ಉತ್ತರ ಕನ್ನಡದ 19 ಗ್ರಾ. ಪಂಚಾಯಿತಿಗಳು ಕಂಟೈನ್ಮೆಂಟ್ ಝೋನ್
ಶಿರಸಿ, ಮೇ 16; "ಶೇ 50ಕ್ಕಿಂತ ಹೆಚ್ಚು ಕೋವಿಡ್ ಸೋಂಕಿತ ಪ್ರಕರಣಗಳಿರುವ ಕಾರವಾರ ನಗರ, ದಾಂಡೇಲಿ ಪಟ್ಟಣ ಹಾಗೂ ಜಿಲ್ಲೆಯ 19 ಗ್ರಾಮ ಪಂಚಾಯತಿಗಳನ್ನು ಕಂಟೈನ್ಮೆಂಟ್ ವಲಯಗಳನ್ನಾಗಿ ಘೋಷಿಸಲಾಗಿದೆ. ಮುಂದಿನ 10 ದಿನಗಳ ಕಾಲ ಈ ಪ್ರದೇಶಗಳಲ್ಲಿ ತಳ್ಳುಗಾಡಿಯ ಮೂಲಕ ತರಕಾರಿ, ಹಣ್ಣು, ಹಾಲು ಒದಗಿಸಲು ಅವಕಾಶ ನೀಡಲಾಗಿದೆ" ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಕೊರೊನಾದಿಂದಾಗಿ ಜಿಲ್ಲೆ ದೇಶದಲ್ಲೇ ಗುರುತಿಸಿಕೊಳ್ಳುವಂತಾಗಿದೆ. ಹೀಗಾಗಿ ಇಂದಿನಿಂದ ಜಿಲ್ಲೆಯಲ್ಲಿ ಔಷಧ ಅಂಗಡಿಗಳ ಹೊರತಾಗಿ ಬೇರಾವ ಚಟುವಟಿಕೆಗೂ ಅವಕಾಶ ಇರುವುದಿಲ್ಲ. ಸಂಪೂರ್ಣವಾಗಿ ಲಾಕ್ ಡೌನ್ ಮಾಡಲಾಗುತ್ತಿದ್ದು, ಅಗತ್ಯ ವಸ್ತುಗಳನ್ನು ಬೆಳಗ್ಗೆ 10 ಗಂಟೆಯೊಳಗೆ ಖರೀದಿಸಿಟ್ಟುಕೊಂಡಿರಬೇಕು" ಎಂದರು.
ಕಾರವಾರ ತಾಲೂಕಿನ ಚಿತ್ತಾಕುಲಾ, ಮಲ್ಲಾಪುರ, ಅಂಕೋಲಾ ತಾಲೂಕಿನ ಬೊಬ್ರುವಾಡಾ, ಹಿಲ್ಲೂರು, ಹೊನ್ನಾವರ ತಾಲೂಕಿನ ಕರ್ಕಿ, ಭಟ್ಕಳ ತಾಲೂಕಿನ ಶಿರಾಲಿ, ಶಿರಸಿ ತಾಲೂಕಿನ ಬನವಾಸಿ, ಸಿದ್ದಾಪುರ ತಾಲೂಕಿನ ಅಣಲೇಬೈಲ್, ಮನ್ಮನೆ, ಕೊಲಸಿರ್ಸಿ, ಯಲ್ಲಾಪುರ ತಾಲೂಕಿನ ಮಾವಿನಮನೆ, ಉಮ್ಮಚಗಿ, ನಂದೊಳ್ಳಿ, ಮುಂಡಗೋಡ ತಾಲೂಕಿನ ಇಂದೂರು, ಜೊಯಿಡಾ ತಾಲೂಕಿನ ರಾಮನಗರ, ಅಖೇತಿ, ದಾಂಡೇಲಿ ತಾಲೂಕಿನ ಅಂಬಿಕಾನಗರ, ಅಂಬೆವಾಡಿ, ಹಳಿಯಾಳ ತಾಲೂಕಿನ ಮುರ್ಕವಾಡ ಗ್ರಾಮ ಪಂಚಾಯಿತಿಗಳನ್ನು ಕಂಟೈನ್ಮೆಂಟ್ ಪ್ರದೇಶವಾಗಿ ಗುರುತಿಸಲಾಗಿದೆ.

ಮದುವೆಗೆ ಅನುಮತಿ ಇಲ್ಲ: ಕೋವಿಡ್ ಜಿಲ್ಲೆಯಲ್ಲಿ ಅಧಿಕವಾಗಲು ಮದುವೆ ಮನೆಗಳೇ ಕಾರಣ ಎನ್ನುವ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಇಂದಿನಿಂದ ಮದುವೆಗೆ ಅನುಮತಿ ಕೊಡುವುದನ್ನು ನಿಲ್ಲಿಸಲಾಗಿದೆ.
ಈಗಾಗಲೇ ಅನುಮತಿ ನೀಡಲಾದ ಮದುವೆಗಳನ್ನು ನಡೆಸಬಹುದಾಗಿದೆ. ಆದರೆ, ಈ ಮೊದಲು 40 ಜನರು ಭಾಗವಹಿಸಲು ಇದ್ದ ಅವಕಾಶವನ್ನು 20 ಜನಕ್ಕೆ ಸೀಮಿತಗೊಳಿಸಲಾಗಿದೆ. ಈ ಬಗ್ಗೆ ಪಿಡಿಒ ಅಥವಾ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಫೋಟೋ ಸಮೇತ ವರದಿ ನೀಡಬೇಕು.
ವಾಹನ ಸಂಚಾರ ನಿಷೇಧ; ಈಗಾಗಲೇ ಜಾರಿಯಲ್ಲಿರುವ ಕರ್ಫ್ಯೂವನ್ನು ಜಿಲ್ಲೆಯಲ್ಲಿ ಇನ್ನಷ್ಟು ಬಿಗಿಗೊಳಿಸಲಾಗುತ್ತಿದೆ. ವೈದ್ಯಕೀಯ, ತುರ್ತು ಸೇವೆ ಹಾಗೂ ಸರ್ಕಾರಿ ನೌಕರರನ್ನು ಹೊರತುಪಡಿಸಿ ಖಾಸಗಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.
ಯಾವುದೇ ಪಂಚಾಯತಿಯಲ್ಲಿ, ವಾರ್ಡ್ಗಳಲ್ಲಿ 40ಕ್ಕಿಂತ ಹೆಚ್ಚು ಪ್ರಕರಣಗಳು ದೃಢಪಟ್ಟರೆ ಆ ಪ್ರದೇಶವನ್ನು ಕಂಟೈನ್ಮೆಂಟ್ ಪ್ರದೇಶವಾಗಿ ಪರಿವರ್ತಿಸಲಾಗುತ್ತದೆ.












Click it and Unblock the Notifications