ಶಿವಮೊಗ್ಗ : ಟಿಪ್ಪು ಸುಲ್ತಾನ್ ಕಾಲದ ರಾಕೆಟ್ಗಳು ಪತ್ತೆ
ಶಿವಮೊಗ್ಗ, ಜುಲೈ 29 : ಕೆಳದಿ ಸಾಮ್ರಾಜ್ಯದ ರಾಜಧಾನಿ ಐತಿಹಾಸಿಕ ಬಿದನೂರು (ನಗರ) 18ನೇ ಶತಮಾನದ ನೂರಾರು ರಾಕೆಟ್ಗಳು ಪತ್ತೆಯಾಗಿದ್ದು ಐತಿಹಾಸಿಕ ಕುತೂಹಲವನ್ನು ಮೂಡಿಸಿದೆ.
ಹೌದು, ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಬಿದನೂರು ನಗರದ ಜಿ.ಎನ್.ರಮಣ ಅವರಿಗೆ ಸೇರಿದ ತೋಟದ ಬಾವಿಯಲ್ಲಿ ರಾಕೆಟ್ ಪತ್ತೆಯಾಗಿವೆ. 30 ಸೆಂ.ಮೀ.ನಷ್ಟು ಉದ್ದ ಮತ್ತು 18 ಸೆಂ.ಮೀ.ದಪ್ಪದ ಸಾವಿರಕ್ಕೂ ಹೆಚ್ಚು ರಾಕೆಟ್ ಸಿಕ್ಕಿವೆ.
2002 ರಲ್ಲೆ ಪತ್ತೆಯಾಗಿತ್ತು : 18 ಶತಮಾನದ ಟಿಪ್ಪು ಕಾಲದ ರಾಕೆಟ್ ಎನ್ನಲಾದ ಈ ಶೆಲ್ ಗಳು 2002 ರಲ್ಲೇ ಪತ್ತೆಯಾಗಿದ್ದವು. ಬಿದನೂರು ನಗರದ ನಾಗರಾಜರಾವ್ ಜಮೀನಿನಲ್ಲಿ ಹಳೇ ಬಾವಿಯ ಹೂಳು ತೆಗೆಯುವಾಗ ಈ ಶೆಲ್ ಗಳು ಕಂಡುಬಂದಿದ್ದವು. ಕೂಡಲೇ ಪುರಾತತ್ವ ಇಲಾಖೆ ಸಂಗ್ರಹ ಮಾಡಿ ಸಂಶೋಧನೆಗೆ ಒಳಪಡಿಸಿತ್ತು. ನಂತರವಷ್ಟೆ ಇದು ಟಿಪ್ಪು ಕಾಲದ ರಾಕೆಟ್ ಗಳು ಎಂದು ಗುರುತಿಸಲಾಗಿದೆ.

ಇದೀಗ ಬಾವಿಯಿಂದ ಎತ್ತಿಹಾಕಿದ್ದ ಮಣ್ಣುಗುಡ್ಡೆಯಲ್ಲಿ ಕೂಡ ರಾಕೆಟ್ ಗಳು ಕಂಡುಬಂದಿವೆ. ಟಿಪ್ಪು ಕಾಲದ ರಾಕೆಟ್ಗಳು ತುಂಬಾ ಅಪರೂಪ ಮತ್ತು ಮಹತ್ವದ್ದು. ವಿಶ್ವದ ಎರಡು ಕಡೆ ಮಾತ್ರ ಇದನ್ನು ನೋಡಬಹುದಾಗಿದೆ. ಒಂದು ಬೆಂಗಳೂರಿನ ಮ್ಯೂಸಿಯಂನಲ್ಲಿ ಮೂರು ರಾಕೆಟ್ ಮತ್ತು ಇಲ್ಲಿಂದಲೇ ತೆಗೆದುಕೊಂಡು ಹೋಗಿ ಇಂಗ್ಲೇಂಡ್ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕಿಡಲಾಗಿದೆ.
2002 ರಲ್ಲಿ ಪತ್ತೆಯಾದ ರಾಕೆಟ್ ಗಳನ್ನು ಶಿವಮೊಗ್ಗದ ಶಿವಪ್ಪನಾಯಕ ಅರಮನೆ ಮ್ಯೂಸಿಯಂನಲ್ಲಿ ಇಡಲಾಗಿದೆ. ಈಗ ಮತ್ತೆ ಅಪಾರ ಸಂಖ್ಯೆಯಲ್ಲಿ ಸಿಕ್ಕಿರುವುದು ರಾಕೆಟ್ ಮಹತ್ವ ಇನ್ನಷ್ಟು ಹೆಚ್ಚಿದೆ. ಅಪಾರ ಸಂಖ್ಯೆಯಲ್ಲಿ ರಾಕೆಟ್ ದೊರೆತ ಕಾರಣ ಶಿವಮೊಗ್ಗದ ಶಿವಪ್ಪನಾಯಕ ಮ್ಯೂಸಿಯಂನಲ್ಲಿ ರಾಕೆಟ್ ಗ್ಯಾಲರಿ ಸ್ಥಾಪಿಸಲು ಪುರಾತತ್ವ ಇಲಾಖೆ ಮುಂದಾಗಿದೆ.

ಒಟ್ಟಾರೆ ಕೆಳದಿ ಸಾಮ್ರಾಜ್ಯದ ಮೂರನೇ ರಾಜಧಾನಿಯಾಗಿ ಗಮನಸೆಳೆದಿದ್ದ ಬಿದನೂರು ನಂತರ ಆಕ್ರಮಣಕ್ಜೆ ಒಳಗಾಗಿ ಅವಸಾನ ಹೊಂದಿತ್ತು. ಹೈದರ್ ನಗರವಾಗಿ ಮರು ನಾಮಕರಣಗೊಂಡ ಬಿದನೂರು ಪ್ರಸ್ತುತ ನಗರ ಎಂಬ ಹೆಸರಲ್ಲಿ ಪ್ರಚಲಿತದಲ್ಲಿದೆ.
ಇದೀಗ ಹೇರಳ ಸಂಖ್ಯೆಯಲ್ಲಿ ರಾಕೆಟ್ ದೊರೆತಿರುವುದು ಬಿದನೂರಿನ ಐತಿಹಾಸಿಕ ಮಹತ್ವಕ್ಕೊಂದು ಮನ್ನಣೆ ಸಿಕ್ಕಂತಾಗಿದೆ. ಇದರ ಸಂರಕ್ಷಣೆ ಮತ್ತು ನಿರ್ವಹಣೆಯನ್ನು ಪುರಾತತ್ವ ಇಲಾಖೆ ಮಾಡಬೇಕಿದೆ.












Click it and Unblock the Notifications