ತೇಜಸ್ವಿನಿ ಅವರ 'ಹೊರಳುದಾರಿ' ಕೃತಿಗೆ ಸ್ವಸ್ತಿ ಪ್ರಕಾಶನ ಪ್ರಶಸ್ತಿ ಪ್ರದಾನ
ಶಿರಸಿ, ಜನವರಿ 04: ಕುಮಟಾದ ಸ್ವಸ್ತಿ ಪ್ರಕಾಶನ ಏರ್ಪಡಿಸಿದ್ದ ಕಾದಂಬರಿ ಸ್ಪರ್ಧೆಯ ಪ್ರಶಸ್ತಿ ಪ್ರದಾನ ಸಮಾರಂಭ ದಿನಾಂಕ ಡಿ.31 ರಂದು ಶಿರಸಿ ತಾಲೂಕಿನ ಬಕ್ಕಳ ದ "ಶ್ರೀ ಶಂಕರ" ದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಸ್ವಸ್ತಿ ಪ್ರಕಾಶನದ ಬಹುಮಾನಿತ ಕೃತಿ ತೇಜಸ್ವಿನಿ ಹೆಗಡೆಯವರ "ಹೊರಳುದಾರಿ" ಕಾದಂಬರಿ ಲೋಕಾರ್ಪಣೆ ಹಾಗೂ ಶ್ರೀಮತಿ ತೇಜಸ್ವಿನಿಯವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಸ್ಪರ್ಧೆಯ ವಿಜೇತ ಕವಿಗಳಿಗೆ ಬಹುಮಾನ ವಿತರಣೆ ನಡೆದವು. ಪುಸ್ತಕ ಬಿಡುಗಡೆ ಮಾಡಿದ ಚಿಂತಕ ನಾರಾಯಣ ಶೇವಿರೆ ಅವರು ತೇಜಸ್ವಿನಿಯವರ ಸಾಹಿತ್ಯದ ಆಸಕ್ತಿ ಹಾಗೂ ಸಾಧನೆಯನ್ನು ಶ್ಲಾಘಿಸಿದರು.

ಬೆಳಗಿನ ಕಾರ್ಯಕ್ರಮದಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಬದುಕು ಬರಹಗಳ ಕುರಿತು ಸಂವಾದ ಚರ್ಚೆ ಮಾತುಗಳು ನಡೆದವು. ಡಾ.ಗೋವಿಂದ ಹೆಗಡೆ, ಪ್ರಶಾಂತ್ ನಾಯ್ಕ ಕರ್ಕಿ, ಪ್ರಶಾಂತ್ ಪಟಗಾರ್ ದೇವರಬಾವಿ, ಗುರುಗಣೇಶ್, ಕರ್ಕಿ ಕೃಷ್ಣಮೂರ್ತಿ, ತೇಜಸ್ವಿನಿ ಹೆಗಡೆ, ಗಾಯತ್ರೀ ರಾಘವೇಂದ್ರ , ಇನ್ನೂ ಅನೇಕರು ಈ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕೃಷಿ ಪರಿಸರದ ನಡುವೆ ಈ ಮಾತುಕತೆ ಆತ್ಮೀಯವು ಪೂರಕವು ಆಗಿ ನಡೆಯಿತು.
ಸಂಜೆಯವರೆಗೆ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪರಿಸರ ತಜ್ಞ ಕೃಷಿ ವಿಜ್ಞಾನ ಬರಹಗಾರ ಶಿವಾನಂದ ಕಳವೆ ಯವರು ವಹಿಸಿದ್ದರು. ಸಾಹಿತ್ಯದ ಬದಲಾಗಬೇಕಾದ ದೃಷ್ಟಿಕೋನದ ಕುರಿತು ಮಾತನಾಡಿದ ಅವರು, ಹಳ್ಳಿಗಳ ಜೀವನದ ಕುರಿತು ಯಾವ ಬರಹಗಳೂ ಇತ್ತೀಚೆಗೆ ಕಾದಂಬರಿ ರೂಪದಲ್ಲಿ ಬರುತ್ತಿಲ್ಲ. ಜನಜೀವನವೇ ಇಂದಿಗೆ ಸಾಹಿತ್ಯದ ಪ್ರಸ್ತುತ ವಿಷಯವಾಗಬೇಕೆಂಬುದನ್ನು ವಿವರಿಸಿದರು. ಈ ಸಂದರ್ಭದಲ್ಲಿ ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರ ಒಡನಾಟ, ಬದುಕು, ಬರಹಗಳ ಬಗೆಗೂ ಅನೇಕ ಮಾಹಿತಿ ತಿಳಿಸಿಕೊಟ್ಟರು.

ನಮ್ಮಿಂದ ನಿಮಗೆ ಕನ್ನಡವು ಮನೆಮನೆಗೆ ಎಂಬ ಸ್ವಸ್ತಿ ಪ್ರಕಾಶನದ ಆಶಯದಂತೆ ನಾಲ್ಕನೇ ವರ್ಷದ ಈ ಕಾರ್ಯಕ್ರಮ ಸಂಜಯ್ ಭಟ್ ಬೆಣ್ಣೆ ಯವರ ಮನೆ "ಶ್ರೀ ಶಂಕರ" ದ ಸುಂದರ ಪರಿಸರದಲ್ಲಿ ನಡೆಸಿಕೊಡಲಾಯಿತು. ಸ್ವತಃ ಸಂಜಯ್ ಭಟ್ ನಿರೂಪಿಸಿದರು. ರಾಜ್ಯದ ಅನೇಕ ಭಾಗಗಳಿಂದ ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.












Click it and Unblock the Notifications