ಶಿವಮೊಗ್ಗ ಚುನಾವಣೆ : 3 ಗ್ರಾಮಗಳ ಜನರಿಂದ ಮತದಾನ ಬಹಿಷ್ಕಾರ
ಶಿವಮೊಗ್ಗ , ಅಕ್ಟೋಬರ್ 30 : ಶಿವಮೊಗ್ಗ ಜಿಲ್ಲೆಯ ಮೂರು ಗ್ರಾಮಗಳ ಜನರು ಲೋಕಸಭಾ ಉಪ ಚುನಾವಣೆಯನ್ನು ಬಹಿಷ್ಕಾರ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ನವೆಂಬರ್ 3ರಂದು ಉಪ ಚುನಾವಣೆ ನಡೆಯಲಿದೆ.
ಸಾಗರ ತಾಲೂಕಿನ ಕಾನೂರು, ಉರುಳುಗಲ್ಲು ಮತ್ತು ಶಿವಮೊಗ್ಗ ತಾಲೂಕಿನ ಹಾಡೋನಹಳ್ಳಿ ಗ್ರಾಮದ ಜನರು ಲೋಕಸಭಾ ಉಪ ಚುನಾವಣೆ ಬಹಿಷ್ಕಾರ ಮಾಡುವುದಾಗಿ ಹೇಳಿದ್ದಾರೆ.
ರಸ್ತೆ, ಶಾಲೆ, ವಿದ್ಯುತ್ ವ್ಯವಸ್ಥೆ, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಚುನಾವಣೆಯನ್ನು ಬಹಿಷ್ಕಾರ ಮಾಡಲಾಗುತ್ತಿದೆ. ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಮಾಡಿದರೂ ಸೌಲಭ್ಯ ಕಲ್ಪಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಅರಣ್ಯ ಕಾಯ್ದೆಯ ನೆಪದಲ್ಲಿ ಅರಣ್ಯಾಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ. ಕಿರುಕುಳ ತಪ್ಪಿಸಬೇಕು ಎಂದು ಕಾನೂರು, ಉರುಳುಗಲ್ಲು ಗ್ರಾಮಸ್ಥರು ಆಗ್ರಹಿಸಿದ್ದು, ಚುನಾವಣೆಯಲ್ಲಿ ಮತದಾನ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಮರಳು ಗಣಿಗಾರಿಕೆ : ಶಿವಮೊಗ್ಗ ತಾಲೂಕಿನ ಹಾಡೋನಹಳ್ಳಿ ಗ್ರಾಮದ ಜನರು ಮರಳು ಗಣಿಗಾರಿಕೆ ತಡೆಯುವಂತೆ ಒತ್ತಾಯಿಸಿ ಮತದಾನ ಬಹಿಷ್ಕಾರ ಮಾಡಿದ್ದಾರೆ. ಗ್ರಾಮದಲ್ಲಿ ಮತ್ತೆ ಮರಗಳು ಗಣಿಗಾರಿಕೆ ಆರಂಭವಾಗಿದೆ.
ತುಂಗಭದ್ರಾ ನದಿ ಪಾತ್ರದಲ್ಲಿ ಮರಳು ತೆಗೆದು ಬೃಹತ್ ಗುಂಡಿಗಳಾಗಿದ್ದವು. ಎರಡು ವರ್ಷದ ಹಿಂದೆ ಗಣಪತಿ ವಿಸರ್ಜನೆ ಸಮಯದಲ್ಲಿ 12 ಯುವಕರು ನದಿಯಲ್ಲಿ ಮುಳುಗಿ ಮೃತಪಟ್ಟಿದ್ದರು. ಇಷ್ಟಾದರೂ ಜಿಲ್ಲಾಡಳಿತ ಮರಳು ಗಣಿಗಾರಿಕೆ ತಡೆದಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.












Click it and Unblock the Notifications