Ind vs Aus: ನಾಯಕ ರೋಹಿತ್ ಶರ್ಮಾಗೆ ಇಲ್ಲ ಅವಕಾಶ! ಕೊನೆಯ ಟೆಸ್ಟ್ಗೆ ಹೀಗಿರಲಿದೆ ಭಾರತ ತಂಡ
5 ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಈಗಾಗಲೇ 1-2 ಹಿನ್ನಡೆ ಅನುಭವಿಸಿರುವ ಭಾರತ ತಂಡಕ್ಕೆ ಈಗ ಸರಣಿ ಸೋಲು ತಪ್ಪಿಸಿಕೊಳ್ಳಲು ಒಂದು ಅವಕಾಶ ಸಿಕ್ಕಿದೆ. ಸಿಡ್ನಿಯಲ್ಲಿ ಶುಕ್ರವಾರದಿಂದ ಕೊನೆಯ ಟೆಸ್ಟ್ ಆರಂಭವಾಗಲಿದ್ದು ಈ ಪಂದ್ಯ ಗೆದ್ದರೆ ಭಾರತ ಸರಣಿಯನ್ನು ಸಮಬಲಗೊಳಿಸುವ ಜೊತೆಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ತಲುಪುವ ಅವಕಾಶವನ್ನು ಜೀವಂತವಾಗಿಟ್ಟುಕೊಳ್ಳಬಹುದಾಗಿದೆ.
ಮೆಲ್ಬೋರ್ನ್ ಟೆಸ್ಟ್ ಸೋಲಿನ ಬಳಿಕ ಕೊನೆಯ ಟೆಸ್ಟ್ನಲ್ಲಿ ಭಾರತ ತಂಡದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡುವ ಸಾಧ್ಯತೆ ಇದೆ. ಮುಖ್ಯವಾಗಿ ತಂಡದ ನಾಯಕನೇ ಬೆಂಚ್ ಕಾಯುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಹೌದು, ಸಿಡ್ನಿ ಟೆಸ್ಟ್ನಲ್ಲಿ ನಾಯಕ ರೋಹಿತ್ ಶರ್ಮಾ ಕಣಕ್ಕಿಳಿಯುವುದು ಬಹುತೇಕ ಅನುಮಾನವಾಗಿದ್ದು, ಜಸ್ಪ್ರೀತ್ ಬುಮ್ರಾ ಭಾರತ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ.

ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಮೊದಲ ಪಂದ್ಯದಲ್ಲಿ ಬುಮ್ರಾ ನಾಯಕತ್ವ ವಹಿಸಿಕೊಂಡಿದ್ದರು. ಮೊದಲ ಪಂದ್ಯದಲ್ಲೇ ಅತ್ಯುತ್ತಮ ಪ್ರದರ್ಶನ ನೀಡಿದ್ದ ಭಾರತ ಪಂದ್ಯ ಗೆದ್ದು ಬೀಗಿತ್ತು, ಬುಮ್ರಾ ನಾಯಕನಾಗಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದರು. ಎರಡನೇ ಟೆಸ್ಟ್ನಿಂದ ರೋಹಿತ್ ಶರ್ಮಾ ತಂಡಕ್ಕೆ ವಾಪಸಾದರು ತಂಡದ ನಾಯಕತ್ವ ವಹಿಸಿಕೊಂಡರು.
ರೋಹಿತ್ ಶರ್ಮಾ ನಾಯಕತ್ವ ವಹಿಸಿಕೊಂಡ ಬಳಿಕ ಭಾರತ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಮಳೆಯ ಕಾರಣದಿಂದ ಗಬ್ಬಾ ಟೆಸ್ಟ್ ಡ್ರಾನಲ್ಲಿ ಅಂತ್ಯವಾಗಿದೆ. ಇಲ್ಲದಿದ್ದರೆ ಆ ಪಂದ್ಯವನ್ನು ಭಾರತ ಸೋಲುವ ಸಾಧ್ಯತೆಯೇ ಹೆಚ್ಚಾಗಿತ್ತು. ಮೆಲ್ಬೋರ್ನ್ ಮತ್ತು ಅಡಿಲೇಡ್ನಲ್ಲಿ ಭಾರತ ಸೋಲುವ ಮೂಲಕ ಸರಣಿಯಲ್ಲಿ ಹಿನ್ನಡೆ ಅನುಭವಿಸಿದೆ.
ನಾಯಕನಾಗಿ ಜವಾಬ್ದಾರಿಯುತ ಇನ್ನಿಂಗ್ಸ್ ಆಡಬೇಕಿದ್ದ ರೋಹಿತ್ ಶರ್ಮಾ ಪದೇ ಪದೇ ಬ್ಯಾಟಿಂಗ್ನಲ್ಲಿ ವಿಫಲವಾಗುತ್ತಿರುವುದು ತಂಡದ ಮೇಲೆ ಹೊರೆ ಎನಿಸಿದೆ. ಇದೇ ಕಾರಣಕ್ಕೆ ಕೊನೆಯ ಟೆಸ್ಟ್ನಲ್ಲಿ ರೋಹಿತ್ ಶರ್ಮಾ ಹೊರಗುಳಿಯುವ ಸಾಧ್ಯತೆ ಇದ್ದು ಅವರ ಬದಲಾಗಿ ಶುಭಮನ್ ಗಿಲ್ ಅವಕಾಶ ಪಡೆಯುವ ಸಾಧ್ಯತೆ ಇದೆ.
ಕೊನೆಯ ಟೆಸ್ಟ್ ಆಗಿರುವ ಕಾರಣ ಬೌಲಿಂಗ್ನಲ್ಲಿ ಕೂಡ ಬದಲಾವಣೆ ಮಾಡುವ ಸಾಧ್ಯತೆ ಇದೆ. ಮೊಹಮ್ಮದ್ ಸಿರಾಜ್ ಬದಲಾಗಿ ಪ್ರಸಿದ್ಧ್ ಕೃಷ್ಣ ಆಡುವ ಸಾಧ್ಯತೆ ಇದೆ. ಆಕಾಶ್ ದೀಪ್ ಬದಲಾಗಿ ಹರ್ಷಿತ್ ರಾಣಾಗೆ ಅವಕಾಶ ಸಿಗಬಹುದು. ರಿಷಬ್ ಪಂತ್ರನ್ನು ಕೂಡ ಕೈಬಿಟ್ಟು ಧ್ರುವ್ ಜುರೆಲ್ಗೆ ಅವಕಾಶ ನೀಡಬಹುದು ಎಂದು ವರದಿಯಾಗಿದ್ದು ಕೊನೆಯ ಟೆಸ್ಟ್ ಗೆಲ್ಲಲು ಭಾರತ ಎಲ್ಲಾ ಪ್ರಯತ್ನ ಮಾಡುವ ಸಾಧ್ಯತೆ ಇದೆ.
ಮೊದಲ ಟೆಸ್ಟ್ನಲ್ಲಿ ಭಾರತವನ್ನು ಗೆಲುವಿನತ್ತ ಮುನ್ನಡೆಸಿದ್ದ ಜಸ್ಪ್ರೀತ್ ಬುಮ್ರಾರೆ ಕೊನೆಯ ಟೆಸ್ಟ್ನಲ್ಲಿ ನಾಯಕತ್ವ ವಹಿಸುವ ಸಾಧ್ಯತೆ ಇದೆ. ಒಂದು ವೇಳೆ ಸಿಡ್ನಿ ಟೆಸ್ಟ್ನಲ್ಲಿ ರೋಹಿತ್ ಶರ್ಮಾ ಆಡದೇ ಇದ್ದರೆ ಅವರು ಯಾವುದೇ ಕ್ಷಣದಲ್ಲಿ ನಿವೃತ್ತಿ ಘೋಷಿಸುವ ಸಾಧ್ಯತೆ ಕೂಡ ಇದೆ. ವಿರಾಟ್ ಕೊಹ್ಲಿ ಕೂಡ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದು ಅವರಿಗೂ ನಿವೃತ್ತಿ ಪಡೆಯಿರು ಎಂದು ಅಭಿಮಾನಿಗಳು ಸಲಹೆ ನೀಡಿದ್ದಾರೆ.
ಭಾರತ ತಂಡದ ಸಂಭಾವ್ಯ ಆಡುವ ಬಳಗ
ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ರಿಷಬ್ ಪಂತ್ / ಧ್ರುವ್ ಜುರೆಲ್, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣಾ/ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ (ನಾಯಕ).












Click it and Unblock the Notifications