IPL 2023: ಎಂಎಸ್ ಧೋನಿ ನಂತರ ಈತ ಸಿಎಸ್ಕೆ ನಾಯಕನಾಗುತ್ತಾನೆ; ಮಾಜಿ ಕ್ರಿಕೆಟಿಗ ಭವಿಷ್ಯ
2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 16ನೇ ಸೀಸನ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಉತ್ತಮ ಪ್ರದರ್ಶನ ನೀಡುತ್ತಿದ್ದು, ಈವರೆಗೆ ಆಡಿದ ಎರಡು ಪಂದ್ಯಗಳಲ್ಲಿ ಒಂದು ಗೆಲುವು ಮತ್ತು ಒಂದು ಸೋಲಿನೊಂದಿಗೆ ಎರಡು ಅಂಕ ಗಳಿಸಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಬ್ಯಾಟರ್ ರುತುರಾಜ್ ಗಾಯಕ್ವಾಡ್ ಐಪಿಎಲ್ 2023ರಲ್ಲಿ ಸತತ ಎರಡು ಅರ್ಧಶತಕಗಳನ್ನು ಬಾರಿಸಿ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ರುತುರಾಜ್ ಗಾಯಕ್ವಾಡ್ ಆಡಿದ ಎರಡು ಪಂದ್ಯಗಳಿಂದ 183.9 ಸ್ಟ್ರೈಕ್ರೇಟ್ನಲ್ಲಿ 149 ರನ್ ಗಳಿಸಿದ್ದಾರೆ.

ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಂದಿನ ನಾಯಕನಾಗಿ ಎಂಎಸ್ ಧೋನಿಯಿಂದ ಜವಾಬ್ದಾರಿ ವಹಿಸಿಕೊಳ್ಳುವ ಮೊದಲ ಹೆಸರುಗಳಲ್ಲಿ ರುತುರಾಜ್ ಗಾಯಕ್ವಾಡ್ ಒಬ್ಬರಾಗಿದ್ದಾರೆ ಎಂದು ಭಾರತದ ಮಾಜಿ ಕ್ರಿಕೆಟಿಗ ದೀಪ್ ದಾಸ್ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.
26 ವರ್ಷದ ರುತುರಾಜ್ ಗಾಯಕ್ವಾಡ್ ಅವರು 2023ರ ಐಪಿಎಲ್ನಲ್ಲಿ ಅತ್ಯದ್ಭುತ ಫಾರ್ಮ್ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಆಡಿದ ಮೊದಲ ಎರಡು ಪಂದ್ಯಗಳಲ್ಲಿ ಅರ್ಧ ಶತಕಗಳನ್ನು ಬಾರಿಸಿ ಇದುವರೆಗೆ ಅತಿ ಹೆಚ್ಚು ರನ್ ಬಾರಿಸಿದ ಬ್ಯಾಟ್ಸ್ಮನ್ ಆಗಿದ್ದಾರೆ.

ಮತ್ತೊಬ್ಬ ಆರಂಭಿಕ ಡೆವೊನ್ ಕಾನ್ವೇ ಜೊತೆಗೆ ರುತುರಾಜ್ ಗಾಯಕ್ವಾಡ್ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಉತ್ತಮ ಆರಂಭವನ್ನು ನೀಡಿದರು. ಇದರಿಂದ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ಧ ತಮ್ಮ ತವರಿನಂಗಳದಲ್ಲಿ 12 ರನ್ಗಳು ಗೆಲುವು ಪಡೆಯಲು ಸಾದ್ಯವಾಯಿತು.
ಲಕ್ನೋ ಸೂಪರ್ ಜೈಂಟ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದ ನಂತರ ಇಎಸ್ಪಿಎನ್ ಕ್ರಿಕ್ಇನ್ಫೋಗೆ ಮಾತನಾಡಿದ ದೀಪ್ ದಾಸ್ಗುಪ್ತ, ರುತುರಾಜ್ ಗಾಯಕ್ವಾಡ್ ಅವರ ಬ್ಯಾಟಿಂಗ್ ತಂತ್ರ ಮತ್ತು ರನ್ ಗಳಿಸಿರುವುದಕ್ಕೆ ಶ್ಲಾಘಿಸಿದರಲ್ಲದೆ, ಈತನ ಆಟ ನೋಡಲು ವೀಕ್ಷಿಸಲು ಸಂತೋಷವಾಗಿದೆ ಎಂದು ಹೇಳಿದರು.

"ಕಳೆದ ಮೂರು ವರ್ಷಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿರುವ ಕಾರಣ, ಎಂಎಸ್ ಧೋನಿಯಿಂದ ಸಿಎಸ್ಕೆ ತಂಡದ ನಾಯಕತ್ವ ಜವಾಬ್ದಾರಿ ವಹಿಸಿಕೊಳ್ಳುವ ಆಟಗಾರರ ಪಟ್ಟಿಯಲ್ಲಿರುವ ಮೊದಲ ಹೆಸರುಗಳಲ್ಲಿ ರುತುರಾಜ್ ಗಾಯಕ್ವಾಡ್ ಒಬ್ಬರು," ಎಂದು ಭಾರತ ತಂಡದ ಮಾಜಿ ಕ್ರಿಕೆಟಿಗ ದೀಪ್ ದಾಸ್ಗುಪ್ತ ಅಭಿಪ್ರಾಯಪಟ್ಟರು.
"ಚೆನ್ನೈ ಸೂಪರ್ ಕಿಂಗ್ಸ್ ಒಂದು ಫ್ರಾಂಚೈಸಿಯಾಗಿ ತಮ್ಮ ಮುಂದಿನ ನಾಯಕ ತಮ್ಮ ತಂಡಕ್ಕೆ ಹೊಂದಿಕೆಯಾಗಬೇಕೆಂದು ಬಯಸುತ್ತದೆ. ನನ್ನ ಪ್ರಕಾರ, ರುತುರಾಜ್ ಗಾಯಕ್ವಾಡ್ ಈಗಾಗಲೇ ಆ ತಂಡದ ಪರಿಸ್ಥಿತಿಗೆ ಹೊಂದಿಕೊಂಡಿದ್ದಾರೆ," ದೀಪ್ ದಾಸ್ಗುಪ್ತ ತಿಳಿಸಿದರು.
2022ರ ಐಪಿಎಲ್ನಲ್ಲಿ ಎಂಎಸ್ ಧೋನಿ ಬದಲಿಗೆ ರವೀಂದ್ರ ಜಡೇಜಾ ಅವರನ್ನು ನಾಯಕನನ್ನಾಗಿ ನೇಮಿಸಿದ ಸಿಎಸ್ಕೆ ತಂಡದ ಯೋಜನೆಯು ತಪ್ಪಾಗಿತ್ತು. ಆಗ ಎಡಗೈ ಆಲ್ರೌಂಡರ್ ನಾಯಕತ್ವದ ಪಾತ್ರದಲ್ಲಿ ನೀರಿನಿಂದ ಹೊರಬಂದ ಮೀನಿನಂತೆ ಕಾಣುತ್ತಿದ್ದರು. ರವೀಂದ್ರ ಜಡೇಜಾ ಅವರ ಮೇಲೆ ಒತ್ತಡ ಹೆಚ್ಚಾದ ನಂತರ ಮಧ್ಯದಲ್ಲಿಯೇ ಜವಾಬ್ದಾರಿ ತೊರೆದರು. ಮತ್ತೆ ಸಿಎಸ್ಕೆ ತಂಡದ ನಾಯಕನಾಗಿ ಎಂಎಸ್ ಧೋನಿ ಜವಾಬ್ದಾರಿ ವಹಿಸಿಕೊಂಡರು.
ಇಂಗ್ಲೆಂಡ್ ಟೆಸ್ಟ್ ನಾಯಕ ಬೆನ್ ಸ್ಟೋಕ್ಸ್ ಅವರಿಗೆ ಚೆನ್ನೈ ಸೂಪರ್ ಕಿಂಗ್ಸ್ ದೊಡ್ಡ ಹಣವನ್ನು ವ್ಯಯಿಸಿದ್ದು, ಬಹುಶಃ ಸಿಎಸ್ಕೆ ತಂಡ ಅವರನ್ನು ಭವಿಷ್ಯದ ನಾಯಕನಾಗಿ ನೋಡುವ ಭರವಸೆಯಲ್ಲಿದೆ. ಇನ್ನು ಬಹು ವರ್ಷಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಗೆ ಆಡುತ್ತಿರುವ ದೀಪಕ್ ಚಹಾರ್ ಮತ್ತು ಮೊಯಿನ್ ಅಲಿ ಅವರಲ್ಲಿ ಸಿಎಸ್ಕೆಗೆ ಇತರ ಆಯ್ಕೆಗಳೂ ಇವೆ.
ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಮುಂದಿನ ಪಂದ್ಯವನ್ನು ಏಪ್ರಿಲ್ 8ರಂದು ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಮುಂಬೈನಲ್ಲಿ ಸೆಣಸಾಡಲಿದೆ. ತನ್ನ ಮೊದಲ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಸೋತಿರುವ ರೋಹಿತ್ ಶರ್ಮಾ ಪಡೆ ಗೆಲುವಿಗಾಗಿ ಹಾತೊರೆಯುತ್ತಿದೆ.












Click it and Unblock the Notifications