ಅಂಧತ್ವವನ್ನು ಸವಾಲಾಗಿ ಸ್ವೀಕರಿಸಿ ವಿಶ್ವಕಪ್ ಗೆಲ್ಲಿಸಿಕೊಟ್ಟ ಶೇಖರ್
ಶಿವಮೊಗ್ಗ, ಅ.11 : ಅಂಧತ್ವವೆಂಬುದು ಶೇಖರ್ ನಾಯಕ್ ಕುಟುಂಬಕ್ಕೆ ಅಂಟಿದ ಶಾಪ. ಮನೆಯಲ್ಲಿನ ಹದಿನಾಲ್ಕು ಜನರಿಗೆ ಕಣ್ಣು ಕಾಣಿಸದು. ಅಂಧತ್ವವನ್ನು ಸವಾಲಾಗಿ ಸ್ವೀಕರಿಸಿ ಸಾಧನೆ ಶಿಖರವೇರಿದವರು ಶೇಖರ್. ಕ್ರಿಕೆಟ್ ಬಗ್ಗೆ ಆಸಕ್ತಿಯೇ ಇಲ್ಲದ ಯುವಕ ದೇಶಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟ ಕಥೆಯಿದು.
ಶೇಖರ್ ನಾಯಕ್ 1986ರಲ್ಲಿ ಶಿವಮೊಗ್ಗ ಸಮೀಪದ ಹರೆಕೆರೆಯಲ್ಲಿ ಜನಿಸಿದರು. ಹುಟ್ಟುವಾಗಲೇ ಶೇಖರ್ ಅವರಿಗೆ ಕಣ್ಣು ಕಾಣಿಸುತ್ತಿರಲಿಲ್ಲ. ಶೇಖರ್ ತಾಯಿ ಸಹ ಅಂಧರಾಗಿದ್ದರು. ಆದರೆ, ಏನಾದರೂ ಸಾಧನೆ ಮಾಡು ಎಂದು ಮಗನಿಗೆ ಹೇಳಿಕೊಟ್ಟರು. ಶ್ರೀ ಶಾರದ ದೇವಿ ಅಂಧ ಮಕ್ಕಳ ಶಾಲೆಯಲ್ಲಿ ಶೇಖರ್ ವ್ಯಾಸಂಗ ಮಾಡಿದರು.

ಶೇಖರ್ ಕ್ರಿಕೆಟ್ ಪ್ರೇಮಿಯಾಗಿರಲಿಲ್ಲ. ಶಾಲೆಯಲ್ಲಿ ಇತರರು ಆಡುವುದನ್ನು ಅವರು ಕೇಳಿಸಿಕೊಳ್ಳುತ್ತಿದ್ದರು. 1997ರಲ್ಲಿ ಮೊದಲ ಬಾರಿಗೆ ಕ್ರಿಕೆಟ್ ಆಡಲು ಆರಂಭಿಸಿದರು. 2000ನೇ ಇಸವಿಯಲ್ಲಿ ಶಾಲಾ ಕ್ರೀಡಾಕೂಟದಲ್ಲಿ ಆಡಿದ ಶೇಖರ್ 46 ಎಸೆತದಲ್ಲಿ 136 ರನ್ ಗಳಿಸಿದರು.
ಈ ಮ್ಯಾಚ್ನಲ್ಲಿನ ಶೇಖರ್ ಪ್ರದರ್ಶನ ಅವರನ್ನು ಕರ್ನಾಟಕ ಅಂಧರ ತಂಡಕ್ಕೆ ಆಯ್ಕೆಯಾಗುವಂತೆ ಮಾಡಿತು. ಕೇರಳ ವಿರುದ್ಧದ ಏಕದಿನ ಪಂದ್ಯದಲ್ಲಿ ಶೇಖರ್ 249 ರನ್ ಬಾರಿಸಿದರು. ಏಕದಿನ ಪಂದ್ಯದಲ್ಲಿ ಶೇಖರ್ ನೀಡಿದ ಪ್ರದರ್ಶನ ಕಂಡು ಭಾರತ ಅಂಧರ ತಂಡಕ್ಕೆ ಆಯ್ಕೆ ಮಾಡಲಾಯಿತು.
2004ರಲ್ಲಿ ಭಾರತೀಯ ಅಂಧರ ತಂಡ ಪಾಕಿಸ್ತಾನ ಪ್ರವಾಸ ಕೈಗೊಂಡಿತು. ಕರ್ನಾಟಕ ಮೂಲದ ಶೇಖರ್ ರಾವಲ್ಪಿಂಡಿಯಲ್ಲಿ ನಡೆದ ಪಂದ್ಯದಲ್ಲಿ 198 ರನ್ ಸಿಡಿಸಿದರು. ಕೇವಲ ಎರಡು ವರ್ಷಗಳಲ್ಲಿ ಶೇಖರ್ 7 ಪಂದ್ಯ ಶ್ರೇಷ್ಠ ಪ್ರಶಸ್ತಿಗಳನ್ನು ಪಡೆದರು.
2006ರಲ್ಲಿ ಭಾರತ ಪಾಕಿಸ್ತಾನ ವಿರುದ್ಧ ವಿಶ್ವಕಪ್ ಪಂದ್ಯದಲ್ಲಿ ಸೋಲು ಅನುಭವಿಸಿತು. ಆದರೆ, ಶೇಖರ್ ಮ್ಯಾನ್ ಆಫ್ ದಿ ಟೂರ್ನಿಮೆಂಟ್ ಮತ್ತು ಉತ್ತಮ ಬ್ಯಾಟ್ಸ್ಮನ್ ಪ್ರಶಸ್ತಿ ಮುಡಿಗೇಡಿಸಿಕೊಂಡರು. 2010ರಲ್ಲಿ ಭಾರತ ಅಂಧರ ತಂಡಕ್ಕೆ ಶೇಖರ್ ನಾಯಕರಾದರು.
2012ರಲ್ಲಿ ಶೇಖರ್ ನೇತೃತ್ವದ ತಂಡ ಇಂಗ್ಲೆಂಡ್ ತಂಡವನ್ನು ಮಣಿಸಿ ಮೊದಲ ಟಿ-20 ವಿಶ್ವಕಪ್ ಗೆದ್ದಿತು. ಫೈನಲ್ ಪಂದ್ಯದಲ್ಲಿ ಶೇಷ್ಠ ಪ್ರದರ್ಶನ ನೀಡಿದ ಶೇಖರ್ ಕೇವಲ 58 ಎಸೆತದಲ್ಲಿ 134 ರನ್ ಸಿಡಿಸಿದರು. ಶೇಖರ್ ಸಾಧನೆಗಾಗಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಬಿಸಿಸಿಐ ಗುರುತಿಸಬೇಕು : ಅಂಧ ಕ್ರಿಕೆಟ್ ತಂಡದ ಸಾಧನೆಯನ್ನು ಬಿಸಿಸಿಐ ಗುರುತಿಸಬೇಕು ಎಂಬುದು ಶೇಖರ್ ಅವರ ಒತ್ತಾಯವಾಗಿದೆ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಪಾಕಿಸ್ತಾನ ಸೇರಿದಂತೆ ಚಿಕ್ಕ-ಪುಟ್ಟ ರಾಷ್ಟ್ರಗಳ ಕ್ರಿಕೆಟ್ ಮಂಡಳಿಗಳು ಅಂಧರ ತಂಡವನ್ನು ಗುರುತಿಸಿವೆ. ಆದರೆ, ವಿಶ್ವದಲ್ಲಿಯೇ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾದ ಬಿಸಿಸಿಐ ಇನ್ನು ಅಂಧರ ತಂಡವನ್ನು ಗುರುತಿಸುವ ಕಾರ್ಯ ಮಾಡಿಲ್ಲ.












Click it and Unblock the Notifications