Sarfaraz Khan: ಜೈಸ್ವಾಲ್ ವಿರುದ್ಧ ಕೋಪಗೊಂಡ ಸರ್ಫರಾಜ್; ರೋಹಿತ್ ಶರ್ಮಾ ಕೂಡ ಸಿಟ್ಟಾಗಿದ್ದೇಕೆ?
ರಾಜ್ಕೋಟ್ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ 434 ರನ್ಗಳ ಅಂತರದಿಂದ ಗೆಲುವು ಸಾಧಿಸಿದೆ. ಭಾರತದ ಟೆಸ್ಟ್ ಇತಿಹಾಸದಲ್ಲೇ ಇದು ಅತ್ಯಂತ ದೊಡ್ಡ ಗೆಲುವಾಗಿದೆ.
ಈ ಪಂದ್ಯವಾದರೂ 5 ದಿನ ನಡೆಯುತ್ತದೆ ಅಂದುಕೊಂಡಿದ್ದಾಗಲೇ ಭಾರತದ ಬೌಲರ್ ಗಳು ಇಂಗ್ಲೆಂಡ್ ತಂಡವನ್ನು ಎರಡನೇ ಇನ್ನಿಂಗ್ಸ್ನಲ್ಲಿ 122 ರನ್ಗಳಿಗೆ ಆಲೌಟ್ ಮಾಡುವ ಮೂಲಕ ನಾಲ್ಕನೇ ದಿನವೇ ಪಂದ್ಯ ಗೆದ್ದರು.

ಇದಕ್ಕೂ ಮುನ್ನ ಭಾರತ ಎರಡನೇ ಇನ್ನಿಂಗ್ಸ್ನಲ್ಲಿ 4 ವಿಕೆಟ್ ನಷ್ಟಕ್ಕೆ 430 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಭಾರತದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅಜೇಯ 214 ರನ್ ಗಳಿಸಿದರೆ, ಶುಭಮನ್ ಗಿಲ್ 91, ಸರ್ಫರಾಜ್ ಖಾನ್ ಅಜೇಯ 68 ರನ್ ಗಳಿಸಿ ಭಾರತ ಬೃಹತ್ ಮುನ್ನಡೆ ಪಡೆಯಲು ಕಾರಣವಾದರು.
ಸರ್ಫರಾಜ್ ಕೋಪಗೊಂಡಿದ್ದೇಕೆ?
ಕುಲದೀಪ್ ಯಾದವ್ ಔಟಾದ ಬಳಿಕ ಕ್ರೀಸ್ಗೆ ಬಂದ ಸರ್ಫರಾಜ್ ಖಾನ್ ಜೈಸ್ವಾಲ್ ಜೊತೆಗೂಡಿ 172 ರನ್ ಕಲೆಹಾಕಿದರು. ದೇಶೀಯ ಕ್ರಿಕೆಟ್ನಲ್ಲಿ ಮುಂಬೈಗಾಗಿ ಆಡುವ ಈ ಜೋಡಿ ಇಂಗ್ಲೆಂಡ್ ವಿರುದ್ಧ ನಿರ್ಭಯವಾಗಿ ಬ್ಯಾಟಿಂಗ್ ಮಾಡಿದರು.
ಜೈಸ್ವಾಲ್ ದ್ವಿಶತಕದ ಸನಿಹದಲ್ಲಿದ್ದಾಗ ಸರ್ಫರಾಜ್ ಅರ್ಧಶತಕದ ಸನಿಹದಲ್ಲಿದ್ದರು ಈ ಹಂತದಲ್ಲಿ ಸರ್ಫರಾಜ್ ಖಾನ್ ಜೈಸ್ವಾಲ್ ವಿರುದ್ಧ ಸಿಟ್ಟಾದ ಘಟನೆ ನಡೆಯಿತು. 94ನೇ ಓವರ್ನ ಮೂರನೇ ಎಸೆತದಲ್ಲಿ ರೆಹಾನ್ ಅಹ್ಮದ್ ಬೌಲಿಂಗ್ನಲ್ಲಿ ಸರ್ಫರಾಜ್ ಖಾನ್ ಕವರ್ ಕಡೆ ಹೊಡೆದು ರನ್ಗಾಗಿ ಓಡಿದರು, ಮೊದಲ ರನ್ ಮುಗಿಸಿದ ಅವರು, ಎರಡನೇ ರನ್ ಗಳಿಸಲು ಓಡಿದರು, ಆದರೆ ಜೈಸ್ವಾಲ್ ಅದಕ್ಕೆ ಸ್ಪಂದಿಸಲಿಲ್ಲ. ಇದು ಸರ್ಫರಾಜ್ ಅವರನ್ನು ಕೆರಳಿಸಿತು.
ಸುಲಭವಾಗಿ ಎರಡು ರನ್ ಗಳಿಸುವ ಅವಕಾಶ ಇದ್ದರೂ, ಕೈತಪ್ಪಿದ್ದಕ್ಕೆ ಕೋಪಗೊಂಡ ಸರ್ಫರಾಜ್ ಜೈಸ್ವಾಲ್ಗೆ ಕೈ ಸನ್ನೆ ಮಾಡುವ ಮೂಲಕ ಅಸಮಾಧಾನ ತೋರಿಸಿದರು. ಡಕೌಟ್ನಲ್ಲಿ ಕೂತಿದ್ದ ನಾಯಕ ರೋಹಿತ್ ಶರ್ಮಾ ಕೂಡ ಜೈಸ್ವಾಲ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು ಕಂಡು ಬಂತು.

ಜೈಸ್ವಾಲ್ ದ್ವಿಶತಕ ಸಂಭ್ರಮಿಸಿದ ಸರ್ಫರಾಜ್
ಅದಾದ ಬಳಿಕ ಸರ್ಫರಾಜ್ ಖಾನ್ ತಮ್ಮ ಎರಡನೇ ಅರ್ಧಶತಕ ಪೂರೈಸಿದರು. ಜೈಸ್ವಾಲ್ ಈ ಹಂತದಲ್ಲಿ ಬಂದು ಸರ್ಫರಾಜ್ ಅವರನ್ನು ಅಭಿನಂದಿಸಿದರು. ಅದಾದ ಬಳಿಕ ಜೈಸ್ವಾಲ್ ತಮ್ಮ ಎರಡನೇ ದ್ವಿಶತಕ ಪೂರ್ಣಗೊಳಿಸಿದಾಗ ಸರ್ಫರಾಜ್ ತಾವೇ ದ್ವಿಶತಕ ಗಳಿಸಿದ ಮಾದರಿಯಲ್ಲಿ ಸಂಭ್ರಮಾಚರಣೆ ಮಾಡಿದರು. ಇಬ್ಬರೂ ಕೂಡ ರಣಜಿಯಲ್ಲಿ ಮುಂಬೈ ತಂಡಕ್ಕೆ ಆಡುವ ಕಾರಣ ಸ್ನೇಹಿತರಾಗಿದ್ದಾರೆ.












Click it and Unblock the Notifications