ತುಂಗಾ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ ಪ್ರಕರಣ: ಇನ್ನೂ ಸಿಗದ ಮೃತದೇಹ!
ಶಿವಮೊಗ್ಗ, ಜುಲೈ.17: ಗಂಡನ ಸಾವಿನಿಂದ ಮನನೊಂದ ಹೆಂಡತಿ ತುಂಗಾ ನದಿಗೆ ಹಾರಿ ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿತ್ರಮ್ಮ (58) ಎಂಬುವವರೇ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಇವರ ಮೃತದೇಹಕ್ಕಾಗಿ ಅಗ್ನಿ ಶಾಮಕದಳ ಮತ್ತು ಕೋಟೆ ಪೊಲೀಸರು ಶೋಧಕಾರ್ಯ ಮುಂದುವರೆಸಿದ್ದಾರೆ.
ಸಾವಿತ್ರಮ್ಮ ಮಗ ಕಿರಣ್ ಜೊತೆ ಮೊಬೈಲ್ ನಲ್ಲಿ ಮಾತನಾಡುತ್ತಾ 'ನೀವೆಲ್ಲರೂ ಚೆನ್ನಾಗಿ ಬಾಳಿ' ಎಂದು ಹಾರೈಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ನಗರದ ತುಂಗಾ ನದಿಯ ಕೋರ್ಪಾಲಯ್ಯ ಮಂಟಪದ ಬಳಿ ಈ ಘಟನೆ ನಡೆದಿದೆ.
ಮೃತ ಪೌರಕಾರ್ಮಿಕ ಸುಬ್ರಮಣಿ ಸಾವಿನ ಹಿಂದಿದೆ ಮನಕಲಕುವ ಕತೆ
ಸಾವಿತ್ರಮ್ಮ ಆಲ್ಕೋಳದ ನಿವಾಸಿಯಾಗಿದ್ದು, ಅವರ ಮೃತ ದೇಹ ಇದುವರೆಗೂ ಪತ್ತೆಯಾಗಿಲ್ಲ. ಅಪಾಯಮಟ್ಟ ಮೀರಿ ತುಂಗಾ ನದಿ ಹರಿಯುತ್ತಿರುವುದರಿಂದ ಕಾರ್ಯಾಚರಣೆಗೆ ಅಗ್ನಿ ಶಾಮಕದಳದ ಸಿಬ್ಬಂದಿಗಳು ಸ್ವಲ್ಪ ಹಿಂದೇಟು ಹಾಕುತ್ತಿದ್ದಾರೆ.
ಆದರೆ ತುಂಗಾ ನದಿಯಲ್ಲಿ ತಾಯಿ ಮೃತದೇಹ ಹುಡುಕಲು ಅವರ ಮಕ್ಕಳು ಸ್ನೇಹಿತರೊಂದಿಗೆ ಪ್ರಾಣದ ಹಂಗು ತೊರೆದು ಹುಡುಕುತ್ತಿದ್ದಾರೆ. ಈ ಕುರಿತು ಮಾತನಾಡಿದ ಕೋಟೆ ವೃತ್ತ ನಿರೀಕ್ಷಕ ದೇವರಾಜ್ ಶೋಧ ಕಾರ್ಯವನ್ನು ಮುಂದುವರೆಸುವುದಾಗಿ ಭರವಸೆ ನೀಡಿದ್ದಾರೆ.