ಸಂಸದ ಅನಂತ ಕುಮಾರ್ ಹೆಗಡೆಯಿಂದ ವೈದ್ಯರ ಮೇಲೆ ಹಲ್ಲೆ
ಶಿರಸಿ, ಜನವರಿ 3: ಶಿರಸಿಯ ಟಿಎಸ್ ಎಸ್ ಆಸ್ಪತ್ರೆಯ ವೈದ್ಯರ ಮೇಲೆ ಹಲ್ಲೆ ಮಾಡಿದ ಆರೋಪದಲ್ಲಿ ಉತ್ತರ ಕನ್ನಡದ ಸಂಸದ ಅನಂತ್ ಕುಮಾರ್ ಹೆಗಡೆ ಸುದ್ದಿಯಾಗಿದ್ದಾರೆ. ತಮ್ಮ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಹೋದ ವೇಲೆ ವೈದ್ಯರು ಸರಿಯಾಗಿ ಸ್ಪಂದಿಸಿಲ್ಲ ಎಂದು ಆಕ್ರೋಶಗೊಂಡ ಅವರು, ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ಅವರ ತಾಯಿ ಮನೆಯಲ್ಲಿ ಬಿದ್ದು ಗಾಯಗೊಂಡಿದ್ದರು. ಅವರನ್ನು ಟಿಎಸ್ ಎಸ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆ ವೇಳೆ ಇತರ ರೋಗಿಗಳನ್ನು ವೈದ್ಯರು ಪರಿಶೀಲಿಸುತ್ತಿದ್ದರು. ಸಂಸದರ ತಾಯಿಯವರಿಗೆ ಚಿಕಿತ್ಸೆ ನೀಡಲು ತಡವಾಗಿದೆ. ಆಗ ಸಂಸದರು ತೀವ್ರವಾಗಿ ಕೋಪಗೊಂಡಿದ್ದಾರೆ.[42ವರ್ಷಗಳ ಕೋಮಾದಿಂದ ಚಿರನಿದ್ರೆಗೆ ಜಾರಿದ ಅರುಣಾ]

ಆ ನಂತರ ವೈದ್ಯರಾದ ಮಧುಕೇಶ್ವರ್ ಹಾಗೂ ಬಾಲಚಂದ್ರ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಆ ದೃಶ್ಯಗಳು ಸಿಸಿ ಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಇಬ್ಬರೂ ವೈದ್ಯರಿಗೆ ರಕ್ತ ಬರುವಂತೆ ಹಲ್ಲೆ ಮಾಡಲಾಗಿದೆ. ಆದರೆ ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಮತ್ತು ಸಂಸದರು ವೈದ್ಯರಲ್ಲಿ ಕ್ಷಮೆ ಕೋರಿದರು ಎಂಬ ಮಾಹಿತಿ ಲಭ್ಯವಾಗಿದೆ.
ಈ ಕುರಿತು ಸ್ಪಷ್ಟನೆ ಪಡೆಯಲು ಒನ್ಇಂಡಿಯಾ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ಅವರ ಮೊಬೈಲ್ ಫೋನ್ ಗೆ ಕರೆ ಮಾಡಿತು. ಆದರೆ ಅವರು ಸ್ವಿಚ್ಛ್ ಆಫ್ ಮಾಡಿದ್ದರು.












Click it and Unblock the Notifications