ಶಿರಸಿ : ಅನಾರೋಗ್ಯ ಪೀಡಿತ ಹೆಣ್ಣಾನೆ ಸಾವು
ಶಿರಸಿ, ಮಾರ್ಚ್ 04 : ಶಿರಸಿಯ ಬಿಸಲಕೊಪ್ಪ ಬಳಿಯ ಉಲ್ಲಾಳದಲ್ಲಿ ಆನಾರೋಗ್ಯ ಪೀಡಿತ ಹೆಣ್ಣಾನೆಯೊಂದು ಮೃತಪಟ್ಟಿದೆ. ಆನೆಗಳ ಹಿಂಡಿನಿಂದ ತಪ್ಪಿಸಿಕೊಂಡು ನಾಡಿಗೆ ಬಂದು, ಕಾಡಿಗೆ ಮರಳಲಾಗದೇ ಆನೆ ಪರದಾಡುತ್ತಿತ್ತು.
ಆನೆ ಕಣ್ಣಿಗೆ ಗಾಯಮಾಡಿಕೊಂಡಿತ್ತು. ಇದರಿಂದಾಗಿ ಏನೂ ಕಾಣದಂತಾಗಿ ರಸ್ತೆಯಲ್ಲಿ ನರಳಾಡುತ್ತಿತ್ತು. ಬಾಯಿಯ ಬಳಿ ಕೂಡ ಗಾಯವಾಗಿದ್ದರಿಂದ ದುರ್ವಾಸನೆ ಬರುತ್ತಿತ್ತು. ಆಹಾರ ತಿನ್ನಲು ಸಾಧ್ಯವಾಗದ್ದನ್ನು ಗಮನಿಸಿದ್ದ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ಇಲಾಖೆಯ ಸೂಚನೆಯ ಮೇರೆಗೆ ಶಿವಮೊಗ್ಗದ ಡಾ.ವಿನಯ್ ನೇತೃತ್ವದ ತಂಡ ಶುಕ್ರವಾರ ಉಲ್ಲಾಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿತ್ತು. ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲ್ ತರಬೇತಿ ಕೇಂದ್ರಕ್ಕೆ ಈ ಆನೆಯನ್ನು ಕರೆದೊಯ್ದು ಚಿಕಿತ್ಸೆ ನೀಡಲು ನಿರ್ಧರಿಸಲಾಗಿತ್ತು.

ಪಳಗಿದ ಗಂಡಾನೆಗಳನ್ನು ತಂದು ಈ ಆನೆಯನ್ನು ಕರೆದೊಯ್ಯಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ತೀವ್ರ ನಿತ್ರಾಣಗೊಂಡಿದ್ದ ಆನೆಯು ಶನಿವಾರ ಮಧ್ಯಾಹ್ನ ವೇಳೆಗೆ ಮೃತಪಟ್ಟಿದೆ. ಭಾನುವಾರ ಉಲ್ಲಾಳ ಗ್ರಾಮಸ್ಥರು ಆನೆಯ ಅಂತ್ಯಕ್ರಿಯೆ ನಡೆಸಿದರು.












Click it and Unblock the Notifications