ಇತಿಹಾಸ ಪ್ರಿಯರ ಗಮನಕ್ಕೆ: ತೀರ್ಥಹಳ್ಳಿಯಲ್ಲಿದೆ 2 ಬೃಹತ್ ಶಿಲಾಗೋರಿ
ನಿಲಿಸುಗಲ್ಲುಗಳ ತಾಣ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಪತ್ತೆಯಾಗಿವೆ. ಸುಮಾರು 2500 ವರ್ಷಗಳ ಹಿಂದಿನ ಆದಿ ಮಾನವರ ಬೃಹತ್ ಶಿಲಾಗೋರಿಗಳು ಇದಾಗಿದ್ದು ಸಂಶೋಧನಾಸಕ್ತ ಇತಿಹಾಸ ಪ್ರಿಯರಿಗೆ ಸಂಚಲನ ಮೂಡಿಸಿದೆ.
ತೀರ್ಥಹಳ್ಳಿ ತಾಲ್ಲೂಕಿನ ನೊಣಬೂರು ಹಾಗೂ ಮಲ್ಲೇಸರ ಗ್ರಾಮ ಪಂಚಾಯ್ತಿಯ ವ್ಯಾಪ್ತಿಯಲ್ಲಿ ಈ ಶಿಲಾಗೋರಿಗಳು ಪತ್ತೆಯಾಗಿದ್ದು, ನೊಣಬೂರಿನಲ್ಲಿ ರಸ್ತೆಯ ಬದಿಯಲ್ಲೇ ಒಂದು ಶಿಲಾ ಗೋರಿ ಇದೆ. ಮಲ್ಲೇಸರ ಗ್ರಾಮದ ಬೊಂಬಳಿಗೆಯಲ್ಲಿ ಶಿಲಾಗೋರಿಗಳ ಸಮುಚ್ಛಯ ಪತ್ತೆಯಾಗಿದೆ.
ಇತ್ತೀಚೆಗೆ ತಾಲ್ಲೂಕಿನ ಅರಳಸುರಳಿ ಸಮೀಪದ ತಟ್ಟಿಕೇವಿಯಲ್ಲಿ ಪತ್ತೆಯಾಗಿದ್ದ ಶಿಲಾಗೋರಿಗಳ ಬೆನ್ನಲ್ಲೇ ಈ ಪ್ರದೇಶಗಳ ವ್ಯಾಪ್ತಿಯ ಸಮೀಪದಲ್ಲಿ ಅಪೂರ್ವ ಗೋರಿಗಳು ಪತ್ತೆಯಾಗಿದ್ದು ಈಗ ಬೆಳಕಿಗೆ ಬಂದಿರುವ ಪ್ರದೇಶ ಶರಾವತಿ ನದಿಯ ಉಗಮಸ್ಥಾನವಾದ ಅಂಬುತೀರ್ಥಕ್ಕೆ 5 ಕಿ.ಮಿ. ವ್ಯಾಪ್ತಿಯೊಳಗೆ ತಾಲ್ಲೂಕಿನ ಶರಾವತಿ ನದಿಯ ಪ್ರದೇಶ ಆದಿಮಾನವರ ತಾಣವಾಗಿತ್ತು ಎನ್ನುವ ವಾದಕ್ಕೆ ಇಂಬುಕೊಟ್ಟಂತಾಗಿದೆ.
ಭೂತದ ಕಲ್ಲು: ನೊಣಬೂರಿನಲ್ಲಿ ಮುಖ್ಯ ರಸ್ತೆಯ ಬದಿಯಲ್ಲೆ ಇರುವ ಶಿಲಾಗೋರಿಯನ್ನು ಭೂತದ ಕಲ್ಲು ಎಂದು ಗ್ರಾಮಸ್ಥರು ಪೂಜೆ ಮಾಡಿಕೊಂಡು ರಕ್ಷಿಸಿದ್ದಾರೆ. ವರ್ಷಕ್ಕೊಮ್ಮೆ ಇಲ್ಲಿ ವಿಶೇಷ ಪೂಜೆ ನೆಡೆಯುತ್ತದೆ. ಆದರೂ ಗ್ರಾಮಸ್ಥರಿಗೆ ಇದು ಶಿಲಾಗೋರಿಗಳಾಗಿ ಕಂಡು ಬಂದಿರಲಿಲ್ಲ.
ತುಂಬರದಳ್ಳಿಯ ಭೂತರಾಯ: ಮಲ್ಲೇಸರ ಸಮೀಪದ ಒಂದೆರಡು ಕಿ.ಮೀ. ದೂರದಲ್ಲಿ ಅಕೇಶಿಯಾ ನೆಡುತೋಪಿನಲ್ಲಿ ಒಂದು ಇಕರೆ ಪ್ರದೇಶದಲ್ಲಿ ಹರಡಿ ಬೃಹದಾಕಾರವಾಗಿ ನಿಂತಿರುವ ನಿಲಿಸುಕಲ್ಲಿನ ಸಮುಚ್ಛಯವೇ ಇದ್ದು, ಇಲ್ಲಿ ಕೂಡ ಗ್ರಾಮಸ್ಥರು ಭೂತದ ಕಲ್ಲು ಎಂದೇ ಪೂಜಿಸಿಕೊಂಡು ರಕ್ಷಿಸಿದ್ದಾರೆ. ರಣದ ಬನ, ಭೂತರಾಯ ಬನ ಎಂದು ಹೆಸರಿಟ್ಟು ಗುರುತಿಸಿಕೊಂಡಿದ್ದಾರೆ.
ಸುಮಾರು 15 ಅಡಿ ಇತ್ತರ, 5 ಅಡಿ ಅಗಲದ ದೊಡ್ಡ ಗೋರಿಯ ಅಕ್ಕಪಕ್ಕದಲ್ಲಿ ಮತ್ತಷ್ಟು ನಿಲಿಸುಕಲ್ಲುಗಳಿವೆ. ಚೌಡಿ ಕಲ್ಲು (6 ಅಡಿ ಎತ್ತರ 4 ಅಡಿ ಅಗಲ) ನಾಗರ ಕಲ್ಲು ಹಾಗೇ ಅಕ್ಕಪಕ್ಕದಲ್ಲಿ ಸುಮಾರು 8 ಕ್ಕೂ ಹೆಚ್ಚು ನಿಲಿಸುಕಲ್ಲುಗಳ ಕುರುಹು ಇದೆ. ಕೆಲವು ಕಲ್ಲುಗಳು ನೆಲಕ್ಕೊರಗಿದ್ದು, ಗ್ರಾಮಸ್ಥರು ತುಂಬರದಳ್ಳಿ ಭೂತರಾಯ ಎಂದು ಭಕ್ತಿಯಿಂದ ಪೂಜಿಸುತ್ತಾರೆ.
ತಾಲ್ಲೂಕಿನ ತಟ್ಟಿಕೇವಿಯಲ್ಲಿ ಬೃಹತ್ ಶಿಲಾಗೋರಿಗಳನ್ನು ಇತ್ತೀಚೆಗೆ ಬೆಳಕಿಗೆ ತಂದಿದ್ದ ಸಂಶೋಧಕ ಎಲ್ ಎಸ್ ರಾಘವೇಂದ್ರ ಅವರ ಶ್ರಮ ಹಾಗೂ ಬೊಂಬಳಿಗೆಯ ಈ ಸಂಶೋಧನೆಯಲ್ಲಿ ಜೊತೆಗಿದ್ದ ಪತ್ರಕರ್ತ ಜಿ.ಆರ್. ಸತ್ಯನಾರಾಯಣ ತಮಗೆ ಸಿಕ್ಕ ಮಾಹಿತಿಯ ಜಾಡು ಹಿಡಿದು ಪತ್ತೇ ಹಚ್ಚಿದ ಈ ಶಿಲಾಗೋರಿಗಳು ತೀರ್ಥಹಳ್ಳಿ ತಾಲ್ಲೂಕಿನ ಶರಾವತಿ ನದಿಯ ಸುತ್ತಮುತ್ತಲಿನ ಪ್ರದೇಶದ ಇತಿಹಾಸ ಪೂರ್ವ ದಾಖಲೆಗಳನ್ನು ಬಿಚ್ಚಿಡುವಲ್ಲಿ ಹೆಚ್ಚಿನ ಸಂಶೋಧನೆಗೆ ನೆರವಾಗಲಿದೆ.