ಶಿವಮೊಗ್ಗ ಮೃಗಾಲಯಕ್ಕೆ ಬನ್ನೇರುಘಟ್ಟದಿಂದ ನೂತನ ಅತಿಥಿಗಳ ಆಗಮನ
ಶಿವಮೊಗ್ಗ, ಜುಲೈ 16: ನೈಸರ್ಗಿಕ ಕಾಡು ಹೊಂದಿರುವ ಶಿವಮೊಗ್ಗದ ತ್ಯಾವರೇಕೊಪ್ಪ ಮೃಗಾಲಯಕ್ಕೆ ನೂತನ ಅತಿಥಿಗಳ ಆಗಮನವಾಗಿದೆ. ಬನ್ನೇರುಘಟ್ಟ ಅಭಯಾರಣ್ಯದಿಂದ ಎರಡು ಸಿಂಹಗಳನ್ನು ಸಫಾರಿಗೆ ತರಲಾಗಿದೆ. ಇದರಿಂದ ಸಫಾರಿಯಲ್ಲಿ ಸಿಂಹಗಳ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ.
ಏಳು ವರ್ಷದ ಸುಚಿತ್ರಾ ಮತ್ತು ಯಶ್ವಂತ್ ಎಂಬ ಹೆಸರಿನ ಎರಡು ಸಿಂಹಗಳನ್ನು ಶಿವಮೊಗ್ಗ ಮೃಗಾಲಯಕ್ಕೆ ತರಲಾಗಿದ್ದು, ದೀರ್ಘಕಾಲದ ಒಡನಾಟ ಹೊಂದಿರುವುದರಿಂದ ಇವರೆಡು ಸಿಂಹಗಳನ್ನು ಒಂದೆ ಕ್ರಾಲ್ನಲ್ಲಿ ಇಡಲಾಗಿದೆ. ಕೆಲ ದಿನಗಳ ಬಳಿಕ ಇವುಗಳು ಸಫಾರಿಯಲ್ಲಿ ತಿರುಗಾಡಲು ಬಿಡಲಾಗುತ್ತದೆ.
ಚೇತರಿಕೆಯತ್ತ ಶಿವಮೊಗ್ಗ ಪ್ರವಾಸೋದ್ಯಮ; ಮೊದಲ ದಿನ ಭೇಟಿ ಕೊಟ್ಟವರೆಷ್ಟು?
ಸಂತಾನಾಭಿವೃದ್ಧಿಗೆ ಪೂರಕ
"1998ರಲ್ಲಿ ಸಿಂಹಧಾಮದ ಆರಂಭದಲ್ಲಿ ಮೈಸೂರು ಮೃಗಾಲಯದಿಂದ ನಾಲ್ಕು ಸಿಂಹಗಳನ್ನು ತರಲಾಗಿತ್ತು. 2016ರಲ್ಲಿ ಮಾನಿನಿ ಎಂಬ ಸಿಂಹ ಕಿಡ್ನಿ ವೈಫಲ್ಯದಿಂದ ಮೃತಪಟ್ಟಿತು. ಪ್ರಸ್ತುತ ಆರ್ಯ(12), ಮಾನ್ಯ (5), ಸುಷ್ಮಿತಾ ಮತ್ತು ಸರ್ವೇಶ್ (8) ಸಿಂಹಗಳು ಇದ್ದಾವೆ. ಈಗ ಸುಚಿತ್ರಾ ಮತ್ತು ಯಶ್ವಂತ್ ಸಿಂಹಗಳು ಬಂದಿರುವುದರಿಂದ ಸಂತಾನಾಭಿವೃದ್ಧಿಗೆ ಪೂರಕವಾಗಲಿದೆ,'' ಎಂದು ಮೃಗಾಲಯ ಅಧಿಕಾರಿಗಳು ಹೇಳುತ್ತಾರೆ.
ಗುಜರಾತ್ನಿಂದ ಸಿಂಹ ತರಲು ಪ್ರಯತ್ನ
ಗುಜರಾತಿನ ಗಿರ್ ಅರಣ್ಯದಿಂದ ಎರಡು ಸಿಂಹಗಳನ್ನು ತ್ಯಾವರೇಕೊಪ್ಪ ಸಿಂಹಧಾಮಕ್ಕೆ ತರಲು ಪ್ರಯತ್ನಿಸಲಾಯಿತು. ಅಧಿಕಾರಿಗಳು ಗಿರ್ ಅರಣ್ಯಕ್ಕೆ ತೆರಳಿ ಚರ್ಚೆ ಮಾಡಿದ್ದರು. ಪತ್ರ ವ್ಯವಹಾರವನ್ನು ನಡೆಸಲಾಗಿತ್ತು. ಆದರೆ ಗಿರ್ ಅರಣ್ಯದ ಅಧಿಕಾರಿಗಳು ವಿಶೇಷ ತಳಿಯ ಸಿಂಹಗಳು ಎಕ್ಸ್ಚೇಂಜ್ಗೆ ಬೇಕು ಎಂದು ಕೇಳಿದರು. ಆದರೆ ವಿಶೇಷ ತಳಿಗಳು ಇಲ್ಲದಿರುವುದರಿಂದ ಈ ಪ್ರಯತ್ನ ಸಾಧ್ಯವಾಗಿರಲಿಲ್ಲ.
ಈಗ ಬನ್ನೇರುಘಟ್ಟ ಅಭಯಾರಣ್ಯದಿಂದ ನೂತನ ಸಿಂಹಗಳು ಬಂದಿರುವುದರಿಂದ ಸಫಾರಿಗೆ ತೆರಳುವ ಪ್ರವಾಸಿಗರಿಗೆ ಮತ್ತಷ್ಟು ಖುಷಿ ಸಿಗಲಿದೆ. ಸಿಂಹಗಳನ್ನು ಇನ್ನಷ್ಟು ಹತ್ತಿರದಿಂದ ನೋಡುವ ಅವಕಾಶವು ಲಭ್ಯವಾಗಲಿದೆ.