Shimoga airport; ಸಿವಿಲ್ ಏವಿಯೇಷನ್ ಕಾರ್ಯದರ್ಶಿಗಳ ಭೇಟಿ
ಶಿವಮೊಗ್ಗ, ಜನವರಿ 29; ಫೆಬ್ರವರಿ ತಿಂಗಳಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗದ ವಿಮಾನ ನಿಲ್ದಾಣ ಉದ್ಘಾಟನೆ ಮಾಡಲಿದ್ದಾರೆ. ಸಿವಿಲ್ ಏವಿಯೇಷನ್ ಕಾರ್ಯದರ್ಶಿಗಳ ನೇತೃತ್ವದ ತಂಡ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಶಿವಮೊಗ್ಗ ನಗರದ ಹೊರವಲಯದ ಸೋಗಾನೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿದೆ. ನಿಲ್ದಾಣದ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದ್ದು, ಫೆಬ್ರವರಿ 27ರಂದು ಪ್ರಧಾನಿ ವಿಮಾನ ನಿಲ್ದಾಣ ಉದ್ಘಾಟಿಸುವ ನಿರೀಕ್ಷೆ ಇದೆ.
ಕೇಂದ್ರ ನಾಗರೀಕ ವಿಮಾನಯಾನ ಮಂತ್ರಾಲಯದ ಕಾರ್ಯದರ್ಶಿ ರಾಜೀವ್ ಬನ್ಸಾಲ್ ನೇತೃತ್ವದ ತಂಡ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ವಿಮಾನ ನಿಲ್ದಾಣದ ಕಾಮಗಾರಿಗಳು, ನಿಲ್ದಾಣದ ಅಂತಿಮ ಸಿದ್ದತೆಗಳ ಕುರಿತು ಪರಿಶೀಲನೆ ನಡೆಸಿದರು. ಶಿವಮೊಗ್ಗ ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ಮುಂತಾದವರು ಉಪಸ್ಥಿತರಿದ್ದರು.
ವಿಮಾನ ಹಾರಾಟಕ್ಕೆ ಪೂರಕವಾದ ತಾಂತ್ರಿಕ ಕೆಲಸಗಳು ಜನವರಿ 30ರಿಂದ ನಡೆಯಲಿವೆ. ಬಳಿಕ ಒಂದು ದಿನ ರನ್ವೇಯಲ್ಲಿ ವಿಮಾನ ಟೇಕ್ ಆಫ್ ಮಾಡಿ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತದೆ. ಫೆಬ್ರವರಿಯಲ್ಲಿ ವಿಮಾನ ನಿಲ್ದಾಣ ಉದ್ಘಾಟನೆಗೆ ಪೂರಕವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುತ್ತಿದೆ.

ಜನವರಿ ಪ್ರವೇಶ ನಿರ್ಬಂಧ
ಶಿವಮೊಗ್ಗ ನಗರದ ಹೊರ ವಲಯದ ಸೋಗಾನೆಯಲ್ಲಿ ನಿರ್ಮಾಣಗೊಂಡಿರುವ ವಿಮಾನ ನಿಲ್ದಾಣಕ್ಕೆ ಸುರಕ್ಷತಾ ಹಿನ್ನೆಲೆಯಲ್ಲಿ ಅನುಮತಿ ಇಲ್ಲದೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಆರ್. ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ. ವಿಮಾನ ನಿಲ್ದಾಣದ ಕಾಮಗಾರಿಗಳು ಅಂತಿಮ ಹಂತದಲ್ಲಿದೆ. ಇದಲ್ಲದೇ ವಿಮಾನ ನಿಲ್ದಾಣದಲ್ಲಿರುವ ಸೂಕ್ಷ್ಮ ಉಪಕರಣಗಳ ಸುರಕ್ಷತೆಯ ಹಿನ್ನೆಲೆಯಲ್ಲಿ ಮತ್ತು ಕಾಮಗಾರಿಗಳಿಗೆ ತೊಡಕಾಗದಂತೆ, ಸಾರ್ವಜನಿಕರ ಪ್ರವೇಶವನ್ನು ಉದ್ಘಾಟನೆ ಆಗುವವರೆಗೆ ನಿರ್ಬಂಧಿಸಲಾಗಿದೆ.

ಸುಮಾರು 500 ಕೋಟಿ ರೂ. ವೆಚ್ಚ
ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಬೇಕು ಎಂಬುದು ಮಲೆನಾಡಿನ ಜನರ ಕನಸು. ಸುಮಾರು 500 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ವಿಮಾನ ನಿಲ್ದಾಣದ ರನ್ ವೇ 3.50 ಕಿ. ಮೀ. ಇದೆ. ಏರ್ ಬಸ್ (ಎ320) ವಿಮಾನಗಳು ಇಳಿಯುವಂತೆ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಂತರ ಅತ್ಯಂತ ಉದ್ದದ ರನ್ ವೇ ಹೊಂದಿರುವ ವಿಮಾನ ನಿಲ್ದಾಣ ಎಂಬ ಖ್ಯಾತಿ ಶಿವಮೊಗ್ಗ ವಿಮಾನ ನಿಲ್ದಾಣದ್ದಾಗಿದೆ.

ವಿವಿಧ ಕಾಮಗಾರಿ ಅಂತಿಮ ಹಂತದಲ್ಲಿ
ಕಾಪೌಂಡ್, ಕಾಪೌಂಡ್ಗೆ ಹೊಂದಿಕೊಂಡ ರಸ್ತೆಗಳ ಅಭಿವೃದ್ಧಿ, ನಿಲ್ದಾಣಕ್ಕೆ ಸಂಪರ್ಕಿಸುವ ರಸ್ತೆಗಳ ಅಭಿವೃದ್ಧಿ, 100 ಕೆವಿ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕ, ಉಪ ವಿದ್ಯುತ್ ಘಟಕ, ಕೊಳಚೆ ನೀರು ಶುದ್ಧೀಕರಣ ಘಟಕ, 9 ವೀಕ್ಷಣಾ ಗೋಪುರ ನಿರ್ಮಾಣ ಮುಂತಾದ ಕಾಮಗಾರಿಗಳು ಅಂತಿಮ ಹಂತದಲ್ಲಿದೆ. ಪ್ಯಾಸೆಂಜರ್ ಟರ್ಮಿನಲ್ ಕಟ್ಟದ ಕೆಲವು ಕೆಲಸಗಳು ಪೂರ್ಣಗೊಂಡ ಬಳಿಕ ವಿಮಾನ ನಿಲ್ದಾಣವನ್ನು ಲೋಕೋಪಯೋಗಿ ಇಲಾಖೆಗೆ ವಹಿಸಲಾಗುತ್ತದೆ. ಬಳಿಕ ಡಿಜಿಸಿಎ ತಂಡ ಆಗಮಿಸಿ ಮತ್ತೊಮ್ಮೆ ಪರಿಶೀಲನೆ ನಡೆಸಲಿದೆ.

ಉದ್ಘಾಟನೆಗೆ ಪೂರಕ ಕೆಲಸಗಳು
ಜನವರಿ 30ರಿಂದ ಒಂದು ವಾರ ತಾಂತ್ರಿಕ ಕೆಲಸಗಳು ನಡೆಯಲಿವೆ. ವಿಮಾನ ನಿಲ್ದಾಣ ಮೂಲ ಸೌಲಭ್ಯ ಅಭಿವೃದ್ಧಿ ನಿಗಮ, ಡೈರೆಕ್ಟರ್ ಜನರಲ್ ಆಫ್ ಸಿವಿಲ್ ಏವಿಯೇಷನ್, ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ, ಬ್ಯುರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ ಸೇರಿದಂತೆ ವಿವಿಧ ವಿಭಾಗಗಳು ಉದ್ಘಾಟನೆಗೆ ಅನುಮತಿ ನೀಡಬೇಕು. ಈಗ ಅನುಮತಿ ಪಡೆಯುವ ಕಾರ್ಯಗಳು ನಡೆಯುತ್ತಿವೆ. ಫೆಬ್ರವರಿ 27ರಂದು ಉದ್ಘಾಟನೆ ಮಾಡಲು ಅಗತ್ಯ, ಅಂತಿಮ ಹಂತದ ಕಾಮಗಾರಿ ಕೈಗೊಳ್ಳಲಾಗಿದೆ.

ಬಿ. ಎಸ್. ಯಡಿಯೂರಪ್ಪ ಕನಸು
ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕು ಎಂಬುದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕನಸು. ಯಡಿಯೂರಪ್ಪ ಚಾಲನೆ ನೀಡಿದ ಯೋಜನೆಯನ್ನು ಪೂರ್ಣಗೊಳಿಸಲು ಅವರೇ ಮತ್ತೆ ಬರಬೇಕಾಯಿತು. 2008ರ ಏಪ್ರಿಲ್ನಲ್ಲಿ ಯೋಜನೆಗೆ ಅವರು ಚಾಲನೆ ನೀಡಿದ್ದರು. 2010ರಲ್ಲಿ ವಿಮಾನ ನಿಲ್ದಾಣ ಪೂರ್ಣಗೊಳ್ಳಬೇಕಿತ್ತು. ಆದರೆ ವಿವಿಧ ಕಾರಣಗಳಿಗೆ ಯೋಜನೆ ವಿಳಂಬವಾಯಿತು. 2019ರಲ್ಲಿ ಮತ್ತೆ ಸಿಎಂ ಆದ ಯಡಿಯೂರಪ್ಪ ಯೋಜನೆ ಪೂರ್ಣಗೊಳಿಸಲು ಪಣ ತೊಟ್ಟರು. ಅನುದಾನ ಬಿಡುಗಡೆ ಮಾಡಿದರು. ಈಗ ಕಾಮಗಾರಿ ಪೂರ್ಣಗೊಳ್ಳುತ್ತಾ ಬಂದು ಉದ್ಘಾಟನೆಗೆ ಸಿದ್ಧವಾಗಿದೆ.












Click it and Unblock the Notifications