Maharaja Trophy: ವಿಜಯ್ಕುಮಾರ್ ವೈಶಾಖ್ ಅರ್ಧಶತಕ: ಹುಬ್ಬಳ್ಳಿ ವಿರುದ್ಧ ಗುಲ್ಬರ್ಗ ಮಿಸ್ಟಿಕ್ಸ್ಗೆ ಗೆಲುವು
ಗುರುವಾರ ನಡೆದ ಮಹಾರಾಜ ಟ್ರೋಫಿ ಪಂದ್ಯಾವಳಿಯ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಗುಲ್ಬರ್ಗ ಮಿಸ್ಟಿಕ್ಸ್ ತಂಡವು ಹುಬ್ಬಳ್ಳಿ ಟೈಗರ್ಸ್ ವಿರುದ್ಧ 4 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ಗುಲ್ಬರ್ಗ ಮಿಸ್ಟಿಕ್ಸ್ ಹುಬ್ಭಳ್ಳಿ ಟೈಗರ್ಸ್ ತಂಡವನ್ನು 179 ರನ್ಗಳಿಗೆ ಕಟ್ಟಿಹಾಕಿತು. ಕೃಷ್ಣನ್ ಶ್ರೀಜಿತ್ ಭರ್ಜರಿ ಶತಕದ ನೆರವಿನಿಂದ ಹುಬ್ಬಳ್ಳಿ ಟೈಗರ್ಸ್ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 179 ರನ್ ಕಲೆಹಾಕಿತು. ಈ ಸವಾಲಿನ ಮೊತ್ತವನ್ನು ಇನ್ನೂ 5 ಎಸೆತ ಬಾಕಿ ಇರುವಂತೆಯೇ ಬೆನ್ನತ್ತಿದ್ದ ಗುಲ್ಬರ್ಗ ಮಿಸ್ಟಿಕ್ಸ್ ಗೆಲುವಿನ ನಗೆ ಬೀರಿತು.
ಮೊದಲು ಬ್ಯಾಟಿಂಗ್ ಮಾಡಿದ ಹುಬ್ಬಳ್ಳಿ ಟೈಗರ್ಸ್ ತಂಡಕ್ಕೆ ಮೊಹಮ್ಮದ್ ತಾಹ ಮತ್ತು ಕೃಷ್ಣನ್ ಶ್ರೀಜಿತ್ ಆಸರೆಯಾದರು. ತಾಹ 20 ಎಸೆತಗಳಲ್ಲಿ 35 ರನ್ ಗಳಿಸಿದರೆ, ಶ್ರೀಜಿತ್ 51 ಎಸೆತಗಳಲ್ಲಿ 14 ಬೌಂಡರಿ, 3 ಸಿಕ್ಸರ್ ಸಹಿತ ಅಜೇಯ 100 ರನ್ ಗಳಿಸಿದರು. ನಂತರ ಬಂದ ಯಾವ ಬ್ಯಾಟರ್ ಕೂಡ ಹೆಚ್ಚಿನ ರನ್ ಗಳಿಸದೇ ಇರುವುದು ತಂಡಕ್ಕೆ ಹಿನ್ನಡೆಯಾಯಿತು. ಆದರೂ 179 ರನ್ ಗಳಿಸುವಲ್ಲಿ ಹುಬ್ಬಳ್ಳಿ ಟೈಗರ್ಸ್ ಯಶಸ್ವಿಯಾಯಿತು.

ಗುಲ್ಬರ್ಗ ಮಿಸ್ಟಿಕ್ಸ್ ಪರವಾಗಿ ಮೊನಿಶ್ ರೆಡ್ಡಿ 4 ವಿಕೆಟ್ ಪಡೆದುಕೊಂಡರು. ವಿಜಯ್ ಕುಮಾರ್ ವೈಶಾಖ್, ಅಭಿಷೇಕ್ ಪ್ರಭಾಕರ್ ಮತ್ತು ಪೃಥ್ವಿರಾಜ್ ಶೇಖಾವತ್ ತಲಾ ಒಂದು ವಿಕೆಟ್ ಪಡೆದುಕೊಂಡರು.
ವಿಜಯ್ಕುಮಾರ್ ವೈಶಾಖ್ ಅರ್ಧಶತಕ
180 ರನ್ಗಳ ಗುರಿಯನ್ನು ಬೆನ್ನತ್ತಿದ ಗುಲ್ಬರ್ಗ ಮಿಸ್ಟಿಕ್ಸ್ ಉತ್ತಮ ಆರಂಭ ಪಡೆಯಲಿಲ್ಲ. ಲವ್ನಿತ್ ಸಿಸೋಡಿಯಾ 10 ರನ್ ಗಳಿಸಿ ಔಟಾದರೆ, ಅನೀಶ್ ಸೊನ್ನೆಗೆ ಔಟಾದರು. ಶರತ್ ಬಿಆರ್ 13 ರನ್, ಸೌರಭ್ ಮುತ್ತೂರ್ 18 ರನ್ ಗಳಿಸಿ ಔಟಾದರು. ಒಂದು ಹಂತದಲ್ಲಿ ಸೋಲಿನ ಸುಳಿಯಲ್ಲಿ ಸಿಲುಕಿದ್ದ ಗುಲ್ಬರ್ಗ ಮಿಸ್ಟಿಕ್ಸ್ಗೆ ವೈಶಾಖ್ ಆಸರೆಯಾದರು. 33 ಎಸೆತಗಳಲ್ಲಿ 7 ಬೌಂಡರಿ 1 ಸಿಕ್ಸರ್ ಸಹಿತ 51 ರನ್ ಗಳಿಸಿದರು. ರಿತೇಶ್ ಭಟ್ಕಳ್ 19 ಎಸೆತಗಳಲ್ಲಿ ಅಜೇಯ 35 ರನ್ ಗಳಿಸಿದರೆ, ಪ್ರವೀಣ್ ದುಬೆ 14 ಎಸೆತಗಳಲ್ಲಿ 34 ರನ್ ಗಳಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು.
ಬೆಂಗಳೂರು ಬ್ಲಾಸ್ಟರ್ಸ್, ಮೈಸೂರು ವಾರಿಯರ್ಸ್, ಹುಬ್ಬಳ್ಳಿ ಟೈಗರ್ಸ್ ಮತ್ತು ಗುಲ್ಬರ್ಗ ಮಿಸ್ಟಿಕ್ಸ್ ಈ ಬಾರಿ ಮಹಾರಾಜ ಟ್ರೋಫಿಯಲ್ಲಿ ಸೆಮಿಫೈನಲ್ ತಲುಪಿವೆ. ಆಗಸ್ಟ್ 30 ರಂದು ನಡೆಯುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಮತ್ತು ಗುಲ್ಬರ್ಗ ಮಿಸ್ಟಿಕ್ಸ್ ಮುಖಾಮುಖಿಯಾಗಲಿವೆ.












Click it and Unblock the Notifications