ಶಿವಮೊಗ್ಗ; ಒಂದೇ ವಾರದಲ್ಲಿ ಆನೆಗಳು ವಾಪಸ್, ಅಡಕೆ ಸಸಿ ನಾಶ
ಶಿವಮೊಗ್ಗ, ಫೆಬ್ರವರಿ 11: ಅರಣ್ಯ ಇಲಾಖೆ ಸಿಬ್ಬಂದಿಗಳು ಆನೆ ಹೆಮ್ಮೆಟ್ಟಿಸುವ ಕಾರ್ಯಾಚರಣೆ ಮುಗಿಸಿ ವಾರ ಕಳೆಯೋದರಲ್ಲಿ ಕಾಡಾನೆಗಳು ಮತ್ತೆ ಪ್ರತ್ಯಕ್ಷವಾಗಿವೆ. ಅಡಕೆ ಸಸಿಗಳನ್ನು ಹಾನಿ ಮಾಡಿದ್ದು, ಇಲಾಖೆ ಕಾರ್ಯಾಚರಣೆ ಬಗ್ಗೆಯೇ ಪ್ರಶ್ನೆ ಎದ್ದಿದೆ?.
ಶಿವಮೊಗ್ಗದ ಉಂಬ್ಳೆಬೈಲು ಅರಣ್ಯ ವ್ಯಾಪ್ತಿಯಲ್ಲಿ ಮತ್ತೆ ಕಾಡಾನೆಗಳು ಪ್ರತ್ಯಕ್ಷವಾಗಿವೆ. ತೋಟಗಳಿಗೆ ನುಗ್ಗಿ ಅಡಕೆ ಸಸಿಗಳಿಗೆ ಹಾನಿ ಮಾಡಿರುವ ಘಟನೆಗಳು ವರದಿಯಾಗಿದೆ. ಇದರಿಂದ ಇತ್ತೀಚೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಸಕ್ರೆಬೈಲು ಬಿಡಾರದ ಆನೆಗಳನ್ನು ಉಪಯೋಗಿಸಿಕೊಂಡು ನಡೆಸಿದ ಕಾರ್ಯಾಚರಣೆ ಹೊಳೆಯಲ್ಲಿ ಹುಣಸೇಹಣ್ಣು ಹಿಂಡಿದಂತೆ ಆಗಿದೆ.
ಎಲ್ಲೆಲ್ಲಿ ಆನೆಗಳು?; ಸೋಮವಾರ ಹಾಲ್ ಲಕ್ಕವಳ್ಳಿಯಲ್ಲಿ ಅಡಕೆ ತೋಟಕ್ಕೆ ನುಗ್ಗಿದ ಕಾಡಾನೆಗಳು ಸಸಿಗಳನ್ನು ತಿಂದಿರುವುದು ತಿಳಿದು ಬಂದಿದೆ. ಕೈದೊಟ್ಲು ಗ್ರಾಮದ ರೈತ ಬಾಲಪ್ಪ ಅವರ ತೋಟಕ್ಕೆ ನುಗ್ಗಿರುವ ಕಾಡಾನೆಗಳು 25 ಸಸಿಗಳನ್ನು ಮುರಿದಿವೆ.

ಭದ್ರಾ ಅಭಯಾರಣ್ಯದಿಂದ ಹಲವು ವರ್ಷದಿಂದ ಈ ಭಾಗಕ್ಕೆ ಬಂದಿರುವ ಆನೆಗಳು, ತೋಟ, ಗದ್ದೆಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿವೆ. ಹಾಗಾಗಿ ಅವುಗಳನ್ನು ಮತ್ತೆ ಭದ್ರಾ ಅಭಯಾರಣಕ್ಕೆ ಓಡಿಸಲು ನಿರ್ಧರಿಸಲಾಗಿತ್ತು. ಇದೆ ಕಾರಣಕ್ಕೆ ಕಳೆದ ವಾರ ಕಾರ್ಯಾಚರಣೆ ನಡೆಸಲಾಗಿತ್ತು.
ಏನಿದು ಕಾರ್ಯಾಚರಣೆ?; ಸಕ್ರೆಬೈಲು ಬಿಡಾರದ ಆನೆಗಳನ್ನು ಉಪಯೋಗಿಸಿಕೊಂಡು ಕಾಡಾನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಓಡಿಸಲಾಗಿತ್ತು. ಮೂರು ದಿನ ನಿರಂತರವಾಗಿ ಕಾರ್ಯಾಚರಣೆ ನಡೆಸಲಾಗಿತ್ತು.

ಆದರೆ, ಅರಣ್ಯ ಇಲಾಖೆಯ ಈ ಕಾರ್ಯಾಚರಣೆ ಮುಗಿದ ನಾಲ್ಕು ದಿನಕ್ಕೆ ಕಾಡಾನೆಗಳು ಮತ್ತೊಮ್ಮೆ ಪ್ರತ್ಯಕ್ಷವಾಗಿವೆ. ಇದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.












Click it and Unblock the Notifications