ಸುಳ್ಳೇ ಯಡಿಯೂರಪ್ಪ ಮನೆ ದೇವರು: ಶಿವಮೊಗ್ಗದಲ್ಲಿ ಸಿದ್ದರಾಮಯ್ಯ ಲೇವಡಿ
ಶಿವಮೊಗ್ಗ, ಅಕ್ಟೋಬರ್ 25: ಶಿವಮೊಗ್ಗ ಲೋಕಸಭೆ ಉಪಚುನಾವಣೆಗೆ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ಅವರ ಪರ ಗುರುವಾರ ಪ್ರಚಾರ ನಡೆಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಯಡಿಯೂರಪ್ಪ ಮತ್ತು ಕೆ.ಎಸ್. ಈಶ್ವರಪ್ಪ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕುರುಬ ಮಠದ ಕಟ್ಟುವ ಸಲುವಾಗಿ ನಡೆದ ಸಭೆಯಲ್ಲಿ ಕೆ.ಎಸ್. ಈಶ್ವರಪ್ಪ ಅವರೂ ಹಾಜರಿದ್ದರು. ಮಠ ನಿರ್ಮಾಣಕ್ಕೆ ಹಣ ಸಂಗ್ರಹ ಮಾಡಬೇಕು ಎಂಬ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ದುಡ್ಡು ಸಂಗ್ರಹ ಮಾಡಬೇಕಾಗುತ್ತದೆ ಎಂಬ ಕಾರಣಕ್ಕೆ ಎರಡನೆಯ ಸಭೆಗೆ ಅವರು ಚಕ್ಕರ್ ಹಾಕಿದ್ದರು.
ಬಳಿಕ ಎಲ್ಲವೂ ಮುಗಿದು ಮಠದ ಉದ್ಘಾಟನೆ ನಡೆದಾಗಲೂ ಅವರು ಅದಕ್ಕೆ ಹಾಜರಾಗಿರಲಿಲ್ಲ ಇಂಥ ಈಶ್ವರಪ್ಪ ನನ್ನ ಬಗ್ಗೆ ಮಾತನಾಡುತ್ತಾರೆ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.

ಯಡಿಯೂರಪ್ಪ ಸಂಸದ ಸ್ಥಾನಕ್ಕೆ ಏಕೆ ರಾಜೀನಾಮೆ ನೀಡಿದರು? ಅವರು ಈಗಾಗಲೇ ಅಧಿಕಾರ ಮತ್ತು ಹಣದ ರುಚಿ ನೋಡಿದ್ದಾರೆ. ಯಡಿಯೂರಪ್ಪ ಮತ್ತು ಈಶ್ವರಪ್ಪ ಇಬ್ಬರೂ ಆಸ್ತಿ ಮಾಡಲು ಮುಗಿಬಿದ್ದಿದ್ದಾರೆ. ತಮ್ಮದೇ ಇಷ್ಟೆಲ್ಲ ಕಥೆ ಇಟ್ಟುಕೊಂಡು ನನ್ನ ಬಗ್ಗೆ ಮಾತನಾಡುವ ಈಶ್ವರಪ್ಪಗೆ ಮೆದುಳೇ ಇಲ್ಲ ಎಂದು ವ್ಯಂಗ್ಯವಾಡಿದರು.
ಈಶ್ವರಪ್ಪನವರು ಒಂದು ಕಥೆಯಾದರೆ, ಯಡಿಯೂರಪ್ಪ ಅವರದ್ದು ಇನ್ನೊಂದು ಕಥೆ. ಯಡಿಯೂರಪ್ಪ ಅವರ ಮಾತನ್ನು ಎಷ್ಟು ಬಾರಿ ನಂಬುತ್ತೀರಾ? ಸುಳ್ಳು ಭರವಸೆ ನೀಡಿಯೇ ಅವರು ಗೆದ್ದಿದ್ದಾರೆ. ಸುಳ್ಳೇ ಅವರ ಮನೆ ದೇವರು.
ಈ ಉಪಚುನಾವಣೆ ಯಾರಿಗೂ ಇಷ್ಟವಿಲ್ಲ. ಚುನಾವಣೆ ಬರಲು ಯಡುಯೂರಪ್ಪ ಅವರೇ ಕಾರಣ. ತಾವು ಸಿಎಂ ಆಗಬೇಕು ಎಂಬ ಆಸೆಯೊಂದಿಗೆ ಅವರು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದರು ಎಂದು ಆರೋಪಿಸಿದರು.
ಕಾಗಿನೆಲೆ ಗುರು ಪೀಠದ ಉದ್ಘಾಟನೆಯ ಆಹ್ವಾನ ಪತ್ರಿಕೆ ನೀಡಲು ಹೋದಾಗ ಬಂಗಾರಪ್ಪ ನಮಗೆ ಹಣ ನೀಡಲು ಮುಂದೆ ಬಂದಿದ್ದರು. ಅವರು ಎಲ್ಲ ಸಮಾಜಗಳನ್ನು ಗೌರವಿಸುತ್ತಿದ್ದರು. ಬರಗಾಲ ಬಂದಾಗ ಎಲ್ಲ ವರ್ಗದವರಿಗೆ ಬಿತ್ತನೆ ಬೀಜ, ಗೊಬ್ಬರ ನೀಡಿದ್ದರು. ಅವರು ನಿಜವಾದ ನಾಯಕ.
ರೈತ ನಾಯಕ ಎಂದು ಬಿಂಬಿಸಿಕೊಳ್ಳುತ್ತಿರುವ ಯಡಿಯೂರಪ್ಪ ಈ ಕೆಲಸ ಎಂದಾದರೂ ಮಾಡಿದ್ದಾರಾ? ಚೆಕ್ ಮೂಲಕ ಲಂಚ ಪಡೆದವರು ಯಡಿಯೂರಪ್ಪ. ಅಂತಹವರಿಂದ ನಾವು ಪ್ರಾಮಾಣಿಕತೆಯ ಕುರಿತಾದ ಮಾತು ಕೇಳಬೇಕಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.












Click it and Unblock the Notifications