RCB : ಇಷ್ಟವಿಲ್ಲದಿದ್ದರೂ ಹೆದರಿಸಿ ಆರ್ಸಿಬಿ ತಂಡಕ್ಕಾಗಿ ಆಡಿಸಿದರು: ಮಾಜಿ ಆಟಗಾರನ ಸ್ಫೋಟಕ ಹೇಳಿಕೆ
ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ತಾನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕಾಗಿ ಆಡಲು ಸಿದ್ಧವಾಗಿರಲಿಲ್ಲ. ಆದರೆ ಬೆದರಿಕೆ ಹಾಕುವ ಮೂಲಕ ಆರ್ಸಿಬಿ ತಂಡಕ್ಕಾಗಿ ಆಡುವಂತೆ ಮಾಡಲಾಯಿತು ಎಂದು ಗಂಭೀರ ಆರೋಪ ಮಾಡಿದ್ದಾರೆ.
ಭಾರತ ತಂಡದ ಮಾಜಿ ವೇಗದ ಬೌಲರ್ ಪ್ರವೀಣ್ ಕುಮಾರ್ ಹಳೆಯ ಘಟನೆಯನ್ನು ಬಹಿರಂಗಪಡಿದ್ದಾರೆ. ಐಪಿಎಲ್ ಮಾಜಿ ನಿರ್ದೇಶಕ ಲಲಿತ್ ಮೋದಿ ವಿರುದ್ಧ ಅವರು ಬೆದರಿಕೆ ಆರೋಪ ಮಾಡಿದ್ದಾರೆ. ಲಲ್ಲಾಂಟಾಪ್ ಜೊತೆಗಿನ ಮಾತುಕತೆ ಸಂದರ್ಭದಲ್ಲಿ ಪ್ರವೀಣ್ ಕುಮಾರ್ ಹಲವು ಆಸಕ್ತಿಕರ ಮಾಹಿತಿ ತಿಳಿಸಿದ್ದಾರೆ.

ಐಪಿಎಲ್ ಮೊದಲ ಆವೃತ್ತಿಯಲ್ಲಿ ತಾನು ಡೆಲ್ಲಿ ಡೇರ್ ಡೆವಿಲ್ಸ್ ತಂಡಕ್ಕಾಗಿ ಆಡಲು ಬಯಸಿದ್ದೆ. ಅದು ತನ್ನ ಸ್ವಂತ ಸ್ಥಳ ಮೀರತ್ ನಗರಕ್ಕೆ ಸಮೀಪವಿದ್ದ ಕಾರಣ ಆ ನಿರ್ಧಾರ ಮಾಡಿದ್ದೆ ಎಂದಿದ್ದಾರೆ. ಆದರೆ ಐಪಿಎಲ್ ಹರಾಜಿನಲ್ಲಿ ಆರ್ಸಿಬಿ ತಂಡ ನನ್ನನ್ನು ಖರೀದಿ ಮಾಡಿತ್ತು, ಈ ಬಗ್ಗೆ ಮಾತನಾಡಲು ಲಲಿತ್ ಮೋದಿಯವರನ್ನು ಸಂಪರ್ಕಿಸಿದಾಗ ತನ್ನ ವೃತ್ರಿಜೀವನವನ್ನೆ ಕೊನೆಗಾಣಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ಹೇಳಿದ್ದಾರೆ.
"ನಾನು ಆರ್ ಸಿಬಿ ತಂಡಕ್ಕಾಗಿ ಆಡಲು ಬಯಸಿರಲಿಲ್ಲ, ಬೆಂಗಳೂರು ನಾನಿರುವ ಸ್ಥಳದಿಂದ ದೂರ ಇತ್ತು, ನನಗೆ ಇಂಗ್ಲಿಷ್ ಕೂಡ ಬರುತ್ತಿರಲಿಲ್ಲ, ಅಲ್ಲಿನ ಆಹಾರ ನನಗೆ ಇಷ್ಟವಾಗಲಿಲ್ಲ. ದೆಹಲಿ ಮೀರತ್ ನಗರಕ್ಕೆ ಹತ್ತಿರದಲ್ಲಿತ್ತು. ಆದರೂ ಪೇಪರ್ ಗೆ ಸಹಿ ಹಾಕಿದ್ದೆ ಅದು ಕಾಂಟ್ರಾಕ್ಟ್ ಎಂದು ನನಗೆ ಗೊತ್ತಿರಲಿಲ್ಲ. ಬೆಂಗಳೂರು ಪರ ಆಡಬೇಕೆ ಹೊರತು ದೆಹಲಿ ಪರ ಅಲ್ಲ ಎಂದು ಲಲಿತ್ ಮೋದಿ ಕರೆ ಮಾಡಿ ವೃತ್ತಿ ಜೀವನವನ್ನೇ ಕೊನೆಗಾಣಿಸುವ ಬೆದರಿಕೆ ಹಾಕಿದ್ದರು ಎಂದಿದ್ದಾರೆ.
ಪಾಕ್ ಆಟಗಾರರ ಮೇಲೆ ಟ್ಯಾಂಪರಿಂಗ್ ಆರೋಪ
ಬಾಲ್ ಟ್ಯಾಂಪರಿಂಗ್ ಬಗ್ಗೆ ಕೂಡ ಮಾತನಾಡಿರುವ ಪ್ರವೀಣ್ ಕುಮಾರ್ ತಮ್ಮ ಕಾಲದಲ್ಲಿ ಬಾಲ್ ಟ್ಯಾಂಪರಿಂಗ್ ಸಾಮಾನ್ಯವಾಗಿತ್ತು, ಆದರೆ ಪಾಕಿಸ್ತಾನದ ಆಟಗಾರರು ರಿವರ್ಸ್ ಸ್ವಿಂಗ್ ಹೆಚ್ಚಿಸಲು ಇದನ್ನು ಸ್ವಲ್ಪ ಹೆಚ್ಚಾಗೆ ಮಾಡುತ್ತಿದ್ದರು ಎಂದು ಹೇಳಿದ್ದಾರೆ.
1990ರ ಬಳಿಕ ರಿವರ್ಸ್ ಸ್ವಿಂಗ್ ಬೌಲರ್ಗಳಿಗೆ ಪ್ರಮುಖ ಅಸ್ತ್ರವಾಗಿತ್ತು, ಪಾಕಿಸ್ತಾನ ತಂಡದ ವೇಗಿಗಳು ಇದನ್ನು ಚನ್ನಾಗಿ ಕಲಿತಿದ್ದರು ಎನ್ನಲಾಗುತ್ತದೆ. ಚೆಂಡನ್ನು ಟ್ಯಾಂಪರಿಂಗ್ ಮಾಡಿದ ನಂತರವೂ ಚೆಂಡನ್ನು ಸ್ವಿಂಗ್ ಮಾಡಲು ಕೌಶಲ್ಯ ಬೇಕಾಗುತ್ತದೆ ಎಂದು ಪ್ರವೀಣ್ ಕುಮಾರ್ ಹೇಳಿದ್ದಾರೆ. ಪಾಕಿಸ್ತಾನದ ಆಟಗಾರರು ಇದನ್ನು ಮಾಡುತ್ತಿದ್ದರು ಆದರೆ ಈಗ ಎಲ್ಲೆಡೆ ಕ್ಯಾಮೆರಾ ಇರುವ ಕಾರಣ ಅದನ್ನು ಸುಲಭವಾಗಿ ಮಾಡಲು ಆಗುವುದಿಲ್ಲ ಎಂದರು.












Click it and Unblock the Notifications