'ನೆಲ- ಜಲ ವಿಚಾರದಲ್ಲೂ ಸಿದ್ದು ರಾಜಕೀಯ, ಮುಖ್ಯಮಂತ್ರಿ ಎನ್ನಲು ಅಸಹ್ಯ'
ಶಿವಮೊಗ್ಗ, ಫೆಬ್ರವರಿ 3 : ಸಿದ್ದರಾಮಯ್ಯ ಅವರನ್ನು ರಾಜ್ಯದ ಮುಖ್ಯಮಂತ್ರಿ ಎನ್ನಲು ನನಗೆ ಅಸಹ್ಯವಾಗುತ್ತದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಧರ್ಮ, ನೆಲ- ಜಲದ ವಿಚಾರದಲ್ಲಿ ರಾಜಕಾರಣ ಮಾಡುತ್ತಾ ಇದ್ದಾರೆ. ವೀರೇಂದ್ರ ಪಾಟೀಲ್ ಮುಖ್ಯಮಂತ್ರಿ ಆದಾಗಿನಿಂದ ರಾಜ್ಯದ ರಾಜಕೀಯ ಗಮನಿಸುತ್ತಾ ಬಂದಿದ್ದೇನೆ. ಅಲ್ಲಿಂದ ಯಡ್ಡಿಯೂರಪ್ಪ ಅವರವರೆಗೆ ನೋಡಿದ ಮುಖ್ಯಮಂತ್ರಿಗಳು ಯಾರು ಇಷ್ಟು ಕೀಳು ಮಟ್ಟದ ರಾಜಕೀಯ ಮಾಡಿದವರನ್ನು ನೋಡಿಲ್ಲ ಎಂದರು.
ಪ್ರಧಾನಮಂತ್ರಿಗಳ ಮದ್ಯಸ್ಥಿಕೆಯಲ್ಲಿ ಮಹಾದಾಯಿ ನದಿ ನೀರು ಹಂಚಿಕೆ ಮಾಡಿಕೊಳ್ಳಿ ಎಂದು ನ್ಯಾಯಾಲಯ ಹೇಳಿಲ್ಲ. ಆದರೆ ಮೂರು ರಾಜ್ಯದ ಮುಖ್ಯಮಂತ್ರಿಗಳು ಕುಳಿತು ಬಗೆಹರಿಸಿಕೊಳ್ಳಿ ಎಂದು ಹೇಳಿದೆ. ಹಾಗಾಗಿ ನಾವು ವಿಪಕ್ಷದವರು ಗೋವಾ ಮತ್ತು ಮಹಾರಾಷ್ಟ್ರದಲ್ಲಿನ ಬಿಜೆಪಿ ನಾಯಕರನ್ನು ಒಪ್ಪಿಸಿ ಕರೆತರುತ್ತೇವೆ ಎನ್ನುತ್ತಿದ್ದೇವೆ.
ಕಾಂಗ್ರೆಸ್ ಪಕ್ಷವೂ ಆಯಾ ರಾಜ್ಯದ ಕಾಂಗ್ರೆಸ್ ಮುಖಂಡರ ಮನವೊಲಿಸಿ ಸಭೆ ನಡೆಸುವ ಪ್ರಯತ್ನ ಮಾಡಬೇಕಿತ್ತು. ಅದನ್ನು ಬಿಟ್ಟು ಕಾಂಗ್ರೆಸ್ ರಾಜಕೀಯ ಮಾಡುತ್ತಾ ಇದೆ. ಮುಂದಿನ ದಿನಗಳಲ್ಲಿ ಬರುವ ಚುನಾವಣೆಯಲ್ಲಿ ಜನ ಈ ಕುರಿತು ತೀರ್ಪು ನೀಡಲಿದ್ದಾರೆ ಎಂದರು.

ನೀರು ಕೊಡುವುದಿಲ್ಲ ಎಂದಿದ್ದ ಸೋನಿಯಾ ಗಾಂಧಿ
ಮಹಾದಾಯಿ ನದಿ ನೀರು ಹಂಚಿಕೆ ವಿವಾದವನ್ನು ಕಾಂಗ್ರೆಸ್ ಜ್ವಲಂತವಾಗಿಡಲು ಪ್ರಯತ್ನಿಸುತ್ತಿದೆ. ಸೋನಿಯಾ ಗಾಂಧಿ ಈ ಹಿಂದಿನ ಚುನಾವಣಾ ಭಾಷಣದಲ್ಲಿ ಮಹಾದಾಯಿಯ ಒಂದು ಹನಿ ನೀರನ್ನು ಕರ್ನಾಟಕಕ್ಕೆ ಕೊಡೋದಿಲ್ಲ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ಮಹಾದಾಯಿ ಕುರಿತು ತುಟಿ ಬಿಚ್ಚುವುದಿಲ್ಲ. ಪ್ರಧಾನಿ ಮಾತ್ರ ಮಾತನಾಡಿ ಎನ್ನುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಪ್ರಧಾನಿ ಭಾಷಣ ನಾನು ಸಿದ್ಧಪಡಿಸಲ್ಲ
ಬೆಂಗಳೂರಿನಲ್ಲಿ ಭಾನುವಾರ ನಡೆಯುವ ಪರಿವರ್ತಾನಾ ಯಾತ್ರೆಯಲ್ಲಿ ಪ್ರಧಾನಿ ಮೋದಿ ಮಹಾದಾಯಿ ನದಿ ನೀರು ಹಂಚಿಕೆ ಬಗ್ಗೆ ಕರ್ನಾಟಕಕ್ಕೆ ಸಿಹಿ ಸುದ್ದಿ ನೀಡಲಿದ್ದಾರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ, ಅವರ ಭಾಷಣವನ್ನು ನಾನು ತಯಾರಿಸುವುದಿಲ್ಲ. ಆದರೆ ನನ್ನ ಭಾಷಣದಲ್ಲಿ ಮಹಾದಾಯಿ ನದಿ ನೀರು ಹಂಚಿಕೆಯಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿರುವುದನ್ನು ಪ್ರಸ್ತಾಪಿಸಲಿದ್ದೇನೆ ಎಂದರು.

4 ಲಕ್ಷ ಜನ ಸೇರುವ ನಿರೀಕ್ಷೆ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾಗವಹಿಸಲಿರುವ ಪರಿವರ್ತನಾ ಯಾತ್ರೆ ಸಮಾರೋಪ ಕಾರ್ಯಕ್ರಮದಲ್ಲಿ 4 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಶಿವಮೊಗ್ಗ ಜಿಲ್ಲೆಯಿಂದ 25 ಸಾವಿರ ಹಾಗೂ ನಗರದಿಂದ 4 ಸಾವಿರ ಜನ ಭಾಗಿಯಾಲಿದ್ದಾರೆ ಎಂದು ಈಶ್ವರಪ್ಪ ಹೇಳಿದರು.

ದುಬೈನಿಂದ ಬೆದರಿಕೆ ಕರೆ
ನನಗೆ ಹಾಗೂ ಪಕ್ಷದ ಮುಖಂಡರಿಗೆ ಕೊಲೆ ಬೆದರಿಕೆಗಳು ಬರುತ್ತಾ ಇವೆ. ಆದರೆ ರಾಜ್ಯ ಸರಕಾರ ಕೊಲೆಗಡುಕರ ಹಾಗೂ ಬೆದರಿಕೆ ಕರೆ ಮಾಡುವವರ ವಿರುದ್ಧ ಗಂಭೀರ ಕ್ರಮ ಜರುಗಿಸುತ್ತಿಲ್ಲ. ಈ ಹಿಂದೆ ನನಗೂ 'ಹಿಂದೂ ಸಂಘಟನೆಯಲ್ಲಿದ್ದೀಯ ಕೊಲೆ ಮಾಡಲಾಗುವುದು' ಎಂಬ ಬೆದರಿಕೆ ಕರೆ ದುಬೈಯಿಂದ ಬಂದಿತ್ತು. ವಿಧಾನ ಪರಿಷತ್ ಮತ್ತು ಜಿಲ್ಲಾ ರಕ್ಷಣಾಧಿಕಾರಿ ಇವರಿಗೆ ದೂರು ನೀಡಿದ್ದೆ. ಈ ಕರೆ ಮಾಡಿರುವ ವ್ಯಕ್ತಿಗಳ ಕುರಿತು ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ವಿಧಾನ ಪರಿಷತ್ ನಿಂದ ಹಿಂಬರಹ ನೀಡಲಾಗಿದೆ. ಇದು ನಿರೀಕ್ಷಿತ. ಆದರೆ ಶಿವಮೊಗ್ಗ ಎಸ್ ಪಿಯಿಂದ ಯಾವುದೇ ಉತ್ತರ ಬಂದಿಲ್ಲ ಕಾದು ನೋಡಬೇಕಿದೆ ಎಂದರು.












Click it and Unblock the Notifications