ಆರಗ ಜ್ಞಾನೇಂದ್ರ ಕ್ಷೇತ್ರದಲ್ಲಿ ಅಕ್ರಮ ಮದ್ಯ ಮಾರಾಟ: ಗ್ರಾಮಸ್ಥರ ಆಕ್ರೋಶ
ಶಿವಮೊಗ್ಗ, ಅಕ್ಟೋಬರ್ 17: ಗದ್ದೆ ಬದಿಯಲ್ಲಿ ಅಸ್ವಸ್ಥನಾಗಿ ಬಿದ್ದಿದ್ದ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ತೀರ್ಥಹಳ್ಳಿ ತಾಲೂಕು ಹೊದಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಲವಡ್ಕದ ಕುಟ್ರ ಗ್ರಾಮದಲ್ಲಿ ನಡೆದಿದೆ.
ರಮೇಶ್ ಅಲಿಯಾಸ್ ಕಲಾಸಿಪಾಳ್ಯ (55) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಮೃತ ರಮೇಶ ಈ ಹಿಂದೆ ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ಕೆಲಸ ಮಾಡುತ್ತಿದ್ದ. ಈ ಕಾರಣಕ್ಕೆ ಗ್ರಾಮದಲ್ಲಿ ಆತನನ್ನು ಕಲಾಸಿಪಾಳ್ಯ ಎಂದು ಅಡ್ಡ ಹೆಸರಿನೊಂದಿಗೆ ಕರೆಯಲಾಗುತ್ತಿತ್ತು. ಈತನ ಸಾವಿನ ಬಗ್ಗೆ ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.
ಕಾರ್ಗಲ್ ಚೆಕ್ಪೋಸ್ಟ್: ಪೊಲೀಸ್-ಭದ್ರತಾ ಸಿಬ್ಬಂದಿ ನಡುವೆ ನಿಲ್ಲದ ಪಾಸ್ ವಿವಾದ
ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಕ್ಷೇತ್ರದಲ್ಲಿ ಅಕ್ರಮ ಮದ್ಯ ಮಾರಾಟವಾಗುತ್ತಿದ್ದು, ಇದರಿಂದ ರಮೇಶ್ ಅಲಿಯಾಸ್ ಕಲಾಸಿಪಾಳ್ಯ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ.
ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವು
ಕುಟ್ರ ಗ್ರಾಮದ ರಮೇಶ ಪ್ರಜ್ಞಾಹೀನ ಸ್ಥಿತಿಯಲ್ಲಿ ಗದ್ದೆ ಬದಿಯಲ್ಲಿ ಬಿದ್ದಿರುವುದನ್ನು ಗ್ರಾಮಸ್ಥರು ಗಮನಿಸಿದ್ದಾರೆ. ಮದ್ಯವ್ಯಸನಿಯಾಗಿದ್ದ ಈತ ಮದ್ಯ ಸೇವಿಸಿ ಬಿದ್ದಿರಬಹುದು ಎಂದು ಶಂಕಿಸಲಾಗಿತ್ತು. ಎಷ್ಟೇ ಕರೆದರೂ ಮೇಲೆಳದ ಆತನನ್ನು ಕೊನೆಗೆ ಗ್ರಾಮಸ್ಥರು ತೀರ್ಥಹಳ್ಳಿ ಜೆ.ಸಿ. ಆಸ್ಪತ್ರೆಗೆ ದಾಖಲು ಮಾಡಿದ್ದರು. ಬಳಿಕ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ರಮೇಶ ಮೃತಪಟ್ಟಿದ್ದಾನೆ.
ಅಕ್ರಮ ಮದ್ಯ ಮಾರಾಟ ಆರೋಪದ ಮೇಲೆ ವ್ಯಕ್ತಿ ಬಂಧನ
ರಮೇಶನ ಸಾವಿನ ಕುರಿತು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಮದ್ಯ ಸೇವಿಸಿ ರಮೇಶ್ ಸಾವನ್ನಪ್ಪಿರಬಹುದು ಎಂದು ಶಂಕಿಸಿದ್ದಾರೆ. ಆತ ಮೃತಪಟ್ಟ ವಿಚಾರ ತಿಳಿದು ಗ್ರಾಮದಲ್ಲಿ ಜನರು ಅಕ್ರಮವಾಗಿ ಮದ್ಯ ಮಾರಾಟ ಮಾಡುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮಸ್ಥರ ಆರೋಪದ ಮೇಲೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಆರೋಪ ಸಂಬಂಧ ವಸಂತ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಒಂದು ವಾರ ಕಳೆಯುವುದರಲ್ಲಿ ಒಂದು ಸಾವು
ತಲವಡ್ಕದ ಕುಟ್ರ ಗ್ರಾಮದಲ್ಲಿ ಮದ್ಯ ಮಾರಾಟ ಮಾಡುವಂತಿಲ್ಲ ಎಂದು ಗ್ರಾಮಸ್ಥರು ನಿರ್ಧರಿಸಿದ್ದರು. ದೈವ ಸನ್ನಿಧಿಯಲ್ಲಿ ಈ ಪ್ರತಿಜ್ಞೆ ಮಾಡಿದ್ದರು. ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವಂತಿಲ್ಲ, ಹೊರ ಊರುಗಳಿಂದ ಮದ್ಯ ತರುವಂತಿಲ್ಲ ಎಂದು ನಿರ್ಣಯಿಸಲಾಗಿತ್ತು. ಈ ಬಗ್ಗೆ ಊರಲ್ಲಿ ಅಲ್ಲಿಲ್ಲಿ ಬ್ಯಾನರ್ ಕೂಡ ಅಳವಡಿಸಲಾಗಿತ್ತು. ಇದಾಗಿ ಒಂದು ವಾರ ಕಳೆಯುವುದರಲ್ಲಿ ಘಟನೆ ಸಂಭವಿಸಿದೆ. ಗ್ರಾಮದಲ್ಲಿ ಅಕ್ರಮ ಮಾರಾಟ ನಡೆಯುತ್ತಿದ್ದು, ರಮೇಶ್ ಸಾವಿಗೆ ಕಾರಣವಾಗಿದೆ ಎಂದು ಆರೋಪಿಸಲಾಗಿದೆ.
ಅಬಕಾರಿ ಇಲಾಖೆಗೆ ಗೃಹ ಸಚಿವರ ವಾರ್ನ್
ತೀರ್ಥಹಳ್ಳಿಯಲ್ಲಿ ಅಕ್ರಮ ಮದ್ಯ ಮಾರಾಟಗಾರರ ಹಾವಳಿ ಹೆಚ್ಚಿದೆ. ಸಣ್ಣಪುಟ್ಟ ಅಂಗಡಿಗಳು, ಮನೆಗಳಲ್ಲಿ ಮದ್ಯ ಮಾರಾಟ ನಡೆಸುತ್ತಿರುವ ಆರೋಪವಿದೆ. ಬಾರ್, ಮದ್ಯದ ಅಂಗಡಿಗಳಿಂದ ಮದ್ಯವನ್ನು ತಂದು ಪರವಾನಗಿ ಇಲ್ಲದೆ ಮಾರಾಟ ಮಾಡಲಾಗುತ್ತದೆ. ಇದನ್ನು ನಿಗ್ರಹಿಸಬೇಕು ಎಂದು ಈ ಹಿಂದೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಅಬಕಾರಿ ಇಲಾಖೆಗೆ ಸೂಚಿಸಿದ್ದರು. ಆದರೆ ಈ ತನಕ ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್ ಬಿದ್ದಿಲ್ಲ ಎನ್ನುವುದು ಗ್ರಾಮಸ್ಥರ ಆರೋಪವಾಗಿದೆ.