IPL 2025: ತಂಡದ ಆಟಗಾರರಿಗೆ ವಾರ್ನಿಂಗ್ ಕೊಟ್ಟ ಮುಂಬೈ ಇಂಡಿಯನ್ಸ್
2024ರ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಸಾಕಷ್ಟು ವಿಚಾರಗಳಿಗೆ ಸುದ್ದಿ ಮಾಡಿತ್ತು. ಐದು ಬಾರಿ ಕಪ್ ಗೆದ್ದುಕೊಟ್ಟ ನಾಯಕ ರೋಹಿತ್ ಶರ್ಮಾರನ್ನು ಕೆಳಗಿಳಿಸಿ ಹಾರ್ದಿಕ್ ಪಾಂಡ್ಯಾಗೆ ನಾಯಕತ್ವ ಕೊಟ್ಟಿದ್ದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ರೋಹಿತ್ ಶರ್ಮಾ ಮತ್ತು ಮುಂಬೈ ಇಂಡಿಯನ್ಸ್ ಅಭಿಮಾನಿಗಳು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದರು. ತಂಡದಲ್ಲಿ ಮೂಡಿದ್ದ ಬಿರುಕು ಪಂದ್ಯಗಳ ಫಲಿತಾಂಶದ ಮೇಲೆ ಪರಿಣಾಮ ಬೀರಿತ್ತು.
ನಾಯಕ ಹಾರ್ದಿಕ್ ಪಾಂಡ್ಯರನ್ನು ವ್ಯಾಪಕವಾಗಿ ಟ್ರೋಲ್ ಮಾಡಲಾಗಿತ್ತು. ಮೈದಾನದಲ್ಲಿಯೂ ಅಭಿಮಾನಿಗಳು ಪಾಂಡ್ಯರನ್ನು ಅವಮಾನಿಸಿದ್ದರು. ಡ್ರೆಸ್ಸಿಂಗ್ ರೂಂನಲ್ಲಿ ವಾತಾವರಣ ಸರಿಯಿಲ್ಲ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಅಸಮಾಧಾನಗೊಂಡಿದ್ದು 2025ರ ಐಪಿಎಲ್ಗೆ ತಂಡದಲ್ಲಿ ಇರುವುದಿಲ್ಲ ಎಂದೆಲ್ಲಾ ವರದಿಯಾಗಿತ್ತು.

2025ರ ಮೆಗಾ ಹರಾಜಿಗೆ ಮುನ್ನ ಮುಂಬೈ ಇಂಡಿಯನ್ಸ್ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿತ್ತು. ರೋಹಿತ್, ಬುಮ್ರಾ, ಪಾಂಡ್ಯ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾರನ್ನು ತಂಡದಲ್ಲಿ ಉಳಿಸಿಕೊಂಡು ಉಳಿದ ಆಟಗಾರರನ್ನು ಬಿಡುಗಡೆ ಮಾಡಿತ್ತು.
ಆಟಗಾರರಿಗೆ ಎಚ್ಚರಿಕೆ ಕೊಟ್ಟ ಮುಂಬೈ ಇಂಡಿಯನ್ಸ್
ಕಳೆದ ವರ್ಷ ತಂಡದಲ್ಲಿದ್ದ ಅಸಮಾಧಾನ ಈ ಭಾರಿ ಕಡಿಮೆಯಾಗಲಿದ್ದು ತಂಡ ಉತ್ತಮ ಪ್ರದರ್ಶನ ನೀಡಬೇಕು ಎನ್ನುವುದು ಫ್ರಾಂಚೈಸಿಯ ಆಶಯವಾಗಿದೆ. ಅದಕ್ಕಾಗಿಯೇ 2025ರ ಐಪಿಎಲ್ಗೆ ಮುನ್ನ ತಂಡದ ಆಟಗಾರರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ವರದಿಯಾಗಿದೆ.
ಮುಂಬೈ ಇಂಡಿಯನ್ಸ್ ತಂಡದ ಮಾಲೀಕರು ಇತ್ತೀಚೆಗೆ ಮುಖ್ಯ ಆಟಗಾರರ ಜೊತೆ ಸಭೆ ನಡೆಸಿದ್ದು ನಾಯಕ ಹಾರ್ದಿಕ್ ಪಾಂಡ್ಯರನ್ನು ದುರ್ಬಲಗೊಳಿಸಲು ಪ್ರಯತ್ನ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಐಪಿಎಲ್ ಆರಂಭವಾಗಲು ಇನ್ನು ಮೂರು ತಿಂಗಳು ಸಮಯವಿದ್ದು ಈ ಬಾರಿ ಯಾವುದೇ ಗೊಂದಲವಾಗದಂತೆ ನೋಡಿಕೊಳ್ಳಲು ತಂಡದ ಆಡಳಿತ ಮಂಡಳಿ ನಿರ್ಧರಿಸಿದೆ.
ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಯಶಸ್ವೀ ಫ್ರಾಂಚೈಸಿ ಆಗಿದ್ದು, ತಂಡದ ನಾಯಕತ್ವವನ್ನು ದುರ್ಬಲಗೊಳಿಸುವುದು ತಂಡದ ಪ್ರದರ್ಶನ ಮತ್ತು ಒಗ್ಗಟ್ಟಿನ ಮೇಲೆ ಪರಿಣಾಮ ಬೀರಬಹುದು. ಭಾರತ ತಂಡವನ್ನು ಮುನ್ನಡೆಸಿರುವ ಹಾರ್ದಿಕ್ ಪಾಂಡ್ಯ ಅವರ ಸಾಮರ್ಥ್ಯದ ಬಗ್ಗೆ ಡ್ರೆಸ್ಸಿಂಗ್ ರೂಂನಲ್ಲಿ ಚರ್ಚೆ ಮಾಡಬಾರದು. ಹಾರ್ದಿಕ್ ಸರಿಯಾದ ನಾಯಕನಲ್ಲ ಎನ್ನುವ ಭಾವನೆ ತಂಡದಲ್ಲಿ ಇದ್ದಿದ್ದರೆ ಅದು ತಂಡದ ಒಡಕಿಗೆ ಕಾರಣವಾಗುತ್ತದೆ ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ಕ್ರಿಕ್ಬ್ಲಾಗರ್ ವರದಿ ಮಾಡಿದೆ.
2025ರ ಐಪಿಎಲ್ಗೆ ಮುಂಬೈ ಇಂಡಿಯನ್ಸ್ ತಂಡ
ರೋಹಿತ್ ಶರ್ಮಾ, ವಿಲ್ ಜ್ಯಾಕ್ಸ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ನಾಯಕ), ರಾಬಿನ್ ಮಿಂಜ್ (ವಿಕೆಟ್ ಕೀಪರ್), ರಿಯಾನ್ ರಿಕೆಲ್ಟನ್ (ವಿಕೆಟ್ ಕೀಪರ್), ನಮನ್ ಧೀರ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್, ಅಶ್ವನಿ ಕುಮಾರ್, ಮಿಚೆಲ್ ಸ್ಯಾಂಟ್ನರ್, ರೀಸ್ ಟೋಪ್ಲಿ, ದೀಪಕ್ ಚಹಾರ್, ಶ್ರೀಜಿತ್ ಕೃಷ್ಣನ್, ರಾಜ್ ಅಂಗದ್ ಬಾವಾ, ವಿಘ್ನೇಶ್ ಪುತ್ತೂರು, ಸತ್ಯರಾಯನ ರಾಜು, ಬೆವನ್ ಜೇಕಬ್ಸ್, ಅರ್ಜುನ್ ತೆಂಡೂಲ್ಕರ್, ಲಿಜಾದ್ ವಿಲಿಯಮ್ಸ್.












Click it and Unblock the Notifications