ಮತ್ತೆ ಚಿಗುರೊಡೆದ ಧಾರವಾಡ ಕರ್ನಾಟಕ ವಿವಿ ಕ್ರೀಡಾಂಗಣದ ಕನಸು!
ಧಾರವಾಡ, ಜನವರಿ 12: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿನ ಅಂತರಾಷ್ಟ್ರೀಯ ಕ್ರೀಡಾಂಗಣದ ಕನಸು ಮತ್ತೆ ಚಿಗುರೊಡೆದಿದೆ. ಕ್ರೀಡಾಂಗಣ ನಿರ್ಮಾಣ ಮಾಡುವ ಕಾಮಗಾರಿ ಸುಮಾರು 30 ವರ್ಷಗಳಿಂದ ನೆನಗುದಿಗೆ ಬಿದ್ದಿದೆ.
ಕಾರ್ಮಿಕ ಖಾತೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಅರ್ಧಕ್ಕೆ ನಿಂತಿರುವ ಕ್ರೀಡಾಂಗಣದ ಕಾಮಗಾರಿಯನ್ನು ವೀಕ್ಷಣೆ ಮಾಡಿದರು.

ಕವಿವಿ ಕುಲಪತಿ ಪ್ರೊ. ಕೆ. ಬಿ. ಗುಡಸಿ, ಮೌಲ್ಯಮಾಪನ ಕುಲಸಚಿವ ಪ್ರೊ. ಎನ್. ವೈ. ಮಟ್ಟಿಹಾಳ, ಕವಿವಿ ಕ್ರೀಡಾ ವಿಭಾಗದ ಮಖ್ಯಸ್ಥ ಡಾ. ಬಿ. ಎಂ. ಪಾಟೀಲ, ಮಹಾನಗರ ಪಾಲಿಕೆ ಸದಸ್ಯ ಡಾ. ಮಯೂರ ಮೋರೆ ಸೇರಿದಂತೆ ಅಧಿಕಾರಿಗಳು, ಕ್ರೀಡಾಪಟುಗಳು, ವಿದ್ಯಾರ್ಥಿಗಳ ಜೊತೆ ಮಾತುಕತೆ ನಡೆಸಿದರು.
ಬಳಿಕ ಮಾತನಾಡಿದ ಸಚಿವರು, "ಜಾಗತಿಕ ಗುಣಮಟ್ಟದ ಕ್ರೀಡಾಂಗಣ ನಿರ್ಮಣಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಕಾಮಗಾರಿಗೆ ಹೊಸ ಪ್ರಸ್ತಾವನೆ ಸಲ್ಲಿಕೆ ಮಾಡಲಾಗುತ್ತದೆ" ಎಂದು ಹೇಳಿದರು.
"ಏಷ್ಯ ಖಂಡದಲ್ಲಿಯೇ ಅತ್ಯಂತ ದೊಡ್ಡದಾದ ಮತ್ತು ನೈಸರ್ಗಿಕವಾಗಿರುವ ಕ್ರೀಡಾಂಗಣ ನಿರ್ಮಿಸಲು 1996ರಲ್ಲಿಯೇ ಕಾಮಗಾರಿ ಆರಂಭಿಸಲಾಗಿತ್ತು. ತಾಂತ್ರಿಕ ಕಾರಣಗಳಿಂದ ಕೆಲಸ ನಿಂತಿದೆ. ಈಗ ಪುನರ್ ಆರಂಭಿಸಲಾಗುವುದು" ಎಂದು ಸಚಿವರು ಭರವಸೆ ನೀಡಿದರು.
"ಮುಂದಿನ ಒಂದು ವಾರದಲ್ಲಿ ಜೆಸಿಬಿ ಮೂಲಕ ಕ್ರೀಡಾಂಗಣ ಸ್ವಚ್ಛತೆ ಕಾರ್ಯ ಕೈಗೊಳ್ಳಲಾಗುವುದು. ಬಹು ವಿದಧ ಕ್ರೀಡೆಗಳನ್ನು ಆಡಲು ಅನುಕೂಲವಾಗುವಂತೆ ಕ್ರೀಡಾಂಗಣ ರೂಪಿಸಲಾಗುವುದು. ಹೆಚ್ಚಿನ ಅನುದಾನಕ್ಕಾಗಿ ಸರಕಾರಕ್ಕೆ ಹೊಸ ಪ್ರಸ್ತಾವನೆ ಸಲ್ಲಿಸಲಾಗುವುದು" ಎಂದು ಹೇಳಿದರು.
ಅರ್ಧಕ್ಕೆ ನಿಂತ ಕಾಮಗಾರಿ; ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಪರಿಸರ ಸ್ನೇಹಿ ಅಂತರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣ ಮಾಡುವ ಕಾಮಗಾರಿ 30 ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಎಚ್. ಡಿ. ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಸ್ಟೇಡಿಯಂ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ್ದರು. ಆಗ ಕುಲಪತಿಯಾಗಿದ್ದ ರಾಮೇಗೌಡರು ಅಟ್ಲಾಂಟದಲ್ಲಿರುವ ಸ್ಟೇಡಿಯಂ ಮಾದರಿಯಲ್ಲಿ ಇದನ್ನು ನಿರ್ಮಾಣ ಮಾಡಲು ಮುಂದಾಗಿದ್ದರು.
ಕಾಮಗಾರಿ ಆರಂಭಗೊಂಡು ಕೆಲವು ದಿನಗಳ ತನಕ ನಡೆಯಿತು. ಬಳಿಕ ಬಿಲ್ ಬಾಕಿ ಸೇರಿದಂತೆ ವಿವಿಧ ಕಾರಣಕ್ಕೆ ನಿಂತ ಕಾಮಗಾರಿ ಮೂವತ್ತು ವರ್ಷಗಳು ಕಳೆದರೂ ಪೂರ್ಣವಾಗಲೇ ಇಲ್ಲ. ಈಗ ಸ್ಟೇಡಿಯಂ ಜಾಗದಲ್ಲಿ ಕಸ, ಕಡ್ಡಿ ಬೆಳೆದು ನಿಂತಿದೆ.
ಎಲ್ಲವೂ ಅಂದು ಕೊಡಂತೆ ನಡೆದಿದ್ದರೆ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿನ ಅಂತರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣಗೊಂಡು ಕ್ರೀಡಾ ಚಟುವಟಿಕೆಗಳಿಗೆ ವೇದಿಕೆಯಾಗಬೇಕಿತ್ತು. ಆದರೆ ಕಾಮಗಾರಿ ಅರ್ಧಕ್ಕೆ ನಿಂತು ಕಾಮಗಾರಿಯೂ ಕಾಣದ ರೀತಿ ಗಿಡ, ಮುಳ್ಳುಗಳು ಬೆಳೆದು ನಿಂತಿದೆ. ಈಗ ಸರ್ಕಾರ ಈ ಯೋಜನೆಯನ್ನು ಮರು ಆರಂಭಿಸಲು ತೀರ್ಮಾನಿಸಿದೆ.












Click it and Unblock the Notifications