ಹಳ್ಳಿ ಕಡೆ ಮುಖ ಮಾಡಿದ ಯುವಜನತೆ: ಹಾಲು ಉತ್ಪಾದನೆ ಹೆಚ್ಚಳ
ಶಿವಮೊಗ್ಗ, ಜೂನ್ 26: ಮಹಾಮಾರಿ ಕೊರೊನಾ ವೈರಸ್ ಎಲ್ಲಾ ಉತ್ಪಾದನಾ ಕ್ಷೇತ್ರಗಳ ಭಾರಿ ಮೇಲೆ ಪರಿಣಾಮ ಬೀರಿದೆ. ಆದರೆ ಲಾಕ್ ಡೌನ್ ಪರಿಣಾಮದಿಂದಾಗಿ ಹಾಲು ಉತ್ಪಾದನೆ ಅಧಿಕಗೊಂಡಿದೆ. ಹಳ್ಳಿಯಿಂದ ಉದ್ಯೋಗಕ್ಕಾಗಿ ನಗರದ ಕಡೆಗೆ ಮುಖ ಮಾಡಿದ್ದವರು ವಾಪಸ್ ಬಂದು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ನಿರ್ಧಾರ ಹಾಲು ಉತ್ಪಾದನೆ ಹೆಚ್ಚಳಕ್ಕೆ ಕಾರಣವಾಗಿದೆ.
Recommended Video
ಶಿವಮೊಗ್ಗ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ಹಾಲು ಉತ್ಪಾದನೆ ಹೆಚ್ಚಳಗೊಂಡಿದೆ. ಲಾಕ್ ಡೌನ್ ಗೂ ಮುನ್ನ ಶಿಮುಲ್ ಗೆ ಪ್ರತಿದಿನ 4.5 ಲಕ್ಷ ಲೀಟರ್ ಹಾಲು ಬರುತ್ತಿತ್ತು. ನಂತರ ಪ್ರತಿದಿನ 6.4 ಲಕ್ಷ ಲೀಟರ್ ಹಾಲು ಬರುತ್ತಿದೆ. ಒಂದು ಕಡೆ ಮುಂಗಾರು ಮಳೆ ಆರಂಭವಾಗಿದ್ದು, ಹಸಿರು ಹುಲ್ಲು ಸೋಂಪಾಗಿ ಬೆಳೆದಿರುತ್ತದೆ, ಹಸುಗಳು ಹೆಚ್ಚು ಹಾಲು ಕೊಡುವ ಸಮಯವಿದು. ಬೇರೆ ರಾಜ್ಯಗಳಿಗೆ ಕೆಲಸಕ್ಕೆ ವಲಸೆ ಹೋಗಿದ್ದವರು ವಾಪಸ್ ತಮ್ಮ ಊರುಗಳಿಗೆ ಬಂದಿದ್ದಾರೆ. ಇವರೆಲ್ಲರೂ ತಮ್ಮ ಕುಟುಂಬದವರ ಜೊತೆ ಹೈನುಗಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ.
ಹಳ್ಳಿಗೆ ವಾಪಸ್ಸಾದ ಯುವಕರು ಉದ್ಯೋಗ ಇಲ್ಲದಿದ್ದರಿಂದ ತಮ್ಮ ಮನೆಯಲ್ಲಿರುವ ಹಸುಗಳನ್ನು ಮೇಯಿಸುತ್ತಿದ್ದಾರೆ. ಪರಿಣಾಮ ಹಸುಗಳು ನೀಡುವ ಹಾಲಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಒಂದು ಕಡೆ ಹಾಲಿನ ಉತ್ಪಾದನೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದ್ದರೆ, ಮಾರಾಟದ ಪ್ರಮಾಣ ಕುಸಿದಿದೆ. ಹೀಗಾಗಿ ಶಿಮುಲ್ ಗೆ ಮತ್ತೊಂದು ಸಮಸ್ಯೆ ಎದುರಾಗಿದೆ.

ಅಂದಹಾಗೆ ಪ್ರಸ್ತುತ ಶಿಮುಲ್ ಗೆ ಹಾಲು ಉತ್ಪಾದಕರಿಂದ 6.43 ಲಕ್ಷ ಲೀಟರ್ ಹಾಲು ಬರುತ್ತಿದೆ. ಆದರೆ ಶಿಮೂಲ್ ನಿಂದ ಮಾರಾಟ ಆಗುತ್ತಿರುವುದು ಮಾತ್ರ ಕೇವಲ 2.30 ಲಕ್ಷ ಲೀಟರ್. ಉಳಿದ 4.10 ಲಕ್ಷ ಲೀಟರ್ ಅಧಿಕ ಉತ್ಪಾದನೆಯಾಗುತ್ತಿದೆ. ಒಂದು ಲಕ್ಷ ಲೀಟರ್ ಹಾಲನ್ನು ಇತರೆ ಮದರ್ ಡೈರಿಗಳಿಗೆ ನೀಡಲಾಗುತ್ತಿದೆ. ಬಾಕಿ ಉಳಿದ 3.10 ಲಕ್ಷ ಲೀಟರ್ ಹಾಲನ್ನು ಹಾಲಿನ ಪುಡಿ ಹಾಗೂ ಇತರೆ ಉತ್ಪನ್ನಗಳ ಉತ್ಪಾದನೆಗೆ ಬಳಸಿಕೊಳ್ಳಲಾಗುತ್ತಿದೆ.
ಲಾಕ್ ಡೌನ್ ಮತ್ತು ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಸಭೆ-ಸಮಾರಂಭಗಳು ನಡೆಯುತ್ತಿಲ್ಲ. ಹೀಗಾಗಿ ಶಿಮುಲ್ ನ ಹಾಲು ಮಾರಾಟ ಕುಸಿದಿದೆ. ಅದರಲ್ಲೂ ಹಾಲು ಖರೀದಿ ದರದಲ್ಲಿಯೂ ಏರಿಕೆ ಮಾಡಲಾಗಿದ್ದು, ಈ ಕಾರಣದಿಂದಾಗಿ ಹೆಚ್ಚು ಹೆಚ್ಚು ಹಾಲು ಉತ್ಪಾದಿಸಿ ರೈತರು ಡೈರಿಗೆ ಕಳಿಸುತ್ತಿದ್ದು, ಇದು ಹಾಲು ಉತ್ಪಾದನೆಗೆ ಪ್ರಮುಖ ಕಾರಣವಾಗಿದೆ.












Click it and Unblock the Notifications