ಶಿವಮೊಗ್ಗ ಮಾರುಕಟ್ಟೆಯಲ್ಲಿ ಹಣ್ಣು, ಹೂವು ಖರೀದಿ ಭರಾಟೆ
ಶಿವಮೊಗ್ಗ, ಸೆ.28: ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಹಬ್ಬದ ಹಿನ್ನೆಲೆಯಲ್ಲಿ ಖರೀದಿ ಭರಾಟೆ ಜೋರಾಗಿ ನಡೆದಿದ್ದು, ಮಾರುಕಟ್ಟೆಯಲ್ಲಿ ಜನಜಂಗುಳಿ ಹೆಚ್ಚಾಗಿದೆ.
ನಗರದಲ್ಲಿ ಚೆಂಡು ಹೂ ಕೆಜಿಗೆ 40 ರಿಂದ 50 ರೂ., ಸೇಬು 120 ರೂ., ಮೂಸುಂಬೆ 60 ರೂ., ಸೀತಾಫಲ 80 ರೂ., ದ್ರಾಕ್ಷಿ 120 ರೂ., ಸಪೋಟ 60 ರೂ., ದಾಳಿಂಬೆ 80 ರೂ., ಸೇವಂತಿಗೆ ಮಾರಿಗೆ 50 ರಿಂದ 60 ರೂ., ಮಲ್ಲಿಗೆ ಮಾರಿಗೆ 80 ರೂ., ಬೂದಗುಂಬಲ ಒಂದಕ್ಕೆ 50 ರೂ. ನಿಂದ 100 ವರೆಗೂ ಮಾರಾಟವಾಗುತ್ತಿದೆ.
ಗ್ಯಾಲರಿ: ಶಿವಮೊಗ್ಗದಲ್ಲಿ ದಸರಾ ಹಬ್ಬದ ಸಂಭ್ರಮ

ಒಂದು ವಾರದಿಂದ ನಗರದ ಎಲ್ಲ ದೇವಾಲಯಗಳಲ್ಲಿ ನವರಾತ್ರಿ ವೈಭವ ನಡೆಯುತ್ತಿದೆ. 9 ದಿನಗಳ ಕಾಲ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗಿದೆ.
ಸಪ್ತಶತಿಪರಾಯಣ, ಲಲಿತಾಷ್ಟೋತ್ತರ, ಕುಂಕುಮಾರ್ಚನೆ, ವಿಶೇಷ ಪುಷ್ಪ ಅಲಂಕಾರಗಳು, ವಿವಿಧ ಹೋಮಗಳು, ಸುಗಮ ಸಂಗೀತ, ಹೂವಿನ ಪೂಜೆ, ವಿವಿಧ ದೇವಿಯ ಪ್ರತಿಷ್ಠಾನಗಳು ಹೀಗೆ ದೇವಸ್ಥಾನಗಳಲ್ಲಿ ಧಾರ್ಮಿಕ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ.

ಇದರ ಜೊತೆಗೆ ಜನರು ದಸರಾ ಹಬ್ಬಕ್ಕೆ ಅಣಿಯಾಗುತ್ತಿದ್ದು ಹೊಸ ಬಟ್ಟೆಗಳನ್ನು ಕೊಳ್ಳುತ್ತಿದ್ದಾರೆ. ಗ್ಯಾರೇಜ್, ವರ್ಕ್ಶಾಪ್, ಕೈಗಾರಿಕೆಗಳು, ಚಿಕ್ಕ ಪುಟ್ಟ ಕಾರ್ಖಾನೆ ಗಳು, ಅಂಗಡಿ ಮುಂಗಟ್ಟುಗಳು ಎಲ್ಲವೂ ಹಬ್ಬಕ್ಕೆ ಈಗಾಗಲೇ ಅಣಿಯಾಗಿದ್ದು ಆಯುಧ ಪೂಜೆಗೆ ಅಂತಿಮ ತಯಾರಿ ಭರದಿಂದ ಸಾಗುತ್ತಿದೆ.
ಮತ್ತೊಂದು ಕಡೆ ರೈತರು ತಮ್ಮ ತಮ್ಮ ವ್ಯವಸಾಯೋಪಕರಣಗಳಾದ ಟ್ರಾಕ್ಟರ್, ನೇಗಿಲು, ಎತ್ತಿನ ಗಾಡಿ ಮುಂತಾದ ವಸ್ತುಗಳನ್ನು ಸ್ವಚ್ಚಗೊಳಿಸುತ್ತಿದ್ದು, ಹಬ್ಬಕ್ಕೆ ಅಣಿಯಾಗುತ್ತಿದ್ದಾರೆ.












Click it and Unblock the Notifications