ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ, ಗ್ರಾಮಸ್ಥರಿಂದಲೇ ಟಾರ್ಪಲ್ ಬಸ್ ತಂಗುದಾಣ ನಿರ್ಮಾಣ
ಶಿವಮೊಗ್ಗ, ಜುಲೈ 12: ಗ್ರಾಮ ಪಂಚಾಯಿತಿ ನಿರ್ಲಕ್ಷ್ಯದಿಂದ ಬೇಸತ್ತ ಗ್ರಾಮಸ್ಥರೇ ಟಾರ್ಪಲ್ ಹೊದಿಕೆಯ ಬಸ್ ನಿಲ್ದಾಣ ನಿರ್ಮಿಸಿಕೊಂಡಿದ್ದಾರೆ. ಮಳೆಗಾಲದಲ್ಲಿ ಮಕ್ಕಳು, ಹಿರಿಯರು ಮಳೆಯಲ್ಲಿ ನಿಂತು ಬಸ್ಸಿಗೆ ಕಾಯುವುದನ್ನು ತಪ್ಪಿಸಲು ಈ ಕ್ರಮ ಕೈಗೊಂಡಿದ್ದಾರೆ.
ತೀರ್ಥಹಳ್ಳಿ ತಾಲೂಕು ಕನ್ನಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವತ್ತಿ ಗ್ರಾಮದ ಜನರು ಟಾರ್ಪಲ್ ಹೊದಿಕೆಯ ಬಸ್ ನಿಲ್ದಾಣ ನಿರ್ಮಿಸಿದ್ದಾರೆ. ಮುಂಗಾರು ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಅಬ್ಬರಿಸುತ್ತಿದೆ. ಹಲವು ಕಡೆ ವರುಣನ ಅಬ್ಬರಕ್ಕೆ ರಸ್ತೆಗಳು, ಮನೆಗಳು ಹಾಗೂ ಗುಡ್ಡಗಳು ಕುಸಿಯುತ್ತಿವೆ.
ಬಾರ್ಗೆ ಬೇಕು 'ಡಿಜಿಟಲ್ ಪೇಮೆಂಟ್'; ಮಾಸ್ತಿಕಟ್ಟೆಯಲ್ಲಿ ನಾಳೆ ಅಪರೂಪದ ಗ್ರಾಪಂ ಸಭೆ
ಕೆಲವೆಡೆ ಜಲಾಶಯಗಳು ತುಂಬಿ ಹರಿಯುತ್ತಿವೆ. ನದಿ ಪಾತ್ರದ ಜನರು ಆಶ್ರಯ ಕಳೆದುಕೊಳ್ಳುತ್ತಿದ್ದಾರೆ. ಇದರ ಮಧ್ಯೆ ಬಿಟ್ಟು ಬಿಡದೇ ಸುರಿಯುವ ಮಳೆಗೆ ಸಾರ್ವಜನಿಕರು ಹೈರಾಣಾಗಿದ್ದಾರೆ. ಇಂತಹ ಸಮಯದಲ್ಲಿ ಬಸ್ಗಾಗಿ ಕಾಯುವುದು ಬಹಳ ಕಷ್ಟ.
ಬಸ್ ನಿಲ್ದಾಣ ನಿರ್ಮಿಸಿಕೊಡಲು ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ ವಹಿಸಿದೆ. ಈ ಹಿನ್ನೆಲೆ ಗ್ರಾಮಸ್ಥರೇ ಟಾರ್ಪಲ್ ಹೊದಿಕೆ ಟೆಂಟ್ ಮಾದರಿಯ ಬಸ್ ನಿಲ್ದಾಣ ನಿರ್ಮಿಸಿದ್ದಾರೆ. ಶಾಲೆ, ಕಾಲೇಜಿಗೆ ತೆರಳುವ ಮಕ್ಕಳು, ಗ್ರಾಮಸ್ಥರು, ಹಿರಿಯರಿಗೆ ಈ ಟಾರ್ಪಲ್ ಹೊದಿಕೆ ಬಸ್ ನಿಲ್ದಾಣವೇ ಸದ್ಯಕ್ಕೆ ತಂಗುದಾಣವಾಗಿದೆ.
ಕಾರು ಡಿಕ್ಕಿಯಾಗಿ ನಿಲ್ದಾಣಕ್ಕೆ ಹಾನಿ
ಹಣಗೆರೆ, ಕನ್ನಂಗಿ, ಕುಡುವಳ್ಳಿ, ಸಿಕೆ ರಸ್ತೆ ಸಂಪರ್ಕದ ರಸ್ತೆಯಲ್ಲಿ ಯಡವತ್ತಿ ಗ್ರಾಮವಿದೆ. 30 ವರ್ಷದ ಹಿಂದೆ ಇಲ್ಲಿ ಅಚ್ಚುಕಟ್ಟಾದ ಕಾಂಕ್ರಿಟ್ ತುಂಗುದಾಣ ನಿರ್ಮಿಸಲಾಗಿತ್ತು. ಯಡವತ್ತಿ, ಕರಿಮನೆ, ಹುಯಿಗೆ ಹಕ್ಕಲು ಸೇರಿದಂತೆ ಅನೇಕ ಮಜಿರೆ ಗ್ರಾಮದ ಜನರು ಈ ತಂಗುದಾಣವನ್ನು ಬಳಕೆ ಮಾಡಿಕೊಳ್ಳುತ್ತಿದ್ದರು. ಯಡವತ್ತಿ ಗ್ರಾಮದ ಬಳಿ ತಿರುವು ಇದೆ. ಈ ತಿರುವಿನಲ್ಲೇ ಬಸ್ ತಂಗುದಾಣವಿತ್ತು. ಕಾರೊಂದು ಬಸ್ ತಂಗುದಾಣಕ್ಕೆ ಡಿಕ್ಕಿ ಹೊಡೆದು, ಸಂಪೂರ್ಣ ಹಾನಿಯಾಗಿದೆ.
ಶ್ರೀರಂಗಪಟ್ಟಣ: 18 ವರ್ಷದಿಂದ ಬಾಗಿಲು ಮುಚ್ಚಿದ್ದ ಚಾಮುಂಡೇಶ್ವರಿ ದೇವಾಲಯ ಓಪನ್
ಅನುದಾನ ಕೊರತೆಯ ಸಬೂಬು
ಮುರಿದು ಬಿದ್ದ ಬಸ್ ನಿಲ್ದಾಣದ ಸಾಮಗ್ರಿಗಳನ್ನು ಕನ್ನಂಗಿ ಗ್ರಾಮ ಪಂಚಾಯಿತಿ ವತಿಯಿಂದ ಹರಾಜು ಹಾಕಲಾಯಿತು. ಹರಾಜು ಹಾಕಲು ಉತ್ಸಾಹ ತೋರಿದ ಗ್ರಾಮ ಪಂಚಾಯಿತಿ, ಹೊಸ ನಿಲ್ದಾಣ ನಿರ್ಮಾಣದ ಬಗ್ಗೆ ಗಮನ ಕೊಡಲಿಲ್ಲ. ಗ್ರಾಮಸ್ಥರು ಪದೇ ಪದೆ ಮನವಿ ಮಾಡಿದಾಗ, ಅನುದಾನ ಕೊರತೆಯ ಸಬೂಬು ಹೇಳಿ ಕೇಳುಹಿಸಲಾಯಿತು.
ಶಾಲಾಮಕ್ಕಳಿಗೆ ಮಳೆಯಿಂದ ತೊಂದರೆ
ತೀರ್ಥಹಳ್ಳಿ ತಾಲೂಕಿನಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಶಾಲೆ, ಕಾಲೇಜು ವಿದ್ಯಾರ್ಥಿಗಳು, ಬಸ್ಸಿಗಾಗಿ ಕಾಯುವ ಗ್ರಾಮಸ್ಥರು ಮಳೆಯಲ್ಲಿ ನೆನೆಯುತ್ತಲೇ ಬಸ್ಸಿಗಾಗಿ ಕಾಯಬೇಕಾಗುತ್ತಿತ್ತು. 'ಹಸಿಯಾದ ಕೊಡೆಯನ್ನು ಮಕ್ಕಳು ಬ್ಯಾಗಿನಲ್ಲಿ ಇಟ್ಟುಕೊಳ್ಳುವುದು ಕಷ್ಟ. ಬಸ್ಸಿನಲ್ಲಿ ಲಗೇಜ್ ಇಡುವ ಜಾಗದಲ್ಲಿ ಹಸಿಯಾದ ಕೊಡೆ ಇಡಲು ಬಿಡುವುದಿಲ್ಲ. ಮಕ್ಕಳು ಬಹಳ ಕಷ್ಟ ಪಡುತ್ತಿದ್ದರು. ದೊಡ್ಡವರಿಗೂ ಇದೆ ಸಮಸ್ಯೆ ಆಗುತ್ತಿತ್ತು" ಎನ್ನುತ್ತಾರೆ ಯಡವತ್ತಿಯ ರಂಗನಾಥ್.
ತಾತ್ಕಾಲಿಕ ಟಾರ್ಪಲ್ ತಂಗುತಾಣ ನಿರ್ಮಾಣ
ಕನ್ನಂಗಿ ಗ್ರಾಮ ಪಂಚಾಯಿತಿಯ ನಿರ್ಲಕ್ಷ್ಯದಿಂದ ಬೇಸತ್ತ ಗ್ರಾಮಸ್ಥರು ತಾತ್ಕಲಿಕ ತಂಗುದಾಣ ನಿರ್ಮಿಸಿದರು. ಟಾರ್ಪಲ್ ಬಳಸಿ, ಟೆಂಟ್ ಮಾದರಿಯಲ್ಲಿ ತಂಗುದಾಣ ನಿರ್ಮಿಸಿದ್ದಾರೆ. ಮಳೆ, ಬಿಸಿಲಿನಿಂದ ಈ ಟಾರ್ಪಲ್ ತಂಗುದಾಣ ರಕ್ಷಣೆ ನೀಡಲಿದೆ.
"ಯಾರನ್ನೋ ವಿರೋಧಿಸಲು, ಯಾರಿಂದಲೋ ಬೇಸತ್ತು ಟಾರ್ಪಲ್ ಕಟ್ಟಿದ್ದಲ್ಲ. ನಮ್ಮ ಮಕ್ಕಳು, ನಮ್ಮೂರಿನ ಜನ ಮುಖ್ಯ. ಹಾಗಾಗಿ ನಾವೇ ತಂಗುದಾಣ ನಿರ್ಮಿಸಿಕೊಂಡಿದ್ದೇವೆ. ಇದು ಯಾವುದೆ ರೀತಿಯ ಪ್ರತಿಭಟನೆಯಲ್ಲ" ಎಂದು ರಂಗನಾಥ್ ತಿಳಿಸಿದ್ದಾರೆ.
ಹಳ್ಳಿ ಹಳ್ಳಿಯ ಅಭಿವೃದ್ಧಿ ಮಾಡಿದ್ದೇವೆ ಎಂದು ರಾಜಕಾರಣಿಗಳು ನಿತ್ಯ ಭಾಷಣ ಮಾಡುತ್ತಾರೆ. ಆದರೆ ಅನುದಾನ ಕೊರತೆಯಿಂದ ಗ್ರಾಮೀಣ ಪ್ರದೇಶ ಮೂಲ ಸೌಕರ್ಯಗಳಿಂದಲೆ ವಂಚಿತವಾಗುತ್ತಿದೆ. ಇದಕ್ಕೆ ಯಡವತ್ತಿನ ಗ್ರಾಮದ ಬಸ್ ತಂಗುದಾಣವೆ ಉದಾಹರಣೆ.
Recommended Video