ಸದಾನಂದ ಗೌಡ ಮುಂದೆ ಅರ್ಜಿ ಇಟ್ಟ ಯಡಿಯೂರಪ್ಪ
ಶಿವಮೊಗ್ಗ, ಜೂನ್ 9: ರಾಜ್ಯದ ಹಿತಾಸಕ್ತಿ ಕಾಯುವ ಸದುದ್ದೇಶದಿಂದ ಕರ್ನಾಟಕ ರಾಜಕೀಯಕ್ಕೆ ಸೀಮಿತವಾಗಿರುವ ಶಿವಮೊಗ್ಗ ಸಂಸದ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಾವು ಹೇಳಿದ ಮಾತಿಗೆ ಬದ್ಧರಾಗಿದ್ದು, ಶಿವಮೊಗ್ಗ ಮತ್ತು ಸುತ್ತಮುತ್ತಲ ಜಿಲ್ಲೆಗಳಲ್ಲಿ ಆಗಬೇಕಿರುವ ರೈಲ್ವೆ ಕೆಲಸಗಳ ಬಗ್ಗೆ ರೈಲ್ವೆ ಸಚಿವ ಡಿವಿ ಸದಾನಂದ ಗೌಡ ಅವರಿಗೆ ಪತ್ರ ಬರೆದಿದ್ದಾರೆ.
ಶಿವಮೊಗ್ಗ ಮಾಜಿ ಸಂಸದ, ಬಿವೈ ರಾಘವೇಂದ್ರ ಅವರ ಜತೆಗೂಡಿ ಯಡಿಯೂರಪ್ಪ ಈ ಮನವಿ ಪತ್ರ ಬರೆದಿದ್ದು, ಅದರಲ್ಲಿ ನನೆಗುದಿಗೆ ಬಿದ್ದಿರುವ ಪ್ರಮುಖ ರೈಲ್ವೆ ಯೋಜನೆಗಳ ಬಗ್ಗೆ ಕೇಂದ್ರ ಸಚಿವರ ಗಮನ ಸೆಳೆದಿದ್ದಾರೆ. ಅಂದಹಾಗೆ, ಜುಲೈ ಮೊದಲ ವಾರದಲ್ಲಿ ಸದಾನಂದ ಗೌಡರು ತಮ್ಮ ಚೊಚ್ಚಲ ಬಜೆಟ್ ಮಂಡಿಸಲಿದ್ದಾರೆ.
ಕಳೆದ ವಾರ ನವದೆಹಲಿಯಲ್ಲಿ ರೈಲ್ವೆ ಸಚಿವ ಸದಾನಂದ ಗೌಡರನ್ನು ಭೇಟಿ ಮಾಡಿರುವ ಅಪ್ಪ-ಮಗ ಮುಂದಿನ ಬಜೆಟ್ಟಿನಲ್ಲಿ ಈ ಯೋಜನೆಗಳತ್ತ ಆದ್ಯ ಗಮನ ಹರಿಸುವಂತೆ ಒತ್ತಾಯಿಸಿದ್ದಾರೆ. ಪ್ರಮುಖ ಬೇಡಿಕೆಗಳ ಪಟ್ಟಿ ಹೀಗಿದೆ:

ಶಿವಮೊಗ್ಗ-ಶಿಕಾರಿಪುರ-ಹಾನಗಲ್-ತಡಸ - ಹುಬ್ಬಳ್ಳಿಗೆ ಸಂಪರ್ಕ
ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲು ಮಾರ್ಗದ ಸಮೀಕ್ಷಾ ಕಾರ್ಯ ಇನ್ನೂ ಕೈಗೆತ್ತಿಕೊಂಡಿಲ್ಲ. ಹಾಗಾಗಿ, ಈ ಮಾರ್ಗದ ಬದಲಿಗೆ ಶಿವಮೊಗ್ಗ-ಶಿಕಾರಿಪುರ-ಹಾನಗಲ್-ತಡಸ ಮಾರ್ಗವಾಗಿ ಹುಬ್ಬಳ್ಳಿಗೆ ಸಂಪರ್ಕ ಕಲ್ಪಿಸುವ ಮಾರ್ಗದ ಸಮೀಕ್ಷಾ ಕಾರ್ಯವನ್ನು ಬಜೆಟ್ಟಿನಲ್ಲಿ ಮಂಡಿಸಬೇಕು.

ಶಿವಮೊಗ್ಗದಿಂದ ಬೆಂಗಳೂರಿಗೆ ತಡ ರಾತ್ರಿ ಹೊಸ ರೈಲು ಸೇವೆ
ತಾಳಗುಪ್ಪ-ಬೆಂಗಳೂರು ರೈಲು ತಾಳಗುಪ್ಪದಿಂದ ಪ್ರಾರಂಭವಾಗುತ್ತದೆ. ಹಾಗಾಗಿ ಶಿವಮೊಗ್ಗ ಪ್ರಯಾಣಿಕರಿಗೆ ಸೀಟು ಸಿಗುತ್ತಿಲ್ಲ. ಆದ್ದರಿಂದ ಶಿವಮೊಗ್ಗದಿಂದ ನೇರವಾಗಿ ಬೆಂಗಳೂರಿಗೆ ತಡ ರಾತ್ರಿ ಹೊಸ ರೈಲು ಸೇವೆ ಆರಂಭಿಸಬೇಕು.
ಬೆಂಗಳೂರು-ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ 1 ಎಸಿ ಕೋಚ್ ಸೌಲಭ್ಯ ಒದಗಿಸಬೇಕು. ಶಿವಮೊಗ್ಗ ರೈಲು ನಿಲ್ದಾಣದಲ್ಲಿ ತಾಳಗುಪ್ಪ ಮಾರ್ಗದ ಕಡೆ ಹೋಗುವವರಿಗಾಗಿ ಪಾದಚಾರಿ ಮೇಲ್ಸೇತುವೆ ನಿರ್ಮಿಸಬೇಕು.

ತಾಳಗುಪ್ಪದಿಂದ ಹೊನ್ನಾವರಕ್ಕೆ ಹೊಸ ರೈಲ್ವೆ ಮಾರ್ಗ
ಬೀರೂರು-ಶಿವಮೊಗ್ಗ ಡಬ್ಲಿಂಗ್ ಸಮೀಕ್ಷೆ ಮುಗಿದಿದೆ. ರೈಲು ಮಾರ್ಗ ಅನುಷ್ಠಾನಕ್ಕಾಗಿ ರೈಲ್ವೆ ಬಜೆಟ್ಟಿನಲ್ಲಿ ಅನುದಾನ ಕಲ್ಪಿಸಬೇಕು. ತಾಳಗುಪ್ಪದಿಂದ ಹೊನ್ನಾವರಕ್ಕೆ ಹೊಸ ರೈಲ್ವೆ ಮಾರ್ಗ ಕಲ್ಪಿಸಿ, ಅದನ್ನು ಕೊಂಕಣ ರೈಲ್ವೆಗೆ ಸೇರಿಸಬೇಕು.

ಶಿವಮೊಗ್ಗ- ಹರಿಹರ ರೈಲ್ವೆ ಮಾರ್ಗ ಅನುಷ್ಠಾನಕ್ಕಾಗಿ ಭೂಸ್ವಾಧೀನ
ಶಿವಮೊಗ್ಗ- ಹರಿಹರ ರೈಲ್ವೆ ಮಾರ್ಗ ಅನುಷ್ಠಾನಕ್ಕಾಗಿ ಭೂಸ್ವಾಧೀನಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು. ಭದ್ರಾವತಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ತುರ್ತಾಗಿ ಮುಗಿಸಿ, ಬಿದರೆ ರೈಲು ನಿಲ್ದಾಣದಲ್ಲಿ ರೈಲುಗಳ ನಿಲುಗಡೆ ಪುನರಾರಂಭಿಸಬೇಕು.

ಅರಸಾಳು ಮತ್ತು ಹಾರನಹಳ್ಳಿಯಲ್ಲಿ ಪ್ಯಾಸೆಂಜರ್ ರೈಲು ನಿಲುಗಡೆ
ರಾಮಚಂದ್ರಾಪುರ ಮಠ ಮತ್ತು ಕೊಲ್ಲೂರು ಧಾರ್ಮಿಕ ಕ್ಷೇತ್ರಗಳಿಗೆ ತೆರಳುವ ಭಕ್ತರ ಅನುಕೂಲಕ್ಕಾಗಿ ಅರಸಾಳು ಮತ್ತು ಹಾರನಹಳ್ಳಿಯಲ್ಲಿ ಪ್ಯಾಸೆಂಜರ್ ರೈಲು ನಿಲುಗಡೆ ಮಾಡಬೇಕು.












Click it and Unblock the Notifications