ಚಿತ್ರಗಳಲ್ಲಿ : ತೀರ್ಥಹಳ್ಳಿಯಲ್ಲಿ ವಿಶ್ವದರ್ಜೆಯ ಚತುಷ್ಪಥ ರಸ್ತೆ
ತೀರ್ಥಹಳ್ಳಿ, ಅಕ್ಟೋಬರ್ 30: ತೀರ್ಥಹಳ್ಳಿ ಪಟ್ಟಣದಲ್ಲಿ ಅಂತಾರಾಷ್ಟ್ರೀಯ ದರ್ಜೆಯ ಚತುಷ್ಪಥ ಕಾಂಕ್ರೀಟ್ ರಸ್ತೆ ಉದ್ಘಾಟನೆಗೊಂಡಿದೆ.
ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಶಾಸಕ ಕಿಮ್ಮನೆ ರತ್ನಾಕರ್, ಗುತ್ತಿಗೆದಾರ ಹಾಜಿ ಇಬ್ರಾಹಿಂ ಷರೀಫ್ ಹಾಗೂ ಸೋದರು, ಕಾರ್ಯಪಾಲಕ ಅಭಿಯಂತರ ರಾಜೇಶ್, ಇಲಾಖೆ ಸೂಪರಿಂಟೆಂಡ್ ಇಂಜಿನಿಯರ್ ಬಾಲಕೃಷ್ಣ ಅವರ ಉಪಸ್ಥಿತಿಯಲ್ಲಿ ಸೋಮವಾರ ಉದ್ಘಾಟನೆಗೊಂಡ ತೀರ್ಥಹಳ್ಳಿ ಪಟ್ಟಣದ ಆಜಾದ್ ರಸ್ತೆ ಚಿತ್ರಗಳು ಇಲ್ಲಿವೆ. ಚಿತ್ರಗಳ ಕೃಪೆ: ಶಿವಮೊಗ್ಗ ವಾರ್ತಾ ಇಲಾಖೆ.
ಲೋಕೋಪಯೋಗಿ ಇಲಾಖೆ 10ಕೋಟಿ ರು ವೆಚ್ಚದಲ್ಲಿ ನಿರ್ಮಿಸಿರುವ ಈ ರಸ್ತೆ ಸದ್ಯ ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆಯಾಗುತ್ತಿದೆ. ಇಲಾಖೆ ಎಲ್ಲಾ ರಸ್ತೆಗಳಿಗೂ ಕರೆಯುವಂತೆ ಟೆಂಡರ್ ಕರೆದಿತ್ತು. ಆದರೆ, ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣ ಭರವಸೆ ಸಿಗಲಿಲ್ಲ..
ಮಳೆ ನೀರಿನಿಂದ ರಕ್ಷಣೆ, ರಸ್ತೆ ಸೌಂದರ್ಯ ವರ್ಧನೆ ಮುಂತಾದ ಸವಾಲುಗಳನ್ನು ಎದುರಿಸಿದ ಲೋಕೋಪಯೋಗಿ ಇಲಾಖೆ ಈಗ ಉತ್ತಮ ಕಾರ್ಯ ಪೂರೈಸಿದ ಸಂತಸದಲ್ಲಿದೆ ಎಂದು ಲೋಕೋಪಯೋಗಿ ಇಲಾಖೆ ಸೂಪರಿಂಟೆಂಡ್ ಇಂಜಿನಿಯರ್ ಬಾಲಕೃಷ್ಣ ಅವರು ಹೇಳಿದ್ದಾರೆ. ರಸ್ತೆಗುಂಡಿಗಳ ಹಾವಳಿಗೆ ಸಿಲುಕಿರುವ ಬೆಂಗಳೂರಿಗೆ ಮಾದರಿಯಾಗಬಲ್ಲ ಇಲ್ಲಿನ ರಸ್ತೆಗಳ ಬಗ್ಗೆ ಇನ್ನಷ್ಟು ಮಾಹಿತಿ ಹಾಗೂ ಚಿತ್ರಗಳು ಮುಂದಿವೆ...

ರಸ್ತೆ ಗುಣಮಟ್ಟ ಕಾಯ್ದುಕೊಳ್ಳುವುದು ಮುಖ್ಯ
ರಸ್ತೆ ಗುಣಮಟ್ಟ ಕಾಯ್ದುಕೊಳ್ಳುವುದು ಮುಖ್ಯ, ಹೀಗಾಗಿ ಈ ರಸ್ತೆ ನಿರ್ಮಾಣ ಕಾರ್ಯವನ್ನು ಲೋಕೋಪಯೋಗಿ ಇಲಾಖೆಯೇ ವಹಿಸಿಕೊಂಡಿತು. 16 ಮೀಟರ್ ಉದ್ದ, 1.2 ಮೀಟರ್ ವಿಭಜಕ ಹಾಗೂ 2.5 ಮೀಟರ್ ಫುಟ್ ಪಾತ್ ಎರಡು ಬದಿಯಲ್ಲಿ ಇರಿಸಲಾಗಿದೆ.

ರಸ್ತೆ ಬದಿಯಲ್ಲಿ ಮಳೆ ನೀರು ಹೋಗಲು ವ್ಯವಸ್ಥೆ
ರಸ್ತೆ ಬದಿಯಲ್ಲಿ ಮಳೆ ನೀರು ಹೋಗಲು ಒಳಚರಂಡಿ ವ್ಯವಸ್ಥೆ, ಸುರಕ್ಷಿತ ನಿಯಮಗಳ ಪಾಲನೆ, ಮಾಹಿತಿ ಫಲಕಗಳು, ನಗರಕ್ಕೆ ಬೇಕಾದ ರೀತಿ ವಿದ್ಯುತ್ ದೀಪಗಳು, ಹೂ ಕುಂಡಗಳು, ಬಸ್ ನಿಲ್ದಾಣಗಳು, ಆಟೋ/ಕಾರಿನ ಪಾರ್ಕಿಂಗ್ ವ್ಯವಸ್ಥೆ ಎಲ್ಲವೂ ಇದರಲ್ಲಿ ಒಳಗೊಂಡಿದೆ.

ಬೆಂಗಳೂರಿಗೆ ಮಾದರಿಯಾಗಬಲ್ಲ ವ್ಯವಸ್ಥೆ
ಬೆಂಗಳೂರಿಗೆ ಹೋಲಿಸಿದರೆ ತೀರ್ಥಹಳ್ಳಿಯಲ್ಲಿ ಮಳೆ ಅಧಿಕ. ಮಳೆ ನೀರು ನಿಂತು ರಸ್ತೆಯಲ್ಲಿ ಹೊಂಡ ಬೀಳುವುದು ಸಾಮಾನ್ಯವಾಗಿತ್ತು. ಆದರೆ, ಈಗ ಕಾಂಕ್ರೀಟ್ ರಸ್ತೆ ಹಾಗೂ ಉತ್ತಮ ಒಳಚರಂಡಿ ವ್ಯವಸ್ಥೆ ಮೂಲಕ ಮಳೆಗಾಲಕ್ಕೂ ಈ ರಸ್ತೆ ಸೈ ಎನಿಸಿಕೊಂಡಿದೆ. ಇಲ್ಲಿನ ವ್ಯವಸ್ಥೆಯನ್ನು ಬಿಬಿಎಂಪಿ ಅಧ್ಯಯನ ಮಾಡಬಹುದು.

ದಿನದ 24 ಗಂಟೆ ಮಳೆಯಾದರೂ ಅಡ್ಡಿಯಿಲ್ಲ
ಸತತ ಮೂರು ದಿನ ಇಂಚುಗಳ ಲೆಕ್ಕದಲ್ಲಿ ದಿನದ 24 ಗಂಟೆ ಮಳೆಯಾದರೂ ಅಡ್ಡಿಯಿಲ್ಲ. ರಸ್ತೆಯಲ್ಲಿ ನೀರು ನಿಲ್ಲುವುದಿಲ್ಲ. ಇದಕ್ಕೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಸದ್ಯಕ್ಕೆ ಒಂದೆರಡು ಕಡೆ ಎಲೆಕ್ಟ್ರಿಕ್ ಕಂಬಗಳಿದ್ದು, ಅವುಗಳನ್ನು ಸ್ಥಳಾಂತರಿಸುವ ಅಥವಾ ಬದಲಿ ವ್ಯವಸ್ಥೆ ಕಲ್ಪಿಸುವ ಬಗ್ಗೆ ಚರ್ಚೆ ನಡೆದಿದೆ.

ರಸ್ತೆಯಲ್ಲಿ ಜಾಹೀರಾತು ಫಲಕವಿರಲ್ಲ
ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ನಗರ ಸೌಂದರ್ಯವನ್ನು ಹಾಳುಗೆಡವುತ್ತಿರುವ ಜಾಹೀರಾತು ಫಲಕಗಳಿಗೆ ಇಲ್ಲಿ ಕಡಿವಾಣ ಹಾಕಲಾಗಿದೆ. ಸಾಧ್ಯವಾದ ಸ್ಥಳಗಳಲ್ಲಿ ಹುಲ್ಲುಹಾಸು ಹಾಕಲಾಗಿದೆ. ರಸ್ತೆ ನೋಡಿಕೊಳ್ಳುವ ಜವಾಬ್ದಾರಿ ಇನ್ಮುಂದೆ ಮುನ್ಸಿಪಾಲಿಟಿ ಮೇಲಿದೆ ಎಂದು ಲೋಕೋಪಯೋಗಿ ಇಲಾಖೆ ಸೂಪರಿಂಟೆಂಡ್ ಇಂಜಿನಿಯರ್ ಬಾಲಕೃಷ್ಣ ಹೇಳಿದರು.












Click it and Unblock the Notifications