Vande Bharat; ವಂದೇ ಭಾರತ್ ರೈಲಿಗೆ ಬೀರೂರಿನಲ್ಲಿ ನಿಲುಗಡೆ ಕೊಡಿ
ಶಿವಮೊಗ್ಗ, ಡಿಸೆಂಬರ್ 15; ಶಿವಮೊಗ್ಗಕ್ಕೆ ವಂದೇ ಭಾರತ್ ರೈಲು ಸಂಚಾರ ಬೇಕು ಎಂಬ ಬೇಡಿಕೆಗೆ ಇನ್ನೂ ರೈಲ್ವೆ ಇಲಾಖೆ ಮನ್ನಣೆ ನೀಡಿಲ್ಲ. ಸದ್ಯ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ಸಂಚಾರ ನಡೆಸುತ್ತಿರುವ ರೈಲಿಗೆ ಮತ್ತೊಂದು ನಿಲುಗಡೆ ನೀಡಲು ರೈಲ್ವೆ ಸಚಿವರಿಗೆ ಮನವಿ ಮಾಡಲಾಗಿದೆ.
ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಭೇಟಿಯಾಗಿದ್ದರು. ಆಗ ಕೆಎಸ್ಆರ್ ಬೆಂಗಳೂರು-ಧಾರವಾಡ ನಡುವಿನ ವಂದೇ ಭಾರತ್ ರೈಲನ್ನು ಬೀರೂರು ಜಂಕ್ಷನ್ನಲ್ಲಿ ನಿಲುಗಡೆ ಮಾಡಬೇಕು ಎಂದು ಮನವಿ ಸಲ್ಲಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ 2023ರ ಜೂನ್ 27ರಂದು ಬೆಂಗಳೂರು-ಧಾರವಾಡ ನಡುವಿನ ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ್ದರು. ಈ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಲು ಸಹ ಒಪ್ಪಿಗೆ ಸಿಕ್ಕಿದ್ದು, ಪ್ರಾಯೋಗಿಕ ಸಂಚಾರ ಸಹ ಯಶ್ವಸ್ವಿಯಾಗಿ ನಡೆದಿದೆ.
ಬೀರೂರು ನಿಲುಗಡೆ ಏಕೆ?; ಕೆಎಸ್ಆರ್ ಬೆಂಗಳೂರು-ಧಾರವಾಡ ನಡುವಿನ ವಂದೇ ಭಾರತ್ ರೈಲಿಗೆ ಯಶವಂತಪುರ, ದಾವಣಗೆರೆ ಮತ್ತು ಹುಬ್ಬಳ್ಳಿ ಮೂರು ನಿಲ್ದಾಣಗಳಿವೆ. ತುಮಕೂರು, ಚಿಕ್ಕಜಾಜೂರು ನಿಲ್ದಾಣ ಬೇಕು ಎಂದು ಸಹ ಬೇಡಿಕೆಯನ್ನು ಸಲ್ಲಿಕೆ ಮಾಡಲಾಗಿದೆ.
ಸಂಸದ ಬಿ. ವೈ. ರಾಘವೇಂದ್ರ ರೈಲ್ವೆ ಸಚಿವರ ಜೊತೆ ಬೀರೂರು ಪ್ರಮುಖ ಜಂಕ್ಷನ್ ಆಗಿದೆ. ಶಿವಮೊಗ್ಗ ಭಾಗದ ರೈಲುಗಳು ಇಲ್ಲಿ ಮಾರ್ಗ ಬದಲಾವಣೆ ಮಾಡುತ್ತವೆ. ವಂದೇ ಭಾರತ್ ರೈಲಿಗೆ ಇಲ್ಲಿ ನಿಲುಗಡೆ ನೀಡಿದಲ್ಲಿ ಶಿವಮೊಗ್ಗ ಭಾಗದ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.
ಶಿವಮೊಗ್ಗಕ್ಕೆ ಈಗಾಗಲೇ ರೈಲು, ರಸ್ತೆ, ವಿಮಾನದ ಮೂಲಕ ಸಾರಿಗೆ ವ್ಯವಸ್ಥೆ ಇದೆ. ಬೆಂಗಳೂರು ಶಿವಮೊಗ್ಗ ನಡುವ ಶತಾಬ್ದಿ ಸೇರಿದಂತೆ ಹಲವು ರೈಲುಗಳು ಸಂಚಾರ ನಡೆಸುತ್ತಿವೆ. ಬೆಂಗಳೂರು-ಶಿವಮೊಗ್ಗ ನಡುವೆ ವಂದೇ ಭಾರತ್ ರೈಲು ಓಡಿಸಬೇಕು ಎಂದು ಸಹ ರೈಲ್ವೆ ಸಚಿವಾಲಯಕ್ಕೆ ಈಗಾಗಲೇ ಮನವಿ ಸಲ್ಲಿಕೆ ಮಾಡಲಾಗಿದೆ.
ಕರ್ನಾಟಕದ 2ನೇ ರೈಲು; ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ನಡುವಿನ ವಂದೇ ಭಾರತ್ ರೈಲು ಕರ್ನಾಟಕದ 2ನೇ ವಂದೇ ಭಾರತ್ ರೈಲು. ಮೊದಲ ರೈಲು ಮೈಸೂರು-ಬೆಂಗಳೂರು-ಚೆನ್ನೈ ನಡುವೆ ಸಂಚಾರ ನಡೆಸುತ್ತದೆ. 3ನೇ ರೈಲು ಯಶವಂತಪುರ-ಕಾಚಿಗುಡ ನಡುವೆ ಸಂಚರಿಸುತ್ತಿದೆ.
ಜೂನ್ 27ರಂದು ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರದೇಶದ ರಾಣಿ ಕಮಲಾಪತಿ ರೈಲ್ವೆ ನಿಲ್ದಾಣದಲ್ಲಿ 5 ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಿಸಿದ್ದರು. ಇವುಗಳಲ್ಲಿ ಧಾರವಾಡ-ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ಸಹ ಸೇರಿತ್ತು. ಬಳಿಕ ಈ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಬೇಕು ಎಂದು ಬೇಡಿಕೆ ಇಡಲಾಯಿತು.
ಪ್ರಯಾಣಿಕರು ಈ ಕುರಿತು ಮನವಿ ಮಾಡಿದ್ದರು. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ರೈಲ್ವೆ ಸಚಿವರಿಗೆ ಈ ಕುರಿತು ಪತ್ರವನ್ನು ಬರೆದಿದ್ದರು. ಅಂತಿಮವಾಗಿ ರೈಲ್ವೆ ಇಲಾಖೆ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಲು ಒಪ್ಪಿಗೆ ನೀಡಿದೆ.
ಸದ್ಯ ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ನಡುವೆ ವಂದೇ ಭಾರತ್ ರೈಲು ಸಂಚಾರ ನಡೆಸುತ್ತಿದೆ. ಇದನ್ನು ಬೆಳಗಾವಿ ತನಕ ವಿಸ್ತರಣೆ ಮಾಡಲು ಪ್ರಾಯೋಗಿಕ ಸಂಚಾರ ಪೂರ್ಣಗೊಂಡಿದೆ. ಆದರೆ ವಾಣಿಜ್ಯ ಸಂಚಾರದ ದಿನಾಂಕ ನಿಗದಿಯಾಗಿಲ್ಲ.
ನವೆಂಬರ್ 21ರಂದು ರೈಲ್ವೆ ಇಲಾಖೆ ಅಧಿಕಾರಿಗಳು ಬೆಂಗಳೂರಿನಿಂದ ಬೆಳಗಾವಿ ತನಕ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ನಡೆಸಿದ್ದಾರೆ. ಯಾವುದೇ ಅಡೆ ತಡೆ ಇಲ್ಲದೇ ಯಶಸ್ವಿಯಾಗಿ ಪ್ರಾಯೋಗಿಕ ಸಂಚಾರ ನಡೆದಿದೆ.
ಈ ರೈಲಿಗೆ ಬೀರೂರಿನಲ್ಲಿ ಮತ್ತೊಂದು ನಿಲುಗಡೆ ನೀಡಿದರೆ ರೈಲು ಧಾರವಾಡ, ಬೆಳಗಾವಿ ತಲುಪುವುದು ಇನ್ನೂ ತಡವಾಗಲಿದೆ. ಅದಕ್ಕಾಗಿ ಮತ್ತೆ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಬೇಕಿದೆ. ಆದ್ದರಿಂದ ಬೀರೂರು ನಿಲುಗಡೆ ರೈಲ್ವೆ ಇಲಾಖೆ ಒಪ್ಪಿಗೆ ನೀಡಲಿದೆಯೇ? ಕಾದು ನೋಡಬೇಕಿದೆ.












Click it and Unblock the Notifications