ಉಪಚುನಾವಣೆ: ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಬಿ.ವೈ ರಾಘವೇಂದ್ರ ಸ್ಪರ್ಧೆ ಖಚಿತ
ಶಿವಮೊಗ್ಗ, ಅಕ್ಟೋಬರ್ 6: ನವೆಂಬರ್ 3ರಂದು ನಡೆಯಲಿರುವ ಶಿವಮೊಗ್ಗ ಲೋಕಸಭೆಯ ಉಪ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿ ಮಾಜಿ ಸಂಸದ ಬಿ.ವೈ. ರಾಘವೇಂದ್ರ ಮತ್ತೆ ಕಣಕ್ಕಿಳಿಯುವುದು ಖಚಿತವಾಗಿದೆ.
ಬಿ.ಎಸ. ಯಡಿಯೂರಪ್ಪ ಅವರ ರಾಜೀನಾಮೆಯಿಂದ ತೆರವಾಗಿದ್ದ ಲೋಕಸಭೆ ಸ್ಥಾನಕ್ಕೆ ನಡೆಯುವ ಉಪ ಚುನಾವಣೆಯಲ್ಲಿ ಬಿ.ವೈ. ರಾಘವೇಂದ್ರ ಅವರನ್ನೇ ಅಭ್ಯರ್ಥಿಯನ್ನಾಗಿ ನಿಲ್ಲಿಸಲು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ತೀರ್ಮಾನಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಈ ವಿಚಾರವನ್ನು ಸ್ವತಃ ಯಡಿಯೂರಪ್ಪ ಶನಿವಾರ ದೃಢಪಡಿಸಿದ್ದಾರೆ.
ಶಿಕಾರಿಪುರ ತಾಲ್ಲೂಕಿನ ಮಾರವಳ್ಳಿ ಗ್ರಾಮದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಯಡಿಯೂರಪ್ಪ, ಈ ಬಾರಿಯ ಲೋಕಸಭೆ ಉಪ ಚುನಾವಣೆಯಲ್ಲಿ ರಾಘವೇಂದ್ರ ಸ್ಪರ್ಧಿಸುತ್ತಿದ್ದು, ಅವರನ್ನು ಆಯ್ಕೆ ಮಾಡಿ ಕಳುಹಿಸಬೇಕು. ನಿಮ್ಮ ಆಶೀರ್ವಾದ ಬೇಕು ಎಂದು ಹೇಳಿಕೆ ನೀಡಿದ್ದಾರೆ.
ಇದರಿಂದ ಶಿವಮೊಗ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಖಚಿತವಾದಂತಾಗಿದೆ. ಅಂತಿಮವಾಗಿ ಬಿಜೆಪಿ ಹೈಕಮಾಂಡ್ ಕೂಡ ಯಡಿಯೂರಪ್ಪ ಅವರ ಆಸೆಗೆ ಬೆಂಬಲ ನೀಡಲಿದೆಯೇ ಎಂಬ ಕುತೂಹಲ ಮೂಡಿದೆ.
2009ರ ಲೋಕಸಭೆ ಚುನಾವಣೆಯಲ್ಲಿ ರಾಘವೇಂದ್ರ ಶಿವಮೊಗ್ಗ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾಗಿದ್ದರು.

ಮಗನನ್ನು ಗೆಲ್ಲಿಸಿಕೊಡಿ
ಮುಂಬರುವ ಉಪಚುನಾವಣೆಯಲ್ಲಿ ಮಗನನ್ನು ಅಧಿಕ ಮತಗಳ ಅಂತರದಿಂದ ಗೆಲ್ಲಿಸಿಕೊಡಬೇಕು ಎಂದು ಬಿ.ಎಸ್. ಯಡಿಯೂರಪ್ಪ ಜನರಲ್ಲಿ ಮನವಿ ಮಾಡಿದರು. ಮಾರವಳ್ಳಿ ಗ್ರಾಮದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಯಡಿಯೂರಪ್ಪ ಅವರೊಂದಿಗೆ ಬಿ.ವೈ. ರಾಘವೇಂದ್ರ ಅವರೂ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ವೇಳೆ ಮಾತನಾಡಿದ ಯಡಿಯೂರಪ್ಪ, ರಾಘವೇಂದ್ರ ಅಭ್ಯರ್ಥಿ ಎಂಬುದನ್ನು ನೇರವಾಗಿ ಹೇಳದೆ ಇದ್ದರೂ, ಉಪಚುನಾವಣೆಯಲ್ಲಿ ಮಗನನ್ನು ಗೆಲ್ಲಿಸಿಕೊಡಬೇಕು ಎಂದು ಹೇಳಿದ್ದು, ಅವರ ಸ್ಪರ್ಧೆಯನ್ನು ಖಚಿತಪಡಿಸಿದರು. ಈ ಮೂಲಕ ಚುನಾವಣೆಯ ಪ್ರಚಾರ ಕಾರ್ಯಕ್ಕೆ ಅಧಿಕೃತವಾಗಿಯೇ ಚಾಲನೆ ನೀಡಿದರು.

ಎರಡನೆಯ ಬಾರಿಗೆ ಸ್ಪರ್ಧೆ
ಬಿ ವೈ ರಾಘವೇಂದ್ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿರುವುದು ಇದು ಎರಡನೆಯ ಬಾರಿ. 2009ರ ಚುನಾವಣೆಯಲ್ಲಿ ಅವರು ಎಸ್. ಬಂಗಾರಪ್ಪ ಅವರ ವಿರುದ್ಧ 50 ಸಾವಿರಕ್ಕೂ ಅಧಿಕ ಮತಗಳಿಂದ ಸೋಲಿಸಿದ್ದರು. ಬಳಿಕ 2014ರ ಲೋಕಸಭೆ ಚುನಾವಣೆಗೆ ಅವರು ಕ್ಷೇತ್ರವನ್ನು ತಂದೆಗೆ ಬಿಟ್ಟುಕೊಟ್ಟಿದ್ದರು. ಆದರೆ, ಅದೇ ವರ್ಷ ಶಿಕಾರಿಪುರ ವಿಧಾನಸಭೆ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ 6,430 ಮತಗಳಿಂದ ಕಾಂಗ್ರೆಸ್ನ ಶಾಂತವೀರಪ್ಪ ಗೌಡ ಎದುರು ಜಯಗಳಿಸಿದ್ದರು. 2018ರ ವಿಧಾನಸಭೆ ಚುನಾವಣೆಯಲ್ಲಿ ಅವರು ಸ್ಪರ್ಧಿಸಿರಲಿಲ್ಲ.

ಮುಂದಿನ ಚುನಾವಣೆಗೂ ಸ್ಪರ್ಧೆ?
ಶಿವಮೊಗ್ಗ ಲೋಕಸಭೆಗೆ 2019ರಲ್ಲಿ ನಡೆಯಲಿರುವ ಚುನಾವಣೆಗೂ ಬಿವೈ ರಾಘವೇಂದ್ರ ಅವರೇ ಅಭ್ಯರ್ಥಿ ಎನ್ನಲಾಗಿದೆ. ಚುನಾವಣೆಗೆ ಅಂತಿಮ 28 ಅಭ್ಯರ್ಥಿಗಳ ಪಟ್ಟಿ ತಯಾರಿಸಿರುವ ಬಿಜೆಪಿ, ರಾಘವೇಂದ್ರ ಅವರ ಹೆಸರನ್ನು ಅಂತಿಮಗೊಳಿಸಿತ್ತು. ಆ ಸಂದರ್ಭದಲ್ಲಿಯೇ ರಾಘವೇಂದ್ರ, ಉಪಚುನಾವಣೆ ನಡೆಯುತ್ತದೆಯೋ ಅಥವಾ ಸಾರ್ವತ್ರಿಕ ಚುನಾವಣೆಯನ್ನೇ ನಡೆಸಲಾಗುವುದೋ ತಿಳಿದಿಲ್ಲ. ಎರಡರಲ್ಲಿಯೂ ಸ್ಪರ್ಧಿಸಲು ಅವಕಾಶ ಮಾಡಿಕೊಡಿ ಎಂದು ಮುಖಂಡರನ್ನು ಕೋರಿದ್ದರು.

ಫಲಿತಾಂಶದಿಂದ ನಿರ್ಧಾರ
ಶಿವಮೊಗ್ಗದಲ್ಲಿ ಈ ಉಪಚುನಾವಣೆಯಲ್ಲಿ ತೀವ್ರ ಪೈಪೋಟಿಯ ನಿರೀಕ್ಷೆಯಿದೆ. ಹೀಗಾಗಿ 2019ರ ಚುನಾವಣೆಯ ಫಲಿತಾಂಶದ ಮೇಲೆ ಉಪಚುನಾವಣೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ರಾಘವೇಂದ್ರ ಗೆಲುವು ಯಡಿಯೂರಪ್ಪ ಅವರಿಗೆ ಅನಿವಾರ್ಯವಾಗಲಿದೆ. ರಾಘವೇಂದ್ರ ನಿರಾಯಾಸ ಗೆಲುವು ಸಾಧಿಸಿದರೆ ಯಡಿಯೂರಪ್ಪ ನಿರಾಳರಾಗಲಿದ್ದಾರೆ. ಒಂದು ವೇಳೆ ಕಡಿಮೆ ಅಂತರದ ಗೆಲುವು ಅಥವಾ ಸೋಲಿನ ಆಘಾತ ಎದುರಾದರೆ 2019ರ ಚುನಾವಣೆಯಲ್ಲಿ ರಾಘವೇಂದ್ರ ಅವರನ್ನೇ ಮತ್ತೆ ಕಣಕ್ಕಿಳಿಸುವ ಸಾಹಸಕ್ಕೆ ಮುಂದಾಗುವುದು ಅನುಮಾನ. ಹೀಗಾದರೆ ಯಡಿಯೂರಪ್ಪ ಮತ್ತೆ ಸಂಸತ್ ಪ್ರವೇಶಿಸಲು ತಯಾರಿ ನಡೆಸಬಹುದು.












Click it and Unblock the Notifications