ಶಿವಮೊಗ್ಗ : ಕ್ಷುಲ್ಲಕ ಕಾರಣಕ್ಕೆ ಕಲ್ಲು ತೂರಾಟ, ಪೊಲೀಸ್ ಭದ್ರತೆ
ಶಿವಮೊಗ್ಗ, ಸೆಪ್ಟೆಂಬರ್ 02 : ಕ್ಷುಲ್ಲಕ ಕಾರಣಕ್ಕೆ ಶಿವಮೊಗ್ಗ ನಗರದಲ್ಲಿ ಕಲ್ಲು ತೂರಾಟ ನಡೆದಿದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಶನಿವಾರ ರಾತ್ರಿ ಭಜರಂಗದಳ ದಳದ ಕಾರ್ಯಕರ್ತ ಮಾಲತೇಶ್ ಎನ್ನುವವರ ಮೇಲೆ ಅನ್ಯ ಕೋಮಿನ ಯುವಕರು ಕಲ್ಲು ತೂರಾಟ ನಡೆಸಿದರು. ಇದರಿಂದ ಕಸ್ತೂರ ಬಾ ರಸ್ತೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು.
ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದರು. ಎಸ್ಪಿ ಅಭಿನಮ್ ಖರೆ ಅವರು ಸ್ಥಳಕ್ಕೆ ಆಗಮಿಸಿ, ಪರಿಸ್ಥಿತಿ ಅವಲೋಕನ ನಡೆಸಿದರು. ಹೆಚ್ಚುವರಿ ಪೊಲೀಸ್ ಭದ್ರತೆಯನ್ನು ಮಾಡಿದರು.

ಆಗಿದ್ದೇನು? : ಶನಿವಾರ ರಾತ್ರಿ 8.30ರ ಸುಮಾರಿಗೆ ಗಾಂಧಿ ಬಜಾರ್ ಬಳಿ ತಾಯಿ ಮಗಳು ಚಪ್ಪಲಿ ಖರೀದಿಸಲು ಹೋಗಿದ್ದರು. ಆಗ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಯುವತಿಯ ಕೈ ಎಳೆದಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಘಟನೆ ನಡೆದ ಕೆಲ ಸಮಯದ ಬಳಿಕ ಯುವತಿಯ ಪೋಷಕರೊಂದಿಗೆ ಭಜರಂಗದಳದ ಕಾರ್ಯಕರ್ತ ಮಾಲತೇಶ್ ಅಲ್ಲಿಗೆ ತೆರಳಿದ್ದರು. ಆಗ ಸ್ಥಳದಲ್ಲಿದ್ದ ಅನ್ಯಕೋಮಿನ ಯುವಕರು ಮಾಲತೇಶ್ ಮೇಲೆ ಕಲ್ಲು ತೂರಾಟ ನಡೆಸಿದರು.

ತಕ್ಷಣ ಪೊಲೀಸರು ಲಾಠಿ ಚಾರ್ಜ್ ನಡೆಸಿ ಗುಂಪನ್ನು ಚದುರಿಸಿದರು. ಮಾಲತೇಶ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಘಟನೆ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ, ಯಾರನ್ನು ಬಂಧಿಸಿಲ್ಲ.












Click it and Unblock the Notifications