ಬೆಳಗಾವಿಯಲ್ಲಿ ಅಂತರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣ
ಬೆಳಗಾವಿ, ಡಿಸೆಂಬರ್ 15; ಕರ್ನಾಟಕ ಸರ್ಕಾರ ಬೆಳಗಾವಿಯಲ್ಲಿ ಸುಸಜ್ಜಿತ ಅಂತರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣ ಮಾಡಲಿದೆ. ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಈ ಕುರಿತು ಸಚಿವರು ಮಾಹಿತಿ ನೀಡಿದರು.
ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ಅಭಯ ಪಾಟೀಲ್ ಪ್ರಶ್ನೆಗೆ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಬಿ. ನಾಗೇಂದ್ರ ಉತ್ತರ ನೀಡಿದರು.

"ಬೆಳಗಾವಿ ತಾಲ್ಲೂಕಿನ ಯಳ್ಳೂರು ಗ್ರಾಮದ ಬಳಿಯ ಸರ್ಕಾರಿ ಜಾಗದಲ್ಲಿ, ಸುಸಜ್ಜಿತ ಅಂತರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣಕ್ಕೆ ಸರ್ಕಾರ ಸಿದ್ದವಿದೆ" ಎಂದು ಸಚಿವರು ಹೇಳಿದರು.
ಯಾವುದೇ ಅಡ್ಡಿ ಇಲ್ಲ; "ಕೇಂದ್ರ ಸರ್ಕಾರ ಒದಗಿಸುವ ಅನುದಾನದ ಜೊತೆ ರಾಜ್ಯ ಸರ್ಕಾರವು ಅನುದಾನ ನೀಡಿ ಕ್ರೀಡಾಂಗಣ ನಿರ್ಮಿಸಲು ಯಾವುದೇ ಅಡ್ಡಿಯಿಲ್ಲ. ಯಳ್ಳೂರು ಗ್ರಾಮದ ರಿ.ಸ.ನಂ 1142ರ 66 ಎಕರೆ ಪೈಕಿ 40 ಎಕರೆ ಜಮೀನು ಕ್ರೀಡಾ ಇಲಾಖೆ ಹಸ್ತಾಂತರವಾಗಿದೆ" ಎಂದು ಸಚಿವರು ಮಾಹಿತಿ ನೀಡಿದರು.
"ಪಾರ್ಕಿಂಗ್ ಒಳಗೊಂಡಂತೆ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲು ಕನಿಷ್ಠ 55 ಎಕರೆ ಜಮೀನಿನ ಅವಶ್ಯಕತೆಯಿದೆ. ಈಗಾಗಲೇ ಜಮೀನು ಹಸ್ತಾಂತರ ಪ್ರಕ್ರಿಯೆ ಸಲುವಾಗಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ 11 ಅಧಿಕಾರಿಗಳ ಸಮಿತಿ ರಚನೆ ಮಾಡಲಾಗಿದೆ" ಎಂದರು.
"ಸ್ಥಳೀಯ ಶಾಸಕರು ಅವಶ್ಯ ಇರುವ 15 ಎಕರೆ ಜಮೀನು ಒದಗಿಸಿದರೆ, ಶೀಘ್ರವಾಗಿ ಕ್ರೀಡಾಂಗಣ ನಿರ್ಮಾಣದ ಯೋಜನೆ ರೂಪಿಸಲಾಗುವುದು" ಎಂದು ಸಚಿವ ಬಿ. ನಾಗೇಂದ್ರ ಉತ್ತರದಲ್ಲಿ ವಿವರಣೆ ನೀಡಿದರು.
ಶಾಸಕರು ಮಾತನಾಡಿ, "ಸದ್ಯ ಸರ್ಕಾರಿ ಜಮೀನನಲ್ಲಿ ನಿರ್ಮಾಣವಾಗಿರುವ ಶಾಲೆ ಹಾಗೂ ಸರ್ಕಾರದ ಯೋಜನೆಗಳಲ್ಲಿ ಬಡವರಿಗೆ ವಿತರಿಸಲಾಗಿರುವ ಮನೆಗಳನ್ನು ಹೊರತು ಪಡಿಸಿ ಉಳಿದ ಖಾಲಿ ಜಾಗವನ್ನು ಕ್ರೀಡಾ ಇಲಾಖೆ ಹಸ್ತಾಂತರಿಸಲಾಗುವುದು. ಇದಕ್ಕೆ ಜನರ ವಿರೋಧವಿಲ್ಲ" ಎಂದರು.
ಜಾಗ ವೀಕ್ಷಣೆ ಮಾಡಿದ ಸಚಿವರು; ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಬಿ. ನಾಗೇಂದ್ರ ಬೆಳಗಾವಿಯ ರಾಮತೀರ್ಥ ನಗರದಲ್ಲಿ ನೂತನ ಜಿಲ್ಲಾ ಕ್ರೀಡಾಂಗಣ ನಿರ್ಮಾಣ ಮಾಡಲು ಪ್ರಸ್ತಾಪಿಸುರುವ ಜಾಗವನ್ನು ಡಿಸೆಂಬರ್ 7ರಂದು ವೀಕ್ಷಣೆ ಮಾಡಿದರು.
ಬಳಿಕ ಮಾತನಾಡಿದ ಅವರು, "ಜಿಲ್ಲೆಯಲ್ಲಿ ಅತಿ ಹೆಚ್ಚು ವಿಸ್ತೀರ್ಣದ ಜಿಲ್ಲಾ ಕ್ರೀಡಾಂಗಣ ನಿರ್ಮಾಣಕ್ಕೆ ಸಾರ್ವಜನಿಕರಿಂದ ಬೇಡಿಕೆ ಇದೆ. ಕ್ರೀಡಾಪಟುಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುತ್ತಾರೆ. ಆದ್ದರಿಂದ ಕ್ರೀಡಾಪಟುಗಳಿಗೆ ಅನುಕೂಲವಾಗುವಂತೆ ನೂತನ ಕ್ರೀಡಾಂಗಣ ನಿರ್ಮಾಣಕ್ಕೆ ಯೋಜನೆ ರೂಪಿಸಬೇಕು" ಎಂದು ಅಧಿಕಾರಿಗಳಿಗೆ ಸೂಚಿಸಿದರು.
"ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದಿಂದಲೇ ಈಗಾಗಲೇ ಕ್ರೀಡಾಂಗಣಕ್ಕೆ 9 ಎಕರೆ 20 ಗುಂಟೆ ಜಾಗ ನೀಡಿದ್ದಾರೆ. ಸದರಿ ಸರ್ವೆ ನಂಬರ್ಗೆ ಒಳಪಡುವ ಇನ್ನೂ 6 ಎಕರೆ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಸ್ಥಳ ಗುರುತಿಸಬೇಕು" ಎಂದರು.












Click it and Unblock the Notifications