Duleep Trophy: ಕೆಎಲ್ ರಾಹುಲ್ ಹೋರಾಟ ವ್ಯರ್ಥ; ಭರ್ಜರಿ ಗೆಲುವು ಸಾಧಿಸಿದ ಭಾರತ ಬಿ ತಂಡ
ದುಲೀಪ್ ಟ್ರೋಫಿ ಪಂದ್ಯಾವಳಿಯಲ್ಲಿ ಭಾರತ ಎ ತಂಡದ ವಿರುದ್ಧ ಭಾರತ ಬಿ ತಂಡ ಭರ್ಜರಿ ಗೆಲುವು ಸಾಧಿಸಿದೆ. ಕೆಎಲ್ ರಾಹುಲ್ ಹೋರಾಟದ ನಡುವೆ ಕೂಡ ಭಾರತ ಎ ತಂಡ ಸೋಲೊಪ್ಪಿಕೊಂಡಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ಬಿ ತಂಡ 76 ರನ್ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ನವದೀಪ್ ಸೈನಿ ಮಾರಕ ಬೌಲಿಂಗ್ ಭಾರತ ಬಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.
ಟಾಸ್ ಗೆದ್ದ ಭಾರತ ಎ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಬಿ ತಂಡ 321 ರನ್ಗಳಿಗೆ ಆಲೌಟ್ ಆಯಿತು. ಮುಶೀರ್ ಖಾನ್ 181 ರನ್ ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರು. ನವದೀಪ್ ಸೈನಿ 56 ರನ್ ಗಳಿಸಿದರು. ಭಾರತ ಎ ತಂಡದ ಆಕಾಶ್ ದೀಪ್ 4 ವಿಕೆಟ್ ಪಡೆದರೆ, ಆವೇಶ್ ಖಾನ್ ಮತ್ತು ಖಲೀಲ್ ಅಹ್ಮದ್ ತಲಾ ಎರಡು ವಿಕೆಟ್ ಪಡೆದರು.

ಬಳಿಕ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಭಾರತ ಎ ತಂಡ 231 ರನ್ಗಳಿಗೆ ಆಲೌಟ್ ಆಯಿತು. ಮಯಾಂಕ್ ಅಗರ್ವಾಲ್ 36 ರನ್, ಕೆಎಲ್ ರಾಹುಲ್ 37 ರನ್, ರಿಯಾನ್ ಪರಾಗ್ 30 ರನ್, ತನುಷ್ ಕೊಟಿಯಾನ್ 32 ರನ್ ಗಳಿಸಿದರು. ಭಾರತ ಬಿ ತಂಡದ ಮುಖೇಶ್ ಕುಮಾರ್, ನವದೀಪ್ ಸೈನಿ ತಲಾ 3 ವಿಕೆಟ್ ಪಡೆದರೆ, ಸಾಯಿ ಕಿಶೋರ್ 2 ವಿಕೆಟ್ ಪಡೆದರು.
90 ರನ್ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ ಬಿ ತಂಡ 184 ರನ್ಗಳಿಗೆ ಆಲೌಟ್ ಆಯಿತು. ರಿಷಬ್ ಪಂತ್ 61 ರನ್ ಗಳಿಸಿದರೆ, ಸರ್ಫರಾಜ್ ಖಾನ್ 46 ರನ್ ಗಳಿಸಿದರು. ಆಕಾಶ್ ದೀಪ್ 5 ವಿಕೆಟ್ ಪಡೆದರೆ, ಖಲೀಲ್ ಅಹ್ಮದ್ 3 ವಿಕೆಟ್ ಪಡೆದರು.
ಕೆಎಲ್ ರಾಹುಲ್ ಹೋರಾಟ ವ್ಯರ್ಥ
ಎರಡನೇ ಇನ್ನಿಂಗ್ಸ್ನಲ್ಲಿ 275 ರನ್ಗಳ ಸವಾಲಿನ ಗುರಿಯನ್ನು ಬೆನ್ನತ್ತಿದ ಭಾರತ ಎ ತಂಡ 198 ರನ್ಗಳಿಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು. ಕೆಎಲ್ ರಾಹುಲ್ 57 ರನ್ ಗಳಿಸಿದರೆ, ಆಕಾಶ್ ದೀಪ್ 43 ರನ್ ಗಳಿಸಿದರು. ಉಳಿದ ಬ್ಯಾಟರ್ ಗಳಿಂದ ದೊಡ್ಡ ಮೊತ್ತ ಕಲೆಹಾಕಲು ಸಾಧ್ಯವಾಗಲಿಲ್ಲ. ಯಶ್ ದಯಾಳ್ 3 ವಿಕೆಟ್ ಪಡೆದರೆ, ಮುಖೇಶ್ ಕುಮಾರ್ ಮತ್ತು ನವದೀಪ್ ಸೈನಿ ತಲಾ 2 ವಿಕೆಟ್ ಪಡೆದುಕೊಂಡರು.












Click it and Unblock the Notifications