IPL 2023: ನಿಧಾನವಾಗಿ ಆಡಲು ಯಾರೂ ಕೇಳಿಲ್ಲ: ಡೇವಿಡ್ ವಾರ್ನರ್ ಬಗ್ಗೆ ಅಕ್ಷರ್ ಪಟೇಲ್ ಮಹತ್ವದ ಹೇಳಿಕೆ
ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಡೇವಿಡ್ ವಾರ್ನರ್ ಉತ್ತಮವಾಗಿ ರನ್ ಗಳಿಸುತ್ತಿದ್ದರೂ ನಿಧಾನ ಗತಿಯ ಸ್ಟ್ರೈಕ್ ರೇಟ್ ವಿಚಾರಕ್ಕೆ ಟೀಕೆಗೆ ಗುರಿಯಾಗಿದ್ದಾರೆ. ವಾರ್ನರ್ ನಿಧಾನಗತಿಯ ಬ್ಯಾಟಿಂಗ್ ಬಗ್ಗೆ ಉಪನಾಯಕ ಅಕ್ಷರ್ ಪಟೇಲ್ ಪ್ರತಿಕ್ರಿಯೆ ನೀಡಿದ್ದು, ತಮ್ಮ ನಾಯಕನ ಆಟವನ್ನು ಸಮರ್ಥಿಸಿಕೊಂಡಿದ್ದಾರೆ.
ಅಕ್ಷರ್ ಪಟೇಲ್ ಸದ್ಯ ತಮ್ಮ ಅತ್ಯುತ್ತಮ ಫಾರ್ಮ್ ಅನ್ನು ಐಪಿಎಲ್ನಲ್ಲಿ ಕೂಡ ಮುಂದುವರೆಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವರು ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಐಪಿಎಲ್ನಲ್ಲಿ ಕೂಡ ತಮ್ಮ ತಂಡಕ್ಕಾಗಿ ಹಲವು ಪ್ರಮುಖ ಇನ್ನಿಂಗ್ಸ್ಗಳನ್ನು ಆಡಿದ್ದಾರೆ. ಆದರೂ ಡೆಲ್ಲಿ ಕ್ಯಾಪಿಟಲ್ಸ್ ಇದುವರೆಗೂ ಆಡಿರುವ ನಾಲ್ಕೂ ಪಂದ್ಯಗಳಲ್ಲಿ ಸೋಲನುಭವಿಸಿದೆ.

ಮಂಗಳವಾರ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕೂಡ ಅಕ್ಷರ್ ಪಟೇಲ್ ಅಮೋಘ ಅರ್ಧಶತಕ ಸಿಡಿಸಿ ಮಿಂಚಿದರು. ಕೇವಲ 25 ಎಸೆತಗಳಲ್ಲಿ 4 ಬೌಂಡರಿ 5 ಸಿಕ್ಸರ್ ಸಹಿತ 54 ರನ್ ಗಳಿಸಿ ಡೆಲ್ಲಿ ಕ್ಯಾಪಿಟಲ್ಸ್ 172 ರನ್ ಗಳಿಸಲು ಸಹಾಯ ಮಾಡಿದರು. ಮತ್ತೊಂದೆಡೆ ಜವಾಬ್ದಾರಿಯುತ ಇನ್ನಿಂಗ್ಸ್ ಆಡಿದ ಡೇವಿಡ್ ವಾರ್ನರ್ 47 ಎಸೆತಗಳಲ್ಲಿ 51 ರನ್ ಗಳಿಸಿದರು.
ಡೇವಿಡ್ ವಾರ್ನರ್ ನಿಧಾನಗತಿಯ ಬ್ಯಾಟಿಂಗ್ ಬಗ್ಗೆ ಟೀಕೆ
ಡೇವಿಡ್ ವಾರ್ನರ್ ಈ ಬಾರಿಯ ಐಪಿಎಲ್ನಲ್ಲಿ ನಾಲ್ಕು ಪಂದ್ಯಗಳಲ್ಲಿ ಕೂಡ ಉತ್ತಮ ಸ್ಟ್ರೈಕ್ರೇಟ್ನಲ್ಲಿ ರನ್ ಗಳಿಸಲು ವಿಫಲವಾಗಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಮೊದಲನೇ ಪಂದ್ಯದಲ್ಲಿ 48 ಎಸೆತಗಳಲ್ಲಿ 56 ರನ್ ಗಳಿಸಿದ್ದರು. ಗುಜರಾತ್ ಟೈಟಾನ್ಸ್ ವಿರುದ್ಧ 32 ಎಸೆತಗಳಲ್ಲಿ 37 ರನ್ ಗಳಿಸಿದರು. ರಾಜಸ್ಥಾನ ರಾಯಲ್ಸ್ ವಿರುದ್ಧ 55 ಎಸೆತಗಳಲ್ಲಿ 65 ರನ್ ಗಳಿಸಿದ್ದರು. ಮುಂಬೈ ಇಂಡಿಯನ್ಸ್ ವಿರುದ್ಧ 47 ಎಸೆತಗಳಲ್ಲಿ 51 ರನ್ ಗಳಿಸಿ ಈ ಐಪಿಎಲ್ನ ಮೂರು ಅರ್ಧಶತಕ ಸಿಡಿಸಿ ಮಿಂಚಿದರು.
ಆದರೆ, ಅವರ ಸ್ಟ್ರೈಕ್ರೇಟ್ 114.84 ಇರುವುದು ತಲೆನೋವಾಗಿದೆ. ಡೇವಿಡ್ ವಾರ್ನರ್ ಐಪಿಎಲ್ನಲ್ಲಿ 139.61 ಸ್ಟ್ರೈಕ್ರೇಟ್ನಲ್ಲಿ ರನ್ ಗಳಿಸಿದ್ದಾರೆ. ಸ್ಫೋಟಕ ಆಟಗಾರನಾಗಿರುವ ಅವರು ತಮ್ಮ ಸಹಜ ಆಟವನ್ನು ಕೂಡ ಆಡುತ್ತಿಲ್ಲ. ಇತರೆ ಬ್ಯಾಟರ್ ಗಳು ಬೇಗನೆ ಔಟಾಗುತ್ತಿರುವುದು ನಾಯಕನಾದ ವಾರ್ನರ್ ಮೇಲೆ ಹೆಚ್ಚಿನ ಒತ್ತಡ ಬೀರಿದೆ. ಇದೇ ಕಾರಣಕ್ಕೆ ಅವರು ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ.

ಅಕ್ಷರ್ ಪಟೇಲ್ ಸಮರ್ಥನೆ
ಡೇವಿಡ್ ವಾರ್ನರ್ ಅವರಿಗೆ ನಿಧಾನಗತಿಯಲ್ಲಿ ಆಡುವಂತೆ ಅಥವಾ ಆಂಕರ್ ಇನ್ನಿಂಗ್ಸ್ ಆಡುವಂತೆ ಯಾರೂ ಕೇಳಿಲ್ಲ ಎಂದು ಉಪನಾಯಕ ಅಕ್ಷರ್ ಪಟೇಲ್ ಹೇಳಿದ್ದಾರೆ. ಕಳೆದ ಎರಡೂ ಪಂದ್ಯಗಳಲ್ಲಿ ಅವರು ವೇಗವಾಗಿ ರನ್ ಗಳಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅಕ್ಷರ್ ತಿಳಿಸಿದರು. ಒಬ್ಬ ಬ್ಯಾಟರ್ ಆಗಿ ಆ ಕ್ಷಣದಲ್ಲಿ ಅವರು ಏನು ಯೋಚಿಸುತ್ತಿದ್ದಾರೆ ಎಂದು ನನಗೆ ತಿಳಿದಿಲ್ಲ ಎಂದರು.
ಪೃಥ್ವಿ ಶಾ ಬ್ಯಾಟಿಂಗ್ ಮಾಡುವಾಗ ಅವರು ಆಂಕರ್ ಇನ್ನಿಂಗ್ಸ್ ಆಡಬೇಕು, ಆದರೆ ನಂತರ ವಿಕೆಟ್ಗಳು ಬೀಳುತ್ತಿರುವಾಗ ಅವರು ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲ, ಸ್ಟ್ರೈಕ್ ರೇಟ್ ಜಾಸ್ತಿ ಮಾಡಿಕೊಳ್ಳಲು ಅವರು ಪ್ರಯತ್ನಿಸುತ್ತಿದ್ದರೂ ಅದು ಆಗುತ್ತಿಲ್ಲ ಮುಂದಿನ ಪಂದ್ಯದಲ್ಲಿ ಇತರೆ ಬ್ಯಾಟರ್ ಗಳು ಜವಾಬ್ದಾರಿ ವಹಿಸಿಕೊಂಡರೆ ಅವರು ಆಕ್ರಮಣಕಾರಿ ಬ್ಯಾಟಿಂಗ್ ಮಾಡಬಹುದು ಎಂದು ಅಕ್ಷರ್ ಪಟೇಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications