IPL 2023: ಸಿಎಸ್ಕೆ ಡೆತ್ ಓವರ್ ಸ್ಪೆಷಲಿಸ್ಟ್ ಆದ ತುಷಾರ್ ದೇಶಪಾಂಡೆ; ಡ್ವೇನ್ ಬ್ರಾವೋ ಪಾತ್ರವೆಂದ ವೇಗಿ
2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 16ನೇ ಸೀಸನ್ನ ಆರನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ತವರಿನ ಪ್ರೇಕ್ಷಕರ ಎದುರು 12 ರನ್ಗಳ ಗೆಲುವು ಸಾಧಿಸಿತು. ಈ ಮೂಲಕ ಆಡಿದ ಎರಡು ಪಂದ್ಯಗಳಲ್ಲಿ ಒಂದು ಗೆಲುವು ಮತ್ತು ಒಂದು ಸೋಲಿನೊಂದಿಗೆ ಎರಡು ಅಂಕಗಳನ್ನು ಗಳಿಸಿದೆ.
ಪಂದ್ಯದ ನಂತರ ಮಾತನಾಡಿದ ಸಿಎಸ್ಕೆ ನಾಯಕ ಎಂಎಸ್ ಧೋನಿ, ತಮ್ಮ ತಂಡದ ಬೌಲಿಂಗ್ ಪ್ರದರ್ಶನದಿಂದ ಹೆಚ್ಚು ಖುಷಿಗೊಂಡಿಲ್ಲ ಎಂದು ಹೇಳಿದರು. ಏಕೆಂದರೆ ದೀಪಕ್ ಚಾಹರ್ ನೇತೃತ್ವದ ಬೌಲಿಂಗ್ ವಿಭಾಗವು ಈ ಪಂದ್ಯದಲ್ಲಿ ಮೂರು ನೋ-ಬಾಲ್ ಮತ್ತು 13 ವೈಡ್ಗಳನ್ನು ಎಸೆದರು.

ಈ ಕುರಿತು ಮಾತನಾಡಿದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ವೇಗದ ಬೌಲರ್ ತುಷಾರ್ ದೇಶಪಾಂಡೆ, ಡೆತ್ ಬೌಲಿಂಗ್ ಮಾಡುವುದು ಸುಲಭದ ಕೌಶಲ್ಯವಲ್ಲ ಎಂದು ಒಪ್ಪಿಕೊಂಡರು. ಆದರೆ 2023ರ ಐಪಿಎಲ್ನಲ್ಲಿ ಸಿಎಸ್ಕೆ ತಂಡದ ಬೌಲಿಂಗ್ ಕೋಚ್ ಡ್ವೇನ್ ಬ್ರಾವೋ ಅವರಿಂದ ಬೌಲಿಂಗ್ ತಂತ್ರಗಳನ್ನು ಕಲಿಯಲು ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿದರು.
ವೆಸ್ಟ್ ಇಂಡೀಸ್ ಮತ್ತು ಸಿಎಸ್ಕೆ ತಂಡದ ಮಾಜಿ ಅನುಭವಿ ಆಲ್ರೌಂಡರ್ ಡ್ವೇನ್ ಬ್ರಾವೋ ಅವರ ಪಾತ್ರವನ್ನು ತುಂಬಲು ಪ್ರಯತ್ನಿಸುತ್ತೇನೆ ಎಂದರು. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಅಂಬಟಿ ರಾಯುಡು ಬದಲಿಗೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ತುಷಾರ್ ದೇಶಪಾಂಡೆ ತಮ್ಮ ನಾಲ್ಕು ಓವರ್ಗಳ ಕೋಟಾದಲ್ಲಿ 45 ರನ್ ನೀಡಿ ಎರಡು ವಿಕೆಟ್ ಕಬಳಿಸಿದರು.
11 ಎಸೆತಗಳನ್ನು ಒಳಗೊಂಡ ತನ್ನ ಮೊದಲ ಓವರ್ನಲ್ಲಿ 18 ರನ್ಗಳನ್ನು ಬಿಟ್ಟುಕೊಟ್ಟ ಕಾರಣ ತುಷಾರ್ ದೇಶಪಾಂಡೆ ಉತ್ತಮ ಆರಂಭವನ್ನು ಪಡೆಯಲಿಲ್ಲ. ಆದರೆ, ಅಂತಿಮ ಓವರ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 28 ರನ್ಗಳನ್ನು ರಕ್ಷಿಸಲು ತುಷಾರ್ ದೇಶಪಾಂಡೆಗೆ ನಾಯಕ ಎಂಎಸ್ ಧೋನಿ ಬಾಲ್ ನೀಡಿದರು.

ಕೊನೆಯ ಓವರ್ನಲ್ಲಿ ತುಷಾರ್ ದೇಶಪಾಂಡೆ 15 ರನ್ ನೀಡಿ ಆಯುಷ್ ಬದೋನಿ ವಿಕೆಟ್ ಪಡೆದರು ಮತ್ತು ಅಂತಿಮವಾಗಿ, ಚೆನ್ನೈ ಸೂಪರ್ ಕಿಂಗ್ಸ್ ತಂಡ ಪಂದ್ಯವನ್ನು 12 ರನ್ಗಳಿಂದ ಗೆದ್ದು ಬೀಗಿತು.
"ನಾನು ವರ್ತಮಾನದಲ್ಲಿ ದೃಢ ನಂಬಿಕೆಯುಳ್ಳವನು, ಆಗಿದ್ದು ಆಗಿ ಹೋಗಿದೆ. ಟಿ20 ಕ್ರಿಕೆಟ್ನಲ್ಲಿ ನೋ ಬಾಲ್ ಬೌಲಿಂಗ್ ಮಾಡುವುದು ಅಪರಾಧ. ನಾನು ಹತ್ತು ಹೆಚ್ಚುವರಿ ರನ್ಗಳನ್ನು ನೀಡಿರಬಹುದು ಮತ್ತು ಫಲಿತಾಂಶಗಳು ಎರಡೂ ರೀತಿಯಲ್ಲಿ ಹೋಗಬಹುದು. ಹಾಗಾಗಿ ನಾನು ಉತ್ತಮ ಪುನರಾಗಮನ ಮಾಡುವತ್ತ ಗಮನ ಹರಿಸಿದ್ದೇನೆ. ನಾನು ತಂಡಕ್ಕಾಗಿ ಪಂದ್ಯವನ್ನು ಗೆಲ್ಲಿಸುತ್ತೇನೆ ಎಂದು ನಾನು ನನಗೆ ಹೇಳಿಕೊಳ್ಳುತ್ತೇನೆ," ಎಂದು ಪಂದ್ಯದ ನಂತರ ತುಷಾರ್ ದೇಶಪಾಂಡೆ ತಿಳಿಸಿದರು.
"ನಮ್ಮ ಬೌಲಿಂಗ್ ಕೋಚ್ ಡ್ವೇನ್ ಬ್ರಾವೋ ಸಿಎಸ್ಕೆ ತಂಡದ ಅತ್ಯುತ್ತಮ ಡೆತ್ ಬೌಲರ್ ಆಗಿದ್ದರು. ಇದೀಗ ನಾನು ಅವರಂತೆ ಬೌಲಿಂಗ್ ಮಾಡಲು ಪ್ರಯತ್ನಿಸುತ್ತಿದ್ದೇನೆ. ಸಿಎಸ್ಕೆ ತಂಡಕ್ಕಾಗಿ ನನ್ನ ಪಾತ್ರವು ಡ್ವೇನ್ ಬ್ರಾವೋ ಅವರನ್ನು ಹೋಲುತ್ತದೆ. ನಾನು ಅವರಿಂದ ಡೆತ್ ಓವರ್ಗಳ ಬೌಲಿಂಗ್ ಕೌಶಲ್ಯಗಳನ್ನು ಕಲಿಯಲು ಪ್ರಯತ್ನಿಸುತ್ತಿದ್ದೇನೆ," ಎಂದು ತುಷಾರ್ ದೇಶಪಾಂಡೆ ಹೇಳಿದರು.
ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಮುಂದಿನ ಪಂದ್ಯವನ್ನು ಏಪ್ರಿಲ್ 8ರಂದು ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಮುಂಬೈನಲ್ಲಿ ಸೆಣಸಾಡಲಿದೆ. ತನ್ನ ಮೊದಲ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಸೋತಿರುವ ರೋಹಿತ್ ಶರ್ಮಾ ಪಡೆ ಗೆಲುವಿಗಾಗಿ ಹಾತೊರೆಯುತ್ತಿದೆ.












Click it and Unblock the Notifications