್ನಲ್ಲಿ ಕರ್ನಾಟಕದ ಮಾರಕ ಬೌಲಿಂಗ್ ದಾಳಿ ಎದುರು ಉತ್ತಮ ಹೋರಾಟ ಕೊಟ್ಟರು. ಕರ್ನಾಟಕ ಮೊದಲ ಇನ್ನಿಂಗ್ಸ್ನಲ್ಲಿ 366 ರನ್ ಗಳಿಸಿತ್ತು. ತಮಿಳುನಾಡು 151 ರನ್ಗಳಿಗೆ ಆಲೌಟ್ ಆಗಿದ್ದರಿಂದ 215 ರನ್ಗಳ ಮುನ್ನಡೆ ಪಡೆದುಕೊಂಡಿತ್ತು. ಬಳಿಕ ಎರಡನೇ ಇನ್ನಿಂಗ್ಸ್ನಲ್ಲಿ ಕರ್ನಾಟಕ 139 ರನ್ಗಳಿಗೆ ಆಲೌಟ್ ಆಗುವ ಮೂಲಕ ಒಟ್ಟಾರೆ 354 ರನ್ಗಳ ಮುನ್ನಡೆ ಪಡೆದುಕೊಂಡಿತ್ತು.
ನಾಲ್ಕನೇ ಇನ್ನಿಂಗ್ಸ್ನಲ್ಲಿ ತಮಿಳುನಾಡು ಗೆಲುವಿಗೆ 355 ರನ್ಗಳನ್ನು ಗಳಿಸಬೇಕಿತ್ತು. ಮೂರನೇ ದಿನದಾಂತ್ಯಕ್ಕೆ 36 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತ್ತು. ನಾಲ್ಕನೇ ದಿನ ಕರ್ನಾಟಕ ಗೆಲುವಿನ ಆಸೆಯೊಂದಿಗೆ ಮೈದಾನಕ್ಕಿಳಿಯಿತು.
ಬಾಬಾ ಇಂದ್ರಜಿತ್, ವಿಜಯ್ ಶಂಕರ್ ಹೋರಾಟ
ಆದರೆ ಕರ್ನಾಟಕದ ಗೆಲುವಿನ ಕನಸಿಗೆ ಅಡ್ಡಿಯಾಗಿ ನಿಂತವರು ಬಾಬಾ ಇಂದ್ರಜಿತ್ ಮತ್ತು ವಿಜಯ್ ಶಂಕರ್ ಒಂದು ಹಂತದಲ್ಲಿ ಈ ಜೋಡಿ ತಮಿಳುನಾಡಿಗೆ ಐತಿಹಾಸಿಕ ಜಯ ತಂದುಕೊಡುವ ಹೊಸ್ತಿಲಲ್ಲಿದ್ದರು. ಆದರೆ ಕರ್ನಾಟಕ ಬೌಲರ್ ಗಳು ಕೊನೆಯ ಓವರ್ ಗಳಲ್ಲಿ ಇವರಿಬ್ಬರನ್ನು ಔಟ್ ಮಾಡುವ ಮೂಲಕ ಪಂದ್ಯವನ್ನು ಡ್ರಾದತ್ತ ಮುನ್ನಡೆಸಿದರು.
ಬಾಬಾ ಇಂದ್ರಜಿತ್ 194 ಎಸೆತಗಳಲ್ಲಿ 98 ರನ್ ಗಳಿಸಿ, ಎರಡು ರನ್ಗಳಿಂದ ಶತಕ ವಂಚಿತರಾದರು. ವಿಜಯ್ ಶಂಕರ್ 107 ಎಸೆತಗಳಲ್ಲಿ 61 ರನ್ ಗಳಿಸಿದರು. ಈ ಜೋಡಿ 125 ರನ್ಗಳ ಜೊತೆಯಾಟದ ಮೂಲಕ ಕರ್ನಾಟಕ ಬೌಲರ್ ಗಳನ್ನು ಕಾಡಿದರು.
ಅಂತಿಮವಾಗಿ 8 ವಿಕೆಟ್ ಕಳೆದುಕೊಂಡು 338 ರನ್ ಗಳಿಸಿದ ತಮಿಳುನಾಡು ಪಂದ್ಯವನ್ನು ಡ್ರಾ ಮಾಡಿಕೊಂಡಿತು. ವಿಜಯ್ ಕುಮಾರ್ ವೈಶಾಖ್ 3 ವಿಕೆಟ್ ಪಡೆದರೆ. ಹಾರ್ದಿಕ್ ರಾಜ್ 2 ವಿಕೆಟ್ ಪಡೆದರು. ವಿಧ್ವತ್ ಕಾವೇರಪ್ಪ ಮತ್ತು ಶಶಿ ಕುಮಾರ್ ಕೆ ತಲಾ ಒಂದು ವಿಕೆಟ್ ಪಡೆದುಕೊಂಡರು.
ಈ ಡ್ರಾ ಮೂಲಕ ತಮಿಳುನಾಡು ಸಿ ಗುಂಪಿನ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಕುಸಿದಿದೆ. ಕರ್ನಾಟಕ ಎರಡನೇ ಸ್ಥಾನದಿಂದ ಮೊದಲನೇ ಸ್ಥಾನಕ್ಕೇರಿದೆ. ಮುಂದಿನ ಪಂದ್ಯದಲ್ಲಿ ಕರ್ನಾಟಕ ಛತ್ತಿಸ್ಗಢ ತಂಡವನ್ನು ಎದುರಿಸಲಿದೆ. ಫೆಬ್ರವರಿ 16ರಂದು ಈ ಪಂದ್ಯ ಆರಂಭವಾಗಲಿದೆ.












Click it and Unblock the Notifications