ಶಿವಮೊಗ್ಗ- ಭದ್ರಾವತಿ ನಡುವೆ ಇರುವುದು ಹೈವೆಯೋ, ಯಮಲೋಕದ ದಾರಿಯೋ?
ಶಿವಮೊಗ್ಗ, ಸೆಪ್ಟೆಂಬರ್, 16: ಶಿವಮೊಗ್ಗ - ಭದ್ರಾವತಿ ರಾಷ್ಟ್ರೀಯ ಹೆದ್ದಾರಿ ಹೆಸರಿಗಷ್ಟೇ ಇದೆ. ಶಿವಮೊಗ್ಗ - ಭದ್ರಾವತಿ ನಡುವೆ 15 ನಿಮಿಷದಲ್ಲೇ ಸಂಚಾರ ಮಾಡಬಹುದು ಎಂದು ಜನರು ಸಂತೋಷದಿಂದ ಇದ್ದರು. ಆದರೆ ಇದೀಗ ರಸ್ತೆ ಹಾಳಾಗಿದ್ದು ವಾಹನ ಸಂಚಾರಕ್ಕೆ ಅಡೆತಡೆ ಆಗಿದೆ. ಈ ರಸ್ತೆ ದಾಟಿ ಹೋಗಬೇಕೆಂದರೆ ಹರಸಾಹಸ ಪಡಬೇಕು ಎಂದು ವಾಹನ ಸವಾರರು ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
5 ವರ್ಷದಿಂದ ರಸ್ತೆಗೆ ತೇಪೆ ಹಾಕುತ್ತಲೇ ಬಂದಿದ್ದಾರೆ. ಆದರೆ ಇದುವರೆಗೂ ರಸ್ತೆಗೆ ಒಂದು ಲೇಯರ್ ಡಾಂಬರ್ ಬಿದ್ದಿಲ್ಲ. 16 ಕಿಲೋ ಮೀಟರ್ ರಸ್ತೆ ವಾಹನ ಸವಾರರಿಗೆ ನರಕ ದರ್ಶನ ಮಾಡಿಸುತ್ತಿದೆ. ಮಳೆಗಾಲಕ್ಕೆ ಮುನ್ನವೇ ಗುಂಡಿ ಬಿದ್ದಿದ್ದ ಶಿವಮೊಗ್ಗ-ಭದ್ರಾವತಿ ನಡುವಿನ ರಸ್ತೆ ಈಗ ಸಂಪೂರ್ಣ ಕಿತ್ತು ಹೋಗಿದೆ. ರಸ್ತೆಯಲ್ಲ ಗುಂಡಿಮಯವಾಗಿದ್ದು, ವಾಹನ ಸವಾರರು ಪ್ರತಿನಿತ್ಯವೂ ಪರದಾಡುವಂತಾಗಿದೆ.
ನಡು ರಸ್ತೆಯಲ್ಲಿ ಸಿಲುಕಿಕೊಂಡ ಲಾರಿಗಳು: ಹಿರಿಯೂರು- ಶಿವಮೊಗ್ಗ ರಸ್ತೆ ಸಂಪರ್ಕ ಕಡಿತ
ತುಮಕೂರಿನಿಂದ ಶಿವಮೊಗ್ಗವರೆಗೆ ಚತುಷ್ಪಥ ರಸ್ತೆ ಕಾಮಗಾರಿ ಆರಂಭ ಆಗಿದ್ದು, ಇನ್ನೇನು ಅತ್ಯುತ್ತಮ ರಸ್ತೆ ಸೇವೆ ಸಿಗುತ್ತದೆ ಎಂಬ ಜನರ ನಿರೀಕ್ಷೆಯನ್ನು ಹುಸಿಯಾಗಿಸಿದೆ. ರಸ್ತೆಯಲ್ಲಿ ಗುಂಡಿ ಬಿದ್ದರೆ ಬರೀ ತೇಪೆ ಹಾಕುತ್ತಾರೆ ಅಷ್ಟೇ. ಈಗ ಮೂಲ ರಸ್ತೆ ಉಳಿದೇ ಇಲ್ಲ ಎಂದು ಜನರು ಆಕ್ರೋಶ ಹೊರಹಾಕುತ್ತಿದ್ದಾರೆ. ಹೀಗೆ 16 ಕಿಲೋ ಮೀಟರ್ ರಸ್ತೆಯಲ್ಲಿ ಲೆಕ್ಕ ಹಾಕದಷ್ಟು ಗುಂಡಿಗಳು ನಿರ್ಮಾಣವಾಗಿದ್ದು, ಇದು ವಾಹನ ಸವಾರರ ಕೆಂಗಣ್ಣಿಗೆ ಗುರಿಯಾದಂತಿದೆ.
ಹಳ್ಳ ಹಿಡಿದ ಬಿಎಸ್ವೈ ಕನಸಿನ ಹೈವೇ ನಿರ್ಮಾಣ
2010ರಲ್ಲಿ ಶಿವಮೊಗ್ಗ-ಭದ್ರಾವತಿ ನಡುವೆ ಕೈಗಾರಿಕೆ, ಐಟಿ ಪಾರ್ಕ್, ಗಾರ್ಮೆಂಟ್ಸ್ಗೆ ಹೋಗಿ ಬರಲು ಜನರಿಗೆ ಅನುಕೂಲವಾಗುವಂತೆ ಚತುಷ್ಪಥ ರಸ್ತೆ ಅಭಿವೃದ್ಧಿ ಮಾಡಲಾಗಿತ್ತು. ಅಲ್ಲಿಂದ ನಾಲ್ಕೈದು ವರ್ಷ ಮಾತ್ರ ರಸ್ತೆ ನಿರ್ವಹಣೆ ಮಾಡಲಾಗಿತ್ತು. ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಈ ರಸ್ತೆ ನಿರ್ಮಾಣ ಮಾಡಲಾಗಿತ್ತು. ಇದು ಅವರ ಕನಸಿನ ಯೋಜನೆಗಳಲ್ಲಿ ಒಂದಾಗಿತ್ತು. ಈ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಿದ್ದು, ತುಮಕೂರಿನಿಂದ ಶಿವಮೊಗ್ಗವರೆಗೂ ಚತುಷ್ಪಥ ರಸ್ತೆ ಮಾಡಲು ಯೋಜನೆ ಸಿದ್ಧವಾಗಿತ್ತು. ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾದ ಹಿನ್ನೆಲೆ ಕಾಮಗಾರಿ ಕುಂಟುತ್ತಾ ಸಾಗಿದೆ. ಯಡಿಯೂರಪ್ಪ ಅವರು ನಾಲ್ಕನೇ ಬಾರಿ ಸಿಎಂ ಆದ ಮೇಲೆ ಕಾಮಗಾರಿಗೆ ವೇಗ ನೀಡಿದರು. ಆದರೆ ರಾಷ್ಟೀಯ ಹೆದ್ದಾರಿ ನಿರ್ಮಾಣ ಆಗುತ್ತದೆ ಎಂದು ಜನರು ಖುಷಿಪಡಬೇಕೋ, ಇಂತಹ ರಸ್ತೆಯಲ್ಲಿ ಓಡಾಡುವಂತಾಗಿದೆಯಲ್ಲ ಎಂದು ದುಃಖ ಪಡಬೇಕೋ ಎನ್ನುವ ಪರಿಸ್ಥಿತಿ ನಿರ್ಮಾಣ ಆಗಿದೆ.
ಪಡುಬಿದ್ರಿ; ತಂದೆ, ಮಗನನ್ನು ಬಲಿ ಪಡೆದ ಲಾರಿ ಕ್ಲೀನರ್, ಆತಂಕಕಾರಿ ಮಾಹಿತಿ ಬಯಲು
ಚತುಷ್ಪಥ ರಸ್ತೆ ಕಾಮಗಾರಿಗೆ ಇಲ್ಲದ ತಯಾರಿ
ಚತುಷ್ಪಥ ರಸ್ತೆ ಕಾಮಗಾರಿಗೆ ಬೇಕಾದ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಜನವಸತಿ ಪ್ರದೇಶಗಳಲ್ಲಿ ಕಟ್ಟಡಗಳನ್ನು ತೆರವು ಮಾಡಿಲ್ಲ. ಜೇಡಿಕಟ್ಟೆ, ನಿಧಿಗೆ, ಮಾಚೇನಹಳ್ಳಿ, ಹರಿಗೆ, ಮಲವಗೊಪ್ಪದಲ್ಲಿ ಈವರೆಗೆ ಶೇಕಡಾ 10ರಷ್ಟು ಕಟ್ಟಡಗಳನ್ನು ತೆರವು ಮಾಡಿಲ್ಲ. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಒಂದು ಬದಿ ರಸ್ತೆ ಕಾಮಗಾರಿ ಆರಂಭ ಆಗುವುದಿಲ್ಲ. ಭೂಸ್ವಾಧೀನ ಪೂರ್ಣಗೊಂಡ ಬಳಿಕ ಕಾಮಗಾರಿ ಮುಗಿಸಲು ಕನಿಷ್ಠ ಒಂದು ವರ್ಷವಾದರೂ ಬೇಕಾಗುತ್ತದೆ. ಅಲ್ಲಿಯವರೆಗೂ ಶಿವಮೊಗ್ಗ - ಭದ್ರಾವತಿ ಅಷ್ಟೇ ಅಲ್ಲದೆ, ಬೇರೆ ಜಿಲ್ಲೆಗಳಿಂದ ಬರುವ ಜನರು ಇದೇ ಗುಂಡಿಬಿದ್ದ ರಸ್ತೆಯಲ್ಲಿ ಓಡಾಡಬೇಕಾ? ಎಂದು ಪ್ರಶ್ನಿಸುತ್ತಿದ್ದಾರೆ.
ಗುಂಡಿಬಿದ್ದ ರಸ್ತೆ, ವಾಹನ ಸವಾರರ ಪರದಾಟ
ರಸ್ತೆಯಲ್ಲಿರುವ ಗುಂಡಿಗಳನ್ನು ತಪ್ಪಿಸಲು ಹೋಗಿ ಅನೇಕ ಅಪಘಾತಗಳು ಆಗುತ್ತಿವೆ. ಅದರಲ್ಲೂ ಮಳೆಗಾಲ ಬಂತೆಂದರೆ ಸಾಕು ರಸ್ತೆಯಲ್ಲಿ ನೀರು ಸಂಗ್ರಹವಾಗುವುದರಿಂದ, ಯಾವುದು ಗುಂಡಿ, ಯಾವುದು ರಸ್ತೆ ಎಂಬುದೇ ತೋಚುವುದಿಲ್ಲ ಎಂದು ವಾಹನ ಸವಾರರು ಆತಂಕವನ್ನು ಹೊರಹಾಕಿದ್ದಾರೆ. ನಮ್ಮ ಕಷ್ಟಗಳಿಗೆ ಕೊನೆಯೇ ಇಲ್ಲವೇ? ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚಬೇಕು ಎಂದು ವಾಹನ ಸವಾರರು ಒತ್ತಾಯಿಸುತ್ತಿದ್ದಾರೆ. ಬೈಕ್ ಸವಾರರು ರಸ್ತೆ ಗುಂಡಿಗಳಿಗೆ ಬಿದ್ದು ಗಾಯ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಗುಂಡಿ ತಪ್ಪಿಸುವ ಭರದಲ್ಲಿ ಕೆಎಸ್ಆರ್ಟಿಸಿ ಬಸ್ ಹರಿಗೆ ಬಳಿ ಡಿವೈಡರ್ ಏರಿ ನಿಂತಿತ್ತು. ಅದೃಷ್ಟವಶಾತ್ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗಿಲ್ಲ. ಈ ಗುಂಡಿಬಿದ್ದ ರಸ್ತೆಯಿಂದ ಪ್ರತಿದಿನ ಬೈಕ್ ಸವಾರರು ಸೇರಿದಂತೆ ಇನ್ನಿತರ ವಾಹನ ಸವಾರರು ಆತಂಕಕ್ಕೆ ಒಳಗಾಗಿದ್ದಾರೆ.
ತೇಪೆ ಹಾಕಿದ್ರೂ ತಪ್ಪದ ಸಮಸ್ಯೆ
ತೇಪೆ ಹಾಕುವ ಮೂಲಕ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚುತ್ತಿದ್ದಾರೆ. ಆದರೆ ಕೆಲವು ದಿನಗಳ ಬಳಿಕ ಮತ್ತೆ ಗುಂಡಿಗಳು ನಿರ್ಮಾಣವಾಗಿಬಿಡುತ್ತವೆ. ಅಧಿಕಾರಿಗಳ ಬೇಜವಾಬ್ದಾರಿಯಿಂದ ರಸ್ತೆಯಲ್ಲಿ ಮತ್ತೆ ಮತ್ತೆ ಗುಂಡಿಗಳು ನಿರ್ಮಾಣವಾಗುತ್ತಿವೆ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಮಳೆ ಬಂದರೆ ಸಾಕು ರಸ್ತೆ ಸಂಪೂರ್ಣವಾಗಿ ಕಿತ್ತು ಬರುತ್ತದೆ. ಹೈವೇ ಪ್ರಾಧಿಕಾರದ ವತಿಯಿಂದ ಕಾಂಕ್ರೀಟ್ ಮಿಕ್ಸ್, ಜಲ್ಲಿ ಪೌಡರ್, ಡಾಂಬರ್ ಹಾಕಲಾಗುತ್ತಿದೆ. ಅದು ಏನೂ ಉಪಯೋಗ ಆಗುತ್ತಿಲ್ಲ. ಲಾರಿ, ಬಸ್ಗಳು ಯಾವುದೇ ಅಡಚಣೆ ಇಲ್ಲದೆ ಓಡಾಡುತ್ತಿದ್ದು, ಬೈಕ್, ಕಾರು ಸವಾರರು ಮಾತ್ರ ರಸ್ತೆಯಲ್ಲಿ ಪ್ರಯಾಣ ಮಾಡಲು ಹರಸಾಹಸಪಡಬೇಕಿದೆ.