ಬಿಜೆಪಿ ಸಮಾವೇಶದಲ್ಲಿ ಅಡಗಿದೆ ಅನಂತ ಕುಮಾರ್ ಹೆಗಡೆ ಪ್ರತಿಷ್ಠೆ!
ಉತ್ತರ ಕನ್ನಡ, ನವೆಂಬರ್ 07 : ಉತ್ತರ ಕನ್ನಡ ಜಿಲ್ಲೆಯಲ್ಲಿ ನವೆಂಬರ್ 14ರಂದು ಕರ್ನಾಟಕ ಬಿಜೆಪಿ ಪರಿವರ್ತನಾ ಸಮಾವೇಶ ನಡೆಯಲಿದೆ. ಸಮಾವೇಶವನ್ನು ಯಶಸ್ವಿಗೊಳಿಸಬೇಕು ಎಂದು ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಕರೆ ನೀಡಿದ್ದಾರೆ. ಪಕ್ಷದ ನಾಯಕರ ಜೊತೆ ಸಭೆ ನಡೆಸಿ, ಸಮಾವೇಶದ ಸಿದ್ಧತೆ ಕುರಿತು ಚರ್ಚೆ ನಡೆಸಿದ್ದಾರೆ.
ಶಿರಸಿಯಲ್ಲಿ ಸೋಮವಾರ ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆ ರಾಜ್ಯ ಸಚಿವ ಅನಂತ ಕುಮಾರ್ ಹೆಗಡೆ ಜಿಲ್ಲೆಯ ವಿವಿಧ ನಾಯಕರೊಂದಿಗೆ ಸಮಾಲೋಚನಾ ಸಭೆ ನಡೆಸಿದರು. ಬೆಳಗ್ಗೆಯಿಂದ ರಾತ್ರಿಯವರೆಗೂ ಸಭೆ ನಡೆಸಿದ ಅವರು, ಅತ್ಯಂತ ಯಶಸ್ವಿಯಾಗಿ ಸಮಾವೇಶ ನಡೆಯಬೇಕು ಎಂದು ಜಿಲ್ಲಾ ನಾಯಕರಿಗೆ ಸೂಚನೆ ಕೊಟ್ಟರು.
ಚಿತ್ರಗಳು: ರಾಜ್ಯದಲ್ಲಿ ಹೊಸ ಅಲೆ ಎಬ್ಬಿಸಲಿರುವ ಬಿಜೆಪಿಯ ಪರಿವರ್ತನಾ ಯಾತ್ರೆ
ಅನಂತ ಕುಮಾರ್ ಹೆಗಡೆ ಅವರು ಕೇಂದ್ರ ಸಚಿವರಾದ ಬಳಿಕ ತವರು ಜಿಲ್ಲೆಯಲ್ಲಿ ನಡೆಯುತ್ತಿರುವ ಬೃಹತ್ ಸಮಾವೇಶ ಇದಾಗಿದೆ. ಸಚಿವರ ಕಾರ್ಯಕ್ರಮಗಳಿಗೆ ಹೆಚ್ಚಾಗಿ ಜನರು ಆಗಮಿಸುತ್ತಾರೆ. ಸಮಾವೇಶವನ್ನು ಯಶಸ್ವಿಗೊಳಿಸಿ ಜಿಲ್ಲೆಯಲ್ಲಿ ಸಂಘಟನೆಯ ಶಕ್ತಿಯನ್ನು ತೋರಿಸುವ ಸಂದರ್ಭ ಇದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸಿಎಂ ಅಭ್ಯರ್ಥಿಯೆಂದು ಹರಿದಾಡುತ್ತಿದ್ದ ಸುದ್ದಿಗೆ ಅನಂತ್ ಕುಮಾರ್ ಹೆಗಡೆ ಸ್ಪಷ್ಟನೆ
ವಿವಿಧ ನಾಯಕರು : ಸಭೆಯಲ್ಲಿ ಜಿಲ್ಲೆಯ ವಿವಿಧ ನಾಯಕರು ಭಾಗವಹಿಸಿದ್ದರು. ಅದರಲ್ಲಿ ಬಹುತೇಕರು ಮುಂದಿನ ವಿಧಾನ ಸಭೆಯ ಟಿಕೇಟ್ ಆಕಾಂಕ್ಷಿಗಳು ಎನ್ನುವುದು ವಿಶೇಷ. ರೂಪಾಲಿ ನಾಯ್ಕ, ಜೆಡಿ ನಾಯ್ಕ, ವೆಂಕಟರಮಣ ಹೆಗಡೆ, ನಾಗರಾಜ ನಾಯ್ಕ ತೊರ್ಕೆ, ಯಶೋಧರ ನಾಯ್ಕ, ನರಸಿಂಹ ಕೊಣೇಮನೆ ಹೀಗೆ ಹಲವು ನಾಯಕರು ಪಾಲ್ಗೊಂಡಿದ್ದರು.
ವೇದಿಕೆಯಲ್ಲಿ ಟಿಪ್ಪು ಚರಿತ್ರೆ ಬಿಚ್ಚಿಡುವೆ : ಅನಂತ್ ಕುಮಾರ್ ಹೆಗಡೆ
ಪ್ರತಿಷ್ಠೆ-ಅನಿವಾರ್ಯ : ಬಿಜೆಪಿಯ ಪರಿವರ್ತನಾ ಯಾತ್ರೆ ಮೊದಲ ದಿನದಿಂದಲೂ ಒಂದಿಲ್ಲೊಂದು ವಿವಾದಲ್ಲಿದೆ. ಒಂದು ಕಡೆಯಲ್ಲಿ ಉದ್ಘಾಟನಾ ಸಮಾರಂಭಕ್ಕೆ ಜನರ ಕೊರತೆ ಎದುರಾಗಿತ್ತು. ಇನ್ನೊಂದೆಡೆ ಯಾತ್ರೆ ಮೇಲೆ ಕಲ್ಲು ತೂರಾಟ. ಹೋದ ಕಡೆಗಳಲೆಲ್ಲಾ ಕಾರ್ಯಕರ್ತರ ಅಸಮಧಾನ ಹೀಗೆ ಹಲವಾರು ಸಮಸ್ಯೆಗಳು ಎದುರಾಗಿವೆ. ಆದ್ದರಿಂದ, ಜಿಲ್ಲೆಯಲ್ಲಿ ಯಶಸ್ವಿಯಾಗಿ ಸಮಾವೇಶ ನಡೆಸಬೇಕು ಎಂಬುದು ಕೇಂದ್ರ ಸಚಿವರಿಗೆ ಅತ್ಯಂತ ಪ್ರತಿಷ್ಠಯ ವಿಷಯವಾಗಿದೆ.
ಅಂದಹಾಗೆ ನವೆಂಬರ್ 7ರ ಮಂಗಳವಾರ ಹಾಸನ, ಚನ್ನರಾಯಪಟ್ಟಣ, ಶ್ರವಣಬೆಳಗೊಳ, ಹೊಳೆನರಸೀಪುರದಲ್ಲಿದಲ್ಲಿ ಪರಿವರ್ತನಾ ಯಾತ್ರೆ ನಡೆಯುತ್ತಿದೆ.