ಮಧು ಮತ್ತೆ ವಿದೇಶಕ್ಕೆ ಹೋಗಲಿದ್ದಾರೆ : ಕುಮಾರ್ ಬಂಗಾರಪ್ಪ ಲೇವಡಿ
ಶಿವಮೊಗ್ಗ, ಅಕ್ಟೋಬರ್ 18 : 'ನವೆಂಬರ್ 3ರಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಮುಗಿಯುತ್ತದೆ. ನವೆಂಬರ್ 6ಕ್ಕೆ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ. ನವೆಂಬರ್ 7ರಂದು ಮಧು ಬಂಗಾರಪ್ಪ ಪುನಃ ವಿದೇಶಕ್ಕೆ ಹೋಗಲಿದ್ದಾರೆ' ಎಂದು ಕುಮಾರ್ ಬಂಗಾರಪ್ಪ ಲೇವಡಿ ಮಾಡಿದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣಾ ಕಣ ರಂಗೇರಿದೆ. ಚುನಾವಣೆ ಪ್ರಚಾರ ಕಾವೇರುತ್ತಿದ್ದು, ಸೊರಬ ಕ್ಷೇತ್ರದ ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ಲೋಕಸಭೆ ಉಪ ಚುನಾವಣೆ ಜೆಡಿಎಸ್ ಅಭ್ಯರ್ಥಿ, ಸಹೋದರ ಮಧು ಬಂಗಾರಪ್ಪ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.
ಸೊರಬದ ತತ್ತೂರು ಮಹಾಶಕ್ತಿ ಕೇಂದ್ರದಲ್ಲಿ ಲೋಕಸಭಾ ಉಪ ಚುನಾವಣೆ ಪ್ರಚಾರ ನಡೆಯಿತು. ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದ ಕುಮಾರ್ ಬಂಗಾರಪ್ಪ ಅವರು ಬಿ.ವೈ.ರಾಘವೇಂದ್ರ ಪರವಾಗಿ ಮತಯಾಚನೆ ಮಾಡಿದರು.
ನವೆಂಬರ್ 3ರಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ನಡೆಯುತ್ತಿದೆ. ಬಿ.ವೈ.ರಾಘವೇಂದ್ರ, ಮಧು ಬಂಗಾರಪ್ಪ ಮತ್ತು ಜೆಡಿಯುನಿಂದ ಮಹಿಮಾ ಪಟೇಲ್ ಕಣದಲ್ಲಿದ್ದಾರೆ. ಮೂವರು ಮಾಜಿ ಸಿಎಂಗಳ ಮಕ್ಕಳು ಕಣದಲ್ಲಿದ್ದು, ಚುನಾವಣೆ ಕುತೂಹಲ ಮೂಡಿಸಿದೆ...

ಮಧು ಬಂಗಾರಪ್ಪ ಅಭಿವೃದ್ಧಿ ಮಾಡಿಲ್ಲ
'ಮಧು ಬಂಗಾರಪ್ಪ ಅವರು ಮಾಡಿದ್ದೂ ಏನೂ ಇಲ್ಲ. ತಂದೆಯ ಸಮಾಧಿ ಸ್ಥಳವನ್ನು ಅಭಿವೃದ್ಧಿ ಮಾಡಿಲ್ಲ. ಕ್ಷೇತ್ರವನ್ನು ಅಭಿವೃದ್ಧಿ ಮಾಡಿಲ್ಲ. ಈಗ ನನಗೂ ಕೆಲಸ ಮಾಡಲು ಬಿಡುತ್ತಿಲ್ಲ. ಈಗ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ' ಎಂದು ಕುಮಾರ್ ಬಂಗಾರಪ್ಪ ವಾಗ್ದಾಳಿ ನಡೆಸಿದರು.

15 ದಿನದಲ್ಲಿ ವಿದೇಶಕ್ಕೆ ಹೋಗುವರು
'ನವೆಂಬರ್ 3ರಂದು ಲೋಕಸಭೆ ಉಪ ಚುನಾವಣೆ ಇದೆ. ನವೆಂಬರ್ 6ರಂದು ಫಲಿತಾಂಶ ಬರಲಿದೆ. ಮಾರನೇ ದಿನವೇ ಅವರು ವಿದೇಶಕ್ಕೆ ಹೋಗುತ್ತಾರೆ. ವಿದೇಶದಿಂದಲೇ ಅಲ್ಲವೇ ಬಂದು ನಾಮಪತ್ರವನ್ನು ಸಲ್ಲಿಸಿದ್ದು?' ಎಂದು ಕುಮಾರ್ ಬಂಗಾರಪ್ಪ ವ್ಯಂಗ್ಯವಾಡಿದರು.

ಏನು ಅರ್ಜಿ ಅಂತ ಗೊತ್ತಿದೆಯೋ?
'ವಿದೇಶದಲ್ಲಿದ್ದ ಮಧು ಬಂಗಾರಪ್ಪ ದೇವೇಗೌಡರು ಹೇಳಿದರು ಎಂದು ಇಲ್ಲಿಗೆ ಬಂದು ಅರ್ಜಿ ಹಾಕಿದ್ದಾರೆ. ಆ ಅರ್ಜಿಯಲ್ಲಿ ಏನಿದೆ? ಎಂಬುದು ಆತನಿಗೆ ಗೊತ್ತಿದೆಯೋ? ಇಲ್ಲವೋ ಎಂದರು. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಅಭ್ಯರ್ಥಿ ಸಿಕ್ಕಿಲ್ಲ. ಆದ್ದರಿಂದ, ಮಧು ಅವರನ್ನು ತಂದು ನಿಲ್ಲಿಸಿದ್ದಾರೆ' ಎಂದು ಟೀಕಿಸಿದರು.

ಸೊರಬದ ಅಭಿವೃದ್ದಿ ಚಿಂತೆ ಇದೆ
'ನಮಗೆ ಸೊರಬದ ಅಭಿವೃದ್ಧಿ ಚಿಂತೆ ಇದೆ. ಆದರೆ, ಮಧು ಬಂಗಾರಪ್ಪ ಅವರಿಗೆ ಯಾವುದೇ ಚಿಂತೆ ಇಲ್ಲ. ಜಿಲ್ಲೆಯ ಅಭಿವೃದ್ಧಿಗಾಗಿ ರಾಘವೇಂದ್ರ ಅವರಿಗೆ ಮತ ನೀಡಬೇಕು. ಹೆಚ್ಚಿನ ಮತಗಳ ಅಂತದಲ್ಲಿ ಅವರನ್ನು ಗೆಲ್ಲಿಸಬೇಕು' ಎಂದು ಮನವಿ ಮಾಡಿದರು.












Click it and Unblock the Notifications