ಚಂದ್ರ ಗ್ರಹಣದ ಕೆಡುಕಿನ ಬಗ್ಗೆ ಯಡಿಯೂರಪ್ಪನವರು ಹೇಳಿದ್ದೇನು?
Recommended Video

ಶಿವಮೊಗ್ಗ, ಜುಲೈ 18: ಜುಲೈ 27ರಂದು ಸಂಭವಿಸಲಿರುವ ಚಂದ್ರಗ್ರಹಣ ಅತ್ಯಂತ ಕೆಟ್ಟದ್ದು ಎಂದು ಹೇಳಲಾಗುತ್ತಿದೆ. ಆ ಸಮಯದಲ್ಲಿ ಯಾವುದೇ ಶುಭ ಕಾರ್ಯ ಮಾಡಬೇಡಿ ಎಂದು ಬಿಜೆಪಿ ಕಾರ್ಯಕರ್ತರಿಗೆ ಯಡಿಯೂರಪ್ಪ ಬುಧವಾರ ಸಲಹೆ ಮಾಡಿದರು.
ಗ್ರಹಣ ಕಳೆದ ಬಳಿಕ ರಾಜ್ಯ ಪ್ರವಾಸ ಮಾಡುತ್ತೇನೆ. ಗ್ರಹಣದ ಸಮಯದಲ್ಲಿ ಯಾವುದೇ ಅವಘಡ ಸಂಭವಿಸದಿರಲಿ ಎಂದು ಪ್ರಾರ್ಥಿಸುವುದನ್ನು ಬಿಟ್ಟು ಬೇರೆ ದಾರಿ ಇಲ್ಲ. ರಾಜ್ಯದ ಜನರು ಗ್ರಹಣದ ಬಗ್ಗೆ ಎಚ್ಚರ ವಹಿಸಬೇಕು ಎಂದರು.
ಅಂದ ಹಾಗೆ, ಯಡಿಯೂರಪ್ಪ ಅವರದು ವೃಶ್ಚಿಕ ರಾಶಿ. ಈ ಸಲದ ಚಂದ್ರ ಗ್ರಹಣ ಅವರ ಪಾಲಿಗೆ ಶುಭ ತರುತ್ತದೆ ಎಂದು ಜ್ಯೋತಿಷಿಗಳು ಅಭಿಪ್ರಾಯ ಪಡುತ್ತಾರೆ. ಇನ್ನು ಗುರು ಗ್ರಹವು ಇದೇ ಅಕ್ಟೋಬರ್ ನಲ್ಲಿ ವೃಶ್ಚಿಕ ರಾಶ್ಸಿ ಪ್ರವೇಶಿಸಿ, ಬಹಳ ವೇಗವಾಗಿ ಮಾರ್ಚ್ ಹೊತ್ತಿಗೆ ಧನು ರಾಶಿಗೆ ಪ್ರವೇಶವಾಗುತ್ತದೆ. ಆಗ ಎರಡನೇ ಮನೆಯ ಗುರು ಶುಭ ಫಲಗಳನ್ನು ನೀಡುವ ನಿರೀಕ್ಷೆ ಇದೆ.
ರಾಜ್ಯ ಸರಕಾರದ ಆರ್ಥಿಕ ಸ್ಥಿತಿ ಸರಿಯಿಲ್ಲ
ರಾಜ್ಯ ಸರಕಾರದ ವಿರುದ್ದ ವಾಗ್ದಾಳಿ ನಡೆಸಿದ ಯಡಿಯೂರಪ್ಪ, ರಾಜ್ಯದ ಆರ್ಥಿಕ ಸ್ಥಿತಿ ಕುರಿತು ಜನರಿಗೆ ಮಾಹಿತಿ ನೀಡಬೇಕು ಎಂದು ಸದನದಲ್ಲಿ ಒತ್ತಾಯ ಮಾಡಿದೆ. ಆದರೆ ಮುಖ್ಯಮಂತ್ರಿಗಳು ಅದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸಲಿಲ್ಲ. ಈಗಲಾದರೂ ಆರ್ಥಿಕ ಸ್ಥಿತಿ ಕುರಿತು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.

ಸಾಲಮನ್ನಾ ಕುರಿತು ಸಾಕಷ್ಟು ಗೊಂದಲವಿದೆ. ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದರೆ ಹಾರಿಕೆ ಉತ್ತರ ನೀಡಿ, ಕಲಾಪವನ್ನು ಸಮಾಪ್ತಿಗೊಳಿಸಿದ್ದಾರೆ. ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯರ ಅವಧಿಯಲ್ಲಿ ಸಾಲ ಮನ್ನಾ ಬಾಬ್ತು 4 ಸಾವಿರ ಕೋಟಿ ರುಪಾಯಿಯಷ್ಟು ಬಿಡುಗಡೆ ಆಗಬೇಕಿದೆ. ಹೀಗಾದರೆ ಸಹಕಾರ ಸಂಘಗಳು ದುಃಸ್ಥಿತಿಗೆ ತಲುಪಲಿವೆ ಎಂದರು.
ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರಕಾರದಲ್ಲಿ ಸಾಕಷ್ಟು ಗೊಂದಲವಿದೆ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಕುಂಠಿತಗೊಂಡಿದೆ. ಶಾಂತ ರೀತಿಯಲ್ಲಿ ಎಲ್ಲವನ್ನೂ ಗಮನಿಸುತ್ತಿದ್ಧೇವೆ. ರಾಜಕಾರಣದ ಬೆಳವಣಿಗೆಗಳನ್ನು ಗಮನಿಸಿ, ಹೋರಾಟ ರೂಪಿಸುತ್ತೇವೆ ಎಂದು ಹೇಳಿದರು.
ಗ್ರಹಣ ಮುಕ್ತಾಯಗೊಂಡ ಬಳಿಕ ರಾಜ್ಯ ಪ್ರವಾಸ ನಡೆಸುತ್ತೇನೆ. ಎಲ್ಲ ಜಿಲ್ಲೆಗೂ ಭೇಟಿ ನೀಡಿ, ಸಭೆ ನಡೆಸಲಾಗುವುದು. ಅಷ್ಟರೊಳಗಾಗಿ ಪಕ್ಷದ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರ ಸಭೆ ಕರೆದು, ಸಾಲ ಮನ್ನಾ ಸ್ಥಿತಿಗತಿ ಬಗ್ಗೆ ಚರ್ಚೆ ನಡೆಸುವುದಾಗಿ ತಿಳಿಸಿದರು.
ಜುಲೈ 20ರಿಂದ ಜಿಲ್ಲಾ ಪ್ರವಾಸ
ಜುಲೈ 20 ರಿಂದ ಜಿಲ್ಲಾ ಪ್ರವಾಸ ಕೈಗೊಳ್ಳುತ್ತೇನೆ ಎಂದ ಯಡಿಯೂರಪ್ಪ, 20ರಂದು ಬೆಳಗ್ಗೆ 11ಕ್ಕೆ ಸೊರಬ, 12ಕ್ಕೆ ಸಾಗರ ಹಾಗೂ ಮಧ್ಯಾಹ್ನ 3ಕ್ಕೆ ಹೊಸನಗರಕ್ಕೆ ಭೇಟಿ ನೀಡಲಾಗುವುದು. 21ರಂದು ಶಿವಮೊಗ್ಗದಲ್ಲಿ ಜಿಲ್ಲಾ ಕಾರ್ಯಕಾರಿಣಿ ಸಭೆ ನಡೆಯಲಿದೆ. 22 ರಂದು ತೀರ್ಥಹಳ್ಳಿಯಲ್ಲಿ ಸಭೆ ನಡೆಸಲಾಗುವುದು. ಜುಲೈ 20 ಮತ್ತು 22ರಂದು ಜಿಲ್ಲೆಯಲ್ಲಿ ಆಗಿರುವ ನೆರೆ ಹಾನಿ ಬಗ್ಗೆ ಪರಿಶೀಲನೆ ನಡೆಸಲಿದ್ದೇನೆ ಎಂದರು.
ಕೇಂದ್ರ ಸರಕಾರವು ಅಮೃತ್ ಯೋಜನೆಗೆಂದು ಜಿಲ್ಲೆಗೆ 324 ಕೋಟಿ ರುಪಾಯಿ ಅನುದಾನ ಬಿಡುಗಡೆ ಮಾಡಿದೆ. ಭದ್ರಾವತಿಗೆ 141 ಕೋಟಿ . ಬಿಡುಗಡೆಯಾಗಿದೆ. ಇದರಲ್ಲಿ ಕುಡಿಯುವ ನೀರು, ಚರಂಡಿ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕು. ಇದರಲ್ಲಿ ಯಾವುದೇ ಅವ್ಯವಹಾರ ನಡೆಯದಂತೆ ಎಚ್ಚರಿಕೆ ವಹಿಸಬೇಕಿದೆ ಎಂದರು.












Click it and Unblock the Notifications