Cooch Behar Trophy: ಅಜೇಯ 404 ರನ್ ಗಳಿಸಿ ಹೊಸ ದಾಖಲೆ ಬರೆದ ಕರ್ನಾಟಕ ಆಟಗಾರ
ಶಿವಮೊಗ್ಗದ ಕೆಎಸ್ಸಿಎ ನವುಲೆ ಸ್ಟೇಡಿಯಂನಲ್ಲಿ ನಡೆದ ಕೂಚ್ ಬೆಹರ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಕರ್ನಾಟಕದ ಆಟಗಾರ ಪ್ರಖರ್ ಚತುರ್ವೇದಿ ಅಜೇಯ 404 ರನ್ ಗಳಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
ಕೂಚ್ ಬೆಹರ್ ಟ್ರೋಫಿ ಫೈನಲ್ ಪಂದ್ಯದಲ್ಲಿ 400ಕ್ಕೂ ಹೆಚ್ಚು ರನ್ ಗಳಿಸಿ ಮೊದಲ ಆಟಗಾರ ಎನ್ನುವ ದಾಖಲೆ ಈಗ ಪ್ರಖರ್ ಚತುರ್ವೇದಿ ಹೆಸರಿನಲ್ಲಿ ದಾಖಲಾಗಿದೆ. ಫೈನಲ್ ಪಂದ್ಯ ಡ್ರಾನಲ್ಲಿ ಮುಕ್ತಾಯವಾಗಿದ್ದು ಕರ್ನಾಟಕ ತಂಡ ಬೃಹತ್ ಮುನ್ನಡೆ ಪಡೆದುಕೊಂಡಿತು.

ಕರ್ನಾಟಕ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಮೊದಲ ಇನ್ನಿಂಗ್ಸ್ನಲ್ಲಿ 380 ರನ್ ಕಲೆಹಾಕಿತು. ನಂತರ ಬ್ಯಾಟಿಂಗ್ ಮಾಡಿದ ಕರ್ನಾಟಕ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತು.
ಕರ್ನಾಟಕ ತಂಡದ ಆರಂಭಿಕ ಆಟಗಾರ ಪ್ರಖರ್ ಚತುರ್ವೇದಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. 638 ಎಸೆತಗಳಲ್ಲಿ 46 ಬೌಂಡರಿ 3 ಸಿಕ್ಸರ್ ಸಹಿತ ಅಜೇಯ 404 ರನ್ ಗಳಿಸಿ ಮಿಂಚಿದರು. ಕೊನೆಯವರೆಗೂ ಅವರು ಔಟಾಗದೆ ಬ್ಯಾಟಿಂಗ್ ಮಾಡಿದರು.
ಹರ್ಷಿಲ್ ಧರ್ಮಾನಿ ಕೂಡ 228 ಎಸೆತಗಳಲ್ಲಿ 19 ಬೌಂಡರಿ 5 ಸಿಕ್ಸರ್ ಸಹಿತ 169 ರನ್ ಗಳಿಸಿದರು. ಕಾರ್ತಿಕೇಯ 72 ರನ್, ಕಾರ್ತಿಕ್ 50 ರನ್, ಹಾರ್ದಿಕ್ ರಾಜ್ 51 ರನ್ ಗಳಿಸಿದರು. ಸಮರ್ಥ್ ಅಜೇಯ 55 ರನ್ ಗಳಿಸಿದರು.
ಬೃಹತ್ ಮೊತ್ತ ಕಲೆಹಾಕಿದ ಕರ್ನಾಟಕ
ಪ್ರಖರ್ ಚತುರ್ವೇದಿ, ಹರ್ಷಲ್ ಧರ್ಮಾನಿ ಅವರ ಅಮೋಘ ಇನ್ನಿಂಗ್ಸ್ ನೆರವಿನಿಂದ ಕರ್ನಾಟಕ 223 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 890 ರನ್ಗಳನ್ನು ಕಲೆಹಾಕಿತು. 490 ರನ್ಗಳ ಬೃಹತ್ ಮುನ್ನಡೆಯೊಂದಿಗೆ ಕರ್ನಾಟಕ ಪಂದ್ಯವನ್ನು ಡ್ರಾ ಮಾಡಿಕೊಂಡಿತು.
ಗಮನ ಸೆಳೆದ ದ್ರಾವಿಡ್ ಮಗ
ಕೂಚ್ ಬೆಹರ್ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ತಂಡಕ್ಕಾಗಿ ಆಡುತ್ತಿರುವ ಭಾರತದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ ಕೂಡ ಗಮನ ಸೆಳೆದರು. 46 ಎಸೆತಗಳಲ್ಲಿ ಅವರು 22 ರನ್ ಗಳಿಸಿದರೆ, 2 ವಿಕೆಟ್ ಕೂಡ ಪಡೆದು ಮಿಂಚಿದರು.












Click it and Unblock the Notifications