ತಾಲೂಕು ಪಂಚಾಯಿತಿ ವ್ಯವಸ್ಥೆ ತೆಗೆಯುವುದಿಲ್ಲ: ಸಚಿವರ ಸ್ಪಷ್ಟನೆ
ಶಿರಸಿ, ಫೆಬ್ರವರಿ 7: "ಯಾವುದೇ ಕಾರಣಕ್ಕೂ ತಾಲೂಕು ಪಂಚಾಯತಿ ವ್ಯವಸ್ಥೆಯನ್ನು ತೆಗೆಯಲು ಸಾಧ್ಯವಿಲ್ಲ. ತಾಲೂಕು ಪಂಚಾಯತಿ ತೆಗೆಯುವ ಹಕ್ಕು ಕೂಡ ರಾಜ್ಯಕ್ಕಿಲ್ಲ" ಎಂದು ಕಾರ್ಮಿಕ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಸ್ಪಷ್ಟನೆ ನೀಡಿದ್ದಾರೆ.
ಶಿರಸಿಯಲ್ಲಿ ಮಾತನಾಡಿದ ಅವರು, "ಗ್ರಾಮೀಣ ಭಾಗದಲ್ಲಿ ಮೂರು ಹಂತದ ಪಂಚಾಯತ್ ವ್ಯವಸ್ಥೆ ರಚನೆ ಮಾಡಿ ಸಂವಿಧಾನಾತ್ಮಕವಾಗಿ ಕಾನೂನನ್ನು ಮಾಡಲಾಗಿದೆ. ಗ್ರಾಮ ಪಂಚಾಯತಿ, ತಾಲೂಕು ಪಂಚಾಯಿತಿ, ನಂತರ ಜಿಲ್ಲಾ ಪಂಚಾಯತಿ ಎನ್ನುವ ವ್ಯವಸ್ಥೆಯನ್ನು ಕೇಂದ್ರ ಮಾಡಿದ್ದು, ಇದನ್ನ ತೆಗೆಯಲು ಕೇಂದ್ರಕ್ಕೆ ಮಾತ್ರ ಅವಕಾಶವಿದೆ" ಎಂದರು.
ಶಿವಮೊಗ್ಗ ಜಿಲ್ಲೆಗೊಂದು ಹೊಸ ತಾಲೂಕು; ಸಿಎಂಗೆ ಬೇಡಿಕೆ
"ಒಂದೊಮ್ಮೆ ಎರಡು ಹಂತದ ವ್ಯವಸ್ಥೆಯನ್ನು ಮಾಡಬೇಕಾದರೆ ಕೇಂದ್ರವೇ ಆ ಬಗ್ಗೆ ನಿರ್ಧರಿಸಬೇಕು. ಈ ಹಿನ್ನಲೆಯಲ್ಲಿ ಈ ವ್ಯವಸ್ಥೆಯನ್ನು ತೆಗೆಯಲು ರಾಜ್ಯ ಸರ್ಕಾರಕ್ಕೆ ಅವಕಾಶವಿಲ್ಲ" ಎಂದು ಸಚಿವರು ಹೇಳಿದ್ದಾರೆ.
ಶಿರಾಳಕೊಪ್ಪ ಪಟ್ಟಣ ಪಂಚಾಯಿತಿ ಟ್ರಾಕ್ಟರ್ ಕಳ್ಳತನ!
"ನನಗೂ ಈ ಬಗ್ಗೆ ಗೊಂದಲವಿತ್ತು. ಇತ್ತೀಚಿಗೆ ಗ್ರಾಮೀಣಾಭಿವೃದ್ಧಿ ಸಚಿವರು ಈ ಬಗ್ಗೆ ತನಗೂ ತಾಲೂಕು ಪಂಚಾಯಿತಿ ತೆಗೆಯಲು ಅವಕಾಶವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಜನರಲ್ಲಿ ಈ ಬಗ್ಗೆ ಗೊಂದಲ ಬೇಡ. ಈ ಬಾರಿ ತಾಲೂಕು ಪಂಚಾಯತಿ ಚುನಾವಣೆ ನಡೆಯಲಿದೆ" ಎಂದು ಶಿವರಾಮ್ ಹೆಬ್ಬಾರ್ ತಿಳಿಸಿದ್ದಾರೆ.
ಪಂಚಾಯಿತಿ ಚುನಾವಣೆ; ಹರಕೆ ಹೊತ್ತ ಅಭ್ಯರ್ಥಿಯಿಂದ ಪಾದಯಾತ್ರೆ!
ಯಾಕೆ ಈ ಚರ್ಚೆ; ಗುರುವಾರ ವಿಧಾನಸಭೆ ಕಲಾಪದಲ್ಲಿ ಸೊರಬ ಶಾಸಕ ಕುಮಾರ್ ಬಂಗಾರಪ್ಪ ಶೂನ್ಯ ವೇಳೆಯಲ್ಲಿ, "ತಾಲೂಕು ಪಂಚಾಯಿತಿಗೆ ಹೆಚ್ಚಿನ ಅನುದಾನ ಸಿಗುತ್ತಿಲ್ಲ. ಗ್ರಾಮ ಮತ್ತು ಜಿಲ್ಲಾ ಪಂಚಾಯಿತಿಗೆ ಸಿಗುವ ಮಹತ್ವ ತಾಲೂಕು ಪಂಚಾಯಿತಿಗೆ ಸಿಗುತ್ತಿಲ್ಲ. ಮೂರು ಹಂತದ ಪಂಚಾಯಿತಿ ವ್ಯವಸ್ಥೆಯನ್ನು 2 ಹಂತಕ್ಕೆ ಇಳಿಸುವುದು ಸೂಕ್ತ" ಎಂದರು.
ಸದಸನದಲ್ಲಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಸಚಿವ ಕೆ. ಎಸ್. ಈಶ್ವರಪ್ಪ, "ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಕೇಂದ್ರ ಸರ್ಕಾರದ ಕಾನೂನಿನ ಮೂಲಕ ಅಸ್ತಿತ್ವಕ್ಕೆ ಬಂದಿವೆ" ಎಂದರು.
"ತಾಲೂಕು ಪಂಚಾಯಿತಿ ರದ್ದು ಬಗ್ಗೆ ನಾವೇ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ಕೇಂದ್ರ ಸರ್ಕಾರಕ್ಕೆ ಪ್ರಸ್ತಾಪ ಕಳಿಸಲಾಗುತ್ತದೆ" ಎಂದು ಹೇಳಿದರು.
ಶೀಘ್ರದಲ್ಲಿಯೇ ತಾಲೂಕು ಪಂಚಾಯಿತಿ ಚುನಾವಣೆ ಎದುರಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ತಾಲೂಕು ಪಂಚಾಯಿತಿ ರದ್ದು ಬಗ್ಗೆ ಮಾತನಾಡಿದ್ದು, ಗೊಂದಲ ಹುಟ್ಟು ಹಾಕಿದೆ.