ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮಕ್ಕೆ ಅತಿಥಿಗಳ ಆಗಮನ
ಶಿವಮೊಗ್ಗ, ನವೆಂಬರ್ 11 : ಶಿವಮೊಗ್ಗ ಹತ್ತಿರದ ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮಕ್ಕೆ ನೂತನ ಅತಿಥಿಗಳ ಆಗಮನವಾಗಿದೆ. ಪ್ರಾಣಿಪ್ರಿಯರಲ್ಲಿ ಕಾತುರ ಹೆಚ್ಚಿಸಿದ್ದ ಸಿಂಹಗಳು ಕೊನೆಗೂ ಎಂಟ್ರಿ ಕೊಟ್ಟಿವೆ.
ಕೇಂದ್ರ ಪ್ರಾಣಿ ಸಂಗ್ರಹಾಲಯ ಪ್ರಾಧಿಕಾರದ ಒಪ್ಪಿಗೆ ಮೇರೆಗೆ ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನದಿಂದ ಎರಡು ಸಿಂಹಗಳನ್ನು ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮ ತರಲಾಗಿದೆ. ಈ ಸಿಂಹಗಳ ಪ್ರವೇಶದಿಂದ ತ್ಯಾವರೆಕೊಪ್ಪ ಹುಲಿ, ಸಿಂಹಧಾಮದಲ್ಲಿ ಸಿಂಹಗಳ ಸಂಖ್ಯೆ 4ಕ್ಕೆ ಏರಿದೆ.

ಕುಸಿದಿದ್ದ ಸಿಂಹಗಳ ಸಂಖ್ಯೆ ಹೆಚ್ಚಳ: ಹುಲಿ ಮತ್ತು ಸಿಂಹಧಾಮದಲ್ಲಿ ಸಿಂಹಗಳ ಸಂಖ್ಯೆ ಭಾರೀ ಕುಸಿತ ಕಂಡಿತ್ತು. 90ರ ದಶಕದಲ್ಲಿ ಇಲ್ಲಿ ಐದು ಸಿಂಹಗಳಿದ್ದವು. ಈ ಸಂಖ್ಯೆಯಲ್ಲಿ ಭಾರೀ ಕುಸಿತ ಕಂಡಿತ್ತು.
ನಂತರ ಆಫ್ರೋ - ಏಷ್ಯಾ ತಳಿಯ ಮೂರು ಸಿಂಹಳು ಇಲ್ಲಿದ್ದವು. ಇತ್ತೀಚೆಗಷ್ಟೇ ಹೆಣ್ಣು ಸಿಂಹವೊಂದು ಸಾವನ್ನಪ್ಪಿತ್ತು. ಆರ್ಯ ಮತ್ತು ಮಾನ್ಯ ಎಂಬ ಸಿಂಹಗಳಷ್ಟೇ ಉಳಿದಿದ್ದವು. ಈಗ ಬನ್ನೇರುಘಟ್ಟದಿಂದ ಎರಡು ಸಿಂಹಗಳ ಆಗಮನವಾಗಿದ್ದು, ಸಿಂಹಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ.
ಹುಲಿ, ಸಿಂಹಕ್ಕೆ ಪ್ರತ್ಯೇಕ ಸ್ಥಳ: ಶಿವಮೊಗ್ಗ ನಗರದಿಂದ 10 ಕಿ.ಮೀ ದೂರದಲ್ಲಿದೆ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮ. 600 ಹೆಕ್ಟೇರ್ ವಿಸ್ತಾರದ ಪ್ರದೇಶದಲ್ಲಿ ಹುಲಿಗಳಿಗೆ ಹಾಗೂ ಸಿಂಹಗಳಿಗೇ ಪ್ರತ್ಯೇಕ ಸ್ಥಳವಿದೆ.
ಇವೆರಡೂ ವ್ಯಾಘ್ರಗಳಿಗೂ ತಲಾ 35 ಹೆಕ್ಟೇರ್ ಪ್ರದೇಶವನ್ನು ಪ್ರತ್ಯೇಕವಾಗಿ ಮೀಸಲಿಡಲಾಗಿದೆ. ಹುಲಿ ಮತ್ತು ಸಿಂಹಧಾಮದಲ್ಲಿ ಸದ್ಯ ಐದು ಗಂಡು, ಎರಡು ಹೆಣ್ಣು ಸೇರಿ ಒಟ್ಟು ಏಳು ಹುಲಿಗಳಿವೆ. 23 ಚಿರತೆಗಳು ಸೇರಿ 185 ಪ್ರಾಣಿಗಳು, 115 ಪಕ್ಷಿಗಳಿವೆ.












Click it and Unblock the Notifications